ಮೈಸೂರು: "ಮುಡಾ ಪ್ರಕರಣದ ಆರೋಪಿಗಳಾದ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರ ವಿರುದ್ಧ ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಪೊಲೀಸರು, ಕೋರ್ಟ್ಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯನ್ನು ಪಡೆದುಕೊಂಡಿದ್ದು, ಕೂಲಂಕಷವಾಗಿ ಪರಿಶೀಲನೆ ನಡೆಸಿ ಮಾರ್ಚ್ 7ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ತನಿಖಾ ವರದಿ ತಿರಸ್ಕರಿಸುವಂತೆ ಕೋರಿ ಅರ್ಜಿ ಸಲ್ಲಿಸುತ್ತೇನೆ" ಎಂದು ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ (ಸೋಮವಾರ) ನ್ಯಾಯಾಲಯಕ್ಕೆ ಹೋಗಿ, ಲೋಕಾಯುಕ್ತರು ಮುಡಾ ಪ್ರಕರಣದ ಸಂಬಂಧ ಸಲ್ಲಿಸಿರುವ ತನಿಖಾ ವರದಿಯ ಪ್ರತಿ ನೀಡುವಂತೆ ಮನವಿ ಮಾಡಿದ್ದೆ. ನಿನ್ನೆ ಲೋಕಾಯುಕ್ತರು ಅಂತಿಮ ವರದಿಯ ಕೆಲ ಪ್ರತಿಗಳನ್ನು ಮಾತ್ರ ನೀಡಿದ್ದು, ಮಾರ್ಚ್ 1ರ ಒಳಗೆ ಸಂಪೂರ್ಣ ತನಿಖಾ ವರದಿಯ ಪ್ರತಿ ನೀಡುವುದಾಗಿ ತಿಳಿಸಿದ್ದಾರೆ" ಎಂದರು.