ಮಂಗಳೂರು: ವಿಧಾನಸೌಧದಲ್ಲಿ ನಾಯಿಗಳ ಹಾವಳಿ ತಪ್ಪಿಸಲು ಎನ್ಜಿಒ ಸಹಕಾರದಿಂದ ಜಾಗ ಗುರುತಿಸಲಾಗಿದ್ದು, ಶೆಲ್ಟರ್ ಕಟ್ಟಲಾಗುತ್ತಿದೆ. ಪಿಡಬ್ಲ್ಯುಡಿಯಿಂದ ಶೆಲ್ಟರ್ ಕಾಮಗಾರಿ ನಡೆಯುತ್ತಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿಂದು ಮಾತನಾಡಿದ ಅವರು, ವಿಧಾನಸೌಧದಲ್ಲಿ ಸದ್ಯ 52 ನಾಯಿಗಳಿದ್ದು, ಮರಿಗಳು ಹುಟ್ಟದಂತೆ ಎಲ್ಲಾ ನಾಯಿಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತದೆ. ಇರುವ ನಾಯಿಗಳನ್ನು ಶೆಲ್ಟರ್ನಲ್ಲಿಟ್ಟು ಎಲ್ಲೂ ಅಡ್ಡಾಡದಂತೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಿ ಅಲ್ಲಿಯೇ ಅಡ್ಡಾಡಲು ವ್ಯವಸ್ಥೆ ಮಾಡಲಾಗುತ್ತದೆ. ಶ್ವಾನಗಳ ಖರ್ಚು-ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಈ ಬೀದಿನಾಯಿಗಳಿಗೆ ಪ್ರತ್ಯೇಕ ವಸತಿ ಮಾಡಿಕೊಟ್ಟು, ಊಟೋಪಚಾರ ನೀಡಿ ಸಲಹಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಶ್ವಾನಗಳ ಜೀವಿತಾವಧಿ 12 ವರ್ಷಗಳು. ಈಗ ಗುರುತಿಸಲಾಗಿರುವ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ವಿಧಾನಸೌಧದ ಆವರಣದೊಳಗೆ ಪ್ರತ್ಯೇಕ ಶೆಡ್ ಮಾಡಿ ಸಾಕಲು ಏಜೆನ್ಸಿ ನೇಮಕ ಮಾಡಲಾಗುತ್ತದೆ. ಅವುಗಳಿಗೆ ಅಲ್ಲೇ ತಿರುಗಾಟಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಕಾಲಕ್ರಮೇಣ ಅಲ್ಲಿನ ಬೀದಿ ನಾಯಿಗಳ ಸಂತತಿ ಕಡಿಮೆಯಾಗುತ್ತಾ ಸಮಸ್ಯೆ ನೀಗಲಿದೆ. ಅಲ್ಲಿಯವರೆಗೆ ಈಗಿರುವ ಶ್ವಾನಗಳಿಗೆ ಸರ್ವ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಮಂಗಳೂರಿನ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಅಧಿಕಾರಿಗಳು ತಪ್ಪನ್ನು ಒಬ್ಬರ ಮೇಲೊಬ್ಬರು ಆರೋಪ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಜನರಿಗೆ ಕಡಿಮೆ ಹಣದಲ್ಲಿ ಮರಳು ಸಿಗಬೇಕೇ ಎನ್ನುವುದಷ್ಟೇ ನಮ್ಮ ಉದ್ದೇಶ. ಇದನ್ನು ನಿಭಾಯಿಸುವ ಕಾರ್ಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಯಿಂದ ಆಗಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ತಲೆನೋವನ್ನು ಕಡಿಮೆ ಮಾಡಬೇಕೇ ವಿನಃ ಅವರ ತಲೆನೋವನ್ನು ಜನಪ್ರತಿನಿಧಿಗಳ ತಲೆಗೆ ಹಾಕಬಾರದು ಎಂದರು.
ಹಿಂದೆ ನಾನು ಉಸ್ತುವಾರಿ ಸಚಿವನಾಗಿದ್ದಾಗ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಜನರಿಗೆ ನಿಗದಿತ ಸಮಯಕ್ಕೆ ಕಡಿಮೆ ದರದಲ್ಲಿ ಮರಳು ಸಿಕ್ಕುವ ಹಾಗೆ ಮಾಡಿದ್ದೆ. ಸುಮಾರು ಒಂದುವರೆ ವರ್ಷಗಳ ಕಾಲ ನಿರಾತಂಕವಾಗಿ ಮರಳು ಪೂರೈಕೆಯಾಗುತ್ತಿತ್ತು. ನನ್ನ ಉಸ್ತುವಾರಿ ಅವಧಿ ಮುಗಿದ ಬಳಿಕ ಅದನ್ನು ತೆಗೆದುಹಾಕಲಾಯಿತು. ಅದೇ ಕ್ರಮವನ್ನು ಮುಂದುವರಿಸಿದಲ್ಲಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯೇ ಇರೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕೋಟೆಕಾರ್ ಬ್ಯಾಂಕ್ ದರೋಡೆ: ಒಂದು ತಿಂಗಳ ಬಳಿಕ ಪ್ರಮುಖ ಆರೋಪಿ ಸೇರಿ ಇಬ್ಬರು ಸೆರೆ