ಕರ್ನಾಟಕ

karnataka

ETV Bharat / state

ಕುಮಟಾದಲ್ಲಿ ಹೊಸ್ತು ಹಬ್ಬ ಸಂಭ್ರಮಿಸಿದ ರೈತರು: ಗದ್ದೆಗೆ ತೆರಳಿ ಪೈರಿಗೆ ವಿಶೇಷ ಪೂಜೆ

ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ವಿಶೇಷ ಹೊಸ್ತು ಹಬ್ಬವನ್ನು ಕರಾವಳಿ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

hostu habba
ಹೊಸ್ತು ಹಬ್ಬದ ಸಂಭ್ರಮ (ETV Bharat)

By ETV Bharat Karnataka Team

Published : 4 hours ago

ಕಾರವಾರ: ಪ್ರಕೃತಿಯಲ್ಲೂ ದೇವರನ್ನು ಕಾಣುವ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಆಚರಣೆಗಳು ಇಂದಿಗೂ ರೂಢಿಯಲ್ಲಿವೆ. ಕೆಲವು ಸಂಪ್ರದಾಯಗಳು ಆಧುನಿಕತೆಯ ಭರಾಟೆಯಲ್ಲಿ ಈಗ ಮರೆಯಾಗಿದ್ದರೂ, ಕೆಲವೆಡೆ ಸಂಪ್ರದಾಯಗಳನ್ನು ಚಾಚೂತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿಯೂ ಕರಾವಳಿಯಲ್ಲಿ ಆಚರಿಸಲಾಗುವ ಹೊಸ್ತು ಹಬ್ಬ ಹಲವು ವಿಶೇಷತೆಗಳಿಂದ ಕೂಡಿದ್ದು, ತಾವು ಬೆಳೆದ ಪೈರಿಗೆ ಮನೆ ಮಂದಿಯೆಲ್ಲ ಸೇರಿ ಪೂಜೆ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಒಟ್ಟು ಸೇರಿ ಇಂದು ಹೊಸ್ತಿನ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸುವಂತಿಲ್ಲ. ನೂರಾರು ವರ್ಷಗಳಿಂದ ಈ ಭಾಗದ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಇದನ್ನು ಹರಣ ಮೂರ್ತ, ಹೊಸ ಧಾನ್ಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಕದಿರು ಕೊಯ್ಯುತ್ತಿರುವುದು (ETV Bharat)

ಹಬ್ಬದ ದಿನದಂದು ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಈ ಹಬ್ಬಕ್ಕಾಗಿಯೇ ಮೀಸಲಾಗಿಡುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರುತ್ತಾರೆ. ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಂಡರು. ಪ್ರತಿವರ್ಷ ವಿಜಯದಶಮಿಯಂದು ಹಬ್ಬ ಆಚರಿಸಲಾಗುತ್ತದೆ. ಅಂದು ಆಚರಿಸಲಾಗದೆ ಇದ್ದರೆ, ಗಂಗಾಷ್ಠಮಿಯಂದು ಆಚರಣೆ ಮಾಡಲಾಗುತ್ತದೆ. ಈ ಸಲ ವಿಜಯ ದಶಮಿಯಂದು ಆಚರಿಸದ ಹಿನ್ನಲೆಯಲ್ಲಿ ಗಂಗಾಷ್ಠಮಿಯಂದು ಹಬ್ಬ ನಡೆಯಿತು ಎನ್ನುತ್ತಾರೆ ಅರ್ಚಕ ಭಾಸ್ಕರ್ ದೇಸಾಯಿ.

ಧಾನ್ಯಲಕ್ಷ್ಮಿ ನೆಲೆಸಲಿ ಎಂದು ಪ್ರಾರ್ಥನೆ: ಹಬ್ಬದಂದು ಗ್ರಾಮ ದೇವತೆಗಳಾದ ಯಜಮಾನ, ಘಟಭೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಾರೆ‌. ಬಳಿಕ ಹೊಸ್ತಿನ ಹಬ್ಬಕ್ಕೆ ಮೀಸಲಾಗಿಡುವ ಗದ್ದೆಗೆ ಆರ್ಚಕರು ಹಾಗೂ ಗ್ರಾಮದ ಜನರು ತೆರಳಿ ಕದಿರು ಕೊಯ್ಯಲಾಗುತ್ತದೆ. ನಂತರ ಪ್ರತಿಯೊಬ್ಬರೂ ತಲೆಯ ಮೇಲೆ ಕದಿರು ಹೊತ್ತು ಅವರವರ ಮನೆಗೆ ತೆರಳುತ್ತಾರೆ. ಮನೆಯಲ್ಲಿ ಸದಾ ಧಾನ್ಯ ಲಕ್ಷ್ಮಿ ನೆಲೆಸಬೇಕು ಎಂಬ ಪ್ರಾರ್ಥನೆಯೊಂದಿಗೆ ದೇವಸ್ಥಾನದಿಂದ ಮನೆಗೆ ತರಲಾದ ಕದಿರನ್ನು ತಮ್ಮ ತಮ್ಮ ಮನೆಯ ಬಾಗಿಲು, ಕೃಷಿ ಉಪಕರಣಗಳಿಗೆ ಕಟ್ಟಿ ಹಬ್ಬವನ್ನು ಆಚರಿಸಲಾಗುತ್ತದೆ.

ಅನಾದಿ ಕಾಲದಿಂದಲೂ ಕುಮಟಾದ ಬರ್ಗಿ ಹಾಗೂ ಇತರ ಗ್ರಾಮಗಳಲ್ಲಿ ಈ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಸೊಡಗಿನೊಂದಿಗೆ ವಿಶೇಷ ಅರ್ಥಗಳನ್ನು ಹೊಂದಿರುವ ಈ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಯೂ ನಡೆಸಿಕೊಂಡು ಹೋಗಬೇಕಿದೆ.

ಇದನ್ನೂ ಓದಿ:ಗರ್ಭ ಗುಡಿ ಬಾಗಿಲು ಓಪನ್​ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ

ABOUT THE AUTHOR

...view details