ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಮಾನನಷ್ಟ ಪ್ರಕರಣದ ಕಾನೂನು ಸಮರದಲ್ಲಿ ಹೈಕೋರ್ಟ್ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಮುಂದಿನ ವಿಚಾರಣೆವರೆಗೂ ತಡೆ ನೀಡಿ ಆದೇಶಿಸಿದೆ.
ಅಲ್ಲದೆ, ಮತ್ತೊಮ್ಮೆ ರಾಜಿ ಸಂಧಾನಕ್ಕೆ ಪ್ರಯತ್ನ ಮಾಡುವಂತೆ ನ್ಯಾಯಾಲಯ ಇಬ್ಬರೂ ಅಧಿಕಾರಿಗಳ ಪರ ವಕೀಲರಿಗೆ ಇದೇ ವೇಳೆ ಮೌಖಿಕ ಸಲಹೆ ನೀಡಿತು.
ರೂಪಾ ಡಿ.ಮೌದ್ಗಿಲ್ ತಮ್ಮ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಪಡಿಸಬೇಕು ಮತ್ತು ಈ ಸಂಬಂಧದ ವಿಚಾರಣಾ ನ್ಯಾಯಾಯದ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸಿಂಧೂರಿ ಪರ ವಕೀಲರು, ''ರೋಹಿಣಿ ಸಿಂಧೂರಿ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿದ್ದ ರೂಪಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಹಾಗಾಗಿ, 2023ರಲ್ಲಿ ರೋಹಿಣಿ ವಿರುದ್ಧ ರೂಪಾ ಮಾನಹಾನಿ ದಾವೆ ಹೂಡಿದ್ದಾರೆ. ರೋಹಿಣಿ ಮಾಧ್ಯಮ ಹೇಳಿಕೆ ಆಧರಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಪ್ರೇಟ್ ಪ್ರತಿದಿನ ವಿಚಾರಣೆ ನಡೆಸಿ ಸಂಜ್ಞೆ ಪರಿಗಣಿಸಿದ್ದಾರೆ. ಇಷ್ಟು ತುರ್ತು ಏನಿದೆ?'' ಎಂದು ಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ:ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ ಡಿ.ರೂಪಾ ಅವರು ಬೆಂಗಳೂರಿನ 7ನೇ ಎಸಿಎಂಎಂನಲ್ಲಿ ಖಾಸಗಿ ಮಾನನಷ್ಟ ದೂರು ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಿತ್ತು. 2023ರ ಫೆಬ್ರವರಿ 19ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಂತರ ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಆ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಅವರ ಅವಹೇಳನಕಾರಿ ಹೇಳಿಕೆ ನಂತರ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. 6 ತಿಂಗಳವರೆಗೆ ಸಂಬಳ ನೀಡದೇ, ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ಅವರ ಹೇಳಿಕೆಯಿಂದ, ತಂಗಿ, ಪತಿ, ಮಕ್ಕಳಿಗೂ ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ಆರೋಪಿಸಿ ಮಾನನಷ್ಡ ದೂರು ದಾಖಲಿಸಿದ್ದರು.
ಇಬ್ಬರೂ ಅಧಿಕಾರಿಗಳ ನಡುವೆ ನಡೆಯುತ್ತಿರುವ ಕಾನೂನು ಸಮರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ರಾಜಿ ಸಂಧಾನಕ್ಕೆ ಸೂಚಿಸಿತ್ತು. ಇಬ್ಬರೂ ಒಪ್ಪದ ಹಿನ್ನೆಲೆಯಲ್ಲಿ ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ:ಟೆಕ್ಕಿ ಅತುಲ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪ್ರಕರಣ ರದ್ದು ಕೋರಿದ್ದ ಅರ್ಜಿ ಹಿಂಪಡೆದ ಪತ್ನಿ