ಕರ್ನಾಟಕ

karnataka

ನಟಿ ಸಂಜನಾ ಗಲ್ರಾಣಿ ಮತ್ತಿತರರ ವಿರುದ್ಧ ಮಾದಕ ದ್ರವ್ಯ ಸೇವನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - High Court

By ETV Bharat Karnataka Team

Published : Jun 25, 2024, 10:53 AM IST

2020ರ ಮಾದಕ ದ್ರವ್ಯ ಸೇವನೆ ಆರೋಪ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾಣಿ ಸೇರಿದಂತೆ ಉದ್ಯಮಿ ಶಿವಪ್ರಕಾಶ್ ಮತ್ತು ಆದಿತ್ಯ ಮೋಹನ್​ ಅಗರ್ವಾಲ್​ಗೆ ಬಿಗ್​ ರಿಲೀಫ್​ ಸಿಕ್ಕಿದೆ.

ನಟಿ ಸಂಜನಾ ಗಲ್ರಾಣಿಗೆ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್
ನಟಿ ಸಂಜನಾ ಗಲ್ರಾಣಿಗೆ ಬಿಗ್​ ರಿಲೀಫ್ ನೀಡಿದ ಹೈಕೋರ್ಟ್ (ETV Bharat)

ಬೆಂಗಳೂರು:ಮಾದಕ ದ್ರವ್ಯ ಸೇವನೆ ಆರೋಪದಲ್ಲಿ ನಟಿ ಸಂಜನಾ ಗಲ್ರಾಣಿ ಸೇರಿದಂತೆ ಉದ್ಯಮಿ ಶಿವಪ್ರಕಾಶ್ ಮತ್ತು ಆದಿತ್ಯ ಮೋಹನ್​ ಅಗರ್ವಾಲ್​ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್​ ರದ್ದುಗೊಳಿಸಿ ಆದೇಶಿಸಿದೆ.

ತಮ್ಮ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಸಂಜನಾ ಗಲ್ರಾಣಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ಧ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹಾಗೇ ಸಂಜನಾ ವಿರುದ್ಧದ ಆರೋಪದ ಸ್ವರೂಪವನ್ನು ಹೊತ್ತಿದ್ದ ವೀರೇಂದ್ರ ಖನ್ನಾ ಎಂಬುವರ ವಿರುದ್ಧ ಹೈಕೋರ್ಟ್​ನ ಮತ್ತೊಂದು ಪೀಠ ಪ್ರಕರಣವನ್ನು ರದ್ದುಗೊಳಿಸಿತ್ತು.

ಸಂಜನಾ ವಿರುದ್ದ 2020ರ ಏಪ್ರಿಲ್ ಮತ್ತು ಸೆಪ್ಟಂಬರ್ ನಡುವೆ ನಡೆದ ಆರೋಪಗಳ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್ಐಆರ್​ನಲ್ಲಿ 2015, 2018 ಮತ್ತು 2019ರಲ್ಲಿ ನಡೆದ ಆರೋಪಗಳನ್ನು ಸೇರಿಸಲಾಗಿದೆ. ಈ ಪ್ರಕ್ರಿಯೆ ಕಾನೂನು ಬಾಹಿರ ಎಂದು ಪೀಠ ತಿಳಿಸಿದೆ.

ಜತೆಗೆ, ಪ್ರತಿಯೊಂದು ಪ್ರಕರಣಕ್ಕೂ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕಾಗಿತ್ತು. ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್ 219(1)ರ ಪ್ರಕಾರ ಅರ್ಜಿದಾರರ ವಿರುದ್ಧದ ಹಿಂದಿನ ಆರೋಪಗಳ ಸಂಬಂಧ 2020ರಲ್ಲಿ ದಾಖಲಿಸಿರುವ ಎಫ್‌ಐಆರ್‌ನೊಂದಿಗೆ ತನಿಖೆ ನಡೆಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರೆಸುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ನಗರದ ವಿವಿಧ ಹೋಟೆಲ್‌ಗಳಲ್ಲಿ ಮಾದಕ ದ್ರವ್ಯ ಸೇವನೆ ಮಾಡುತ್ತಿರುವ ಮಾಹಿತಿಯ ಆಧಾರದಲ್ಲಿ ಡಿಜೆಗಳ ನಡೆಸುತ್ತಿದ್ದ ಹೋಟೆಲ್ ಮತ್ತು ಪಬ್‌ಗಳ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರರ ಸೇರಿದಂತೆ ಇತರ ಹಲವು ಮಂದಿಯ ವಿರುದ್ಧ ಮಾದಕ ದ್ರವ್ಯ ಸೇವನೆ ಆರೋಪದಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 2020ರ ಸೆ.4 ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಅದರಂತೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಕಾನೂನು ಬಾಹಿರವಾಗಿ ಗರ್ಭಪಾತ; ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ - High Court

ABOUT THE AUTHOR

...view details