ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವನ್ನು 47 ಸೆಕೆಂಡ್ಗೆ ಇಳಿಸುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದ ಐಐಟಿ ಪದವೀಧರನ ವಿರುದ್ಧ ರೈಲ್ವೆ ಇಲಾಖೆ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಔರಂಗಾಬಾದ್ನ ಗೌರವ್ ಢಾಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರೈಲ್ವೆ ಕಾಯ್ದೆ ಸೆಕ್ಷನ್ 143ರ ಅನ್ವಯ ಅಕ್ರಮವಾಗಿ ರೈಲ್ವೆ ಟಿಕೆಟ್ ಖರೀದಿ ಮತ್ತು ವಿತರಣೆ ಆರೋಪದಡಿ ಹೊರಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.
ಅಲ್ಲದೆ, ಅರ್ಜಿದಾರರು ಟಿಕೆಟ್ ಖರೀದಿಸಿಲ್ಲ ಅಥವಾ ಟಿಕೆಟ್ ಪೂರೈಕೆ ಮಾಡಿಲ್ಲ. ಅವರು ಐಆರ್ಸಿಟಿಸಿಯ ವೆಬ್ಸೈಟ್ ಅನ್ನು ಎಕ್ಸ್ಟೆಂಡ್ ಮಾಡಿದ್ದಾರೆ. ಅದರಲ್ಲಿ ಸಂಭಾವ್ಯ ಪ್ರಯಾಣಿಕರು ತತ್ಕಾಲ್ನಲ್ಲಿ ಟಿಕೆಟ್ ಬುಕ್ ಮಾಡಲು ತಗಲುತ್ತಿದ್ದ ಸಮಯ 7 ನಿಮಿಷದಿಂದ 40 ಸೆಕೆಂಡ್ಗೆ ಇಳಿಕೆಯಾಗಲಿದೆ. ಇದು ಖಂಡಿತವಾಗಿಯೂ ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ಐಐಟಿ ಪದವೀಧರರೂ ಆಗಿರುವ ಅರ್ಜಿದಾರರು ಸ್ಟಾರ್ಟಪ್ವೊಂದರ ಸಂಸ್ಥಾಪಕರು. ಅವರು ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಕನಿಷ್ಠ 5ರಿಂದ 7 ನಿಮಿಷ ಹಿಡಿಯುತ್ತಿದ್ದರಿಂದ ಅದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಬೇಕೆಂಬ ಅಲೋಚನೆಯೊಂದಿಗೆ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದರು. ಅದರಲ್ಲಿ ಕೇವಲ 47 ಸೆಕೆಂಡ್ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿತ್ತು.
ಅರ್ಜಿದಾರರು 2020ರ ಆರಂಭದಲ್ಲಿ ಉಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಡುತ್ತಿದ್ದರು. ನಂತರ ಅವರು ಹೆಚ್ಚಿನ ಟಿಕೆಟ್ ಬುಕಿಂಗ್ಗೆ 30 ರೂ. ಶುಲ್ಕ ವಿಧಿಸುತ್ತಿದ್ದರು. ಹಾಗಾಗಿ, ರೈಲ್ವೆ ಇಲಾಖೆ ಅವರ ವಿರುದ್ಧ 2020ರ ಸೆ.29ರಂದು ಮೊದಲಿಗೆ ನೋಟಿಸ್ ನೀಡಿತ್ತು. ನಂತರ ರೈಲ್ವೆ ಕಾಯ್ದೆ ಸೆಕ್ಷನ್ 143ರ ಅನ್ವಯ ಅಕ್ರಮವಾಗಿ ರೈಲ್ವೆ ಟಿಕೆಟ್ ಖರೀದಿ ಮತ್ತು ವಿತರಣೆ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ರೈಲ್ವೆ ಪೊಲೀಸರು ತನಿಖೆ ನಡೆಸಿ ಮೂರು ವರ್ಷದ ನಂತರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಹಾಗಾಗಿ, ಅವರು ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.