ಕರ್ನಾಟಕ

karnataka

ಮಾಲೂರು ವಿಧಾನಸಭಾ ಚುನಾವಣೆ ಮತ ಎಣಿಕೆಯ ವಿಡಿಯೋ ಕುರಿತ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ - Malur Assembly Election

By ETV Bharat Karnataka Team

Published : Sep 11, 2024, 8:02 AM IST

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಂಗಳವಾರ ಕೋರ್ಟ್‌ ವಿಚಾರಣೆ ನಡೆಸಿತು.

high court
ಹೈಕೋರ್ಟ್​ (ETV Bharat)

ಬೆಂಗಳೂರು: ಮಾಲೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್ ಡಿಸ್ಕ್ ಅನ್ನು ಮೆ.ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ನಡೆಸಿ ಈ ಸೂಚನೆ ನೀಡಿದೆ.

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ನಾಪತ್ತೆಯಾಗಿರುವ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಹಾಲಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಅವರಿಗೆ ಆ.27ರಂದು ಹೈಕೋರ್ಟ್ ಸೂಚಿಸಿತ್ತು.

ಅದರಂತೆ, ಮಂಗಳವಾರ ವಿಚಾರಣೆ ವೇಳೆ ವೆಂಕಟರಾಜು ಪರ ವಕೀಲರು ಹಾಜರಾಗಿ, ಮೆ.ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಏಜೆನ್ಸಿಗೆ ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಿ ಕೊಡಲು ಗುತ್ತಿಗೆ ನೀಡಲಾಗಿತ್ತು. ತಾನು ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಿದ್ದು, ಅದರ ವಿಡಿಯೋ ಒಳಗೊಂಡ ಹಾರ್ಡ್‌ಸಿಡ್ಕ್ ಅನ್ನು ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ನೀಡಿದ್ದೇನೆ. ತನಗೆ ವಹಿಸಿದ ಜವಾಬ್ದಾರಿ ಪೂರ್ಣಗೊಳಿಸಿರುವ ಬಗ್ಗೆ ಡಿಇಒಯಿಂದ ಸ್ವೀಕೃತಿ ಪತ್ರ ಸಹ ಪಡೆದಿದ್ದೇನೆ ಎಂಬುದಾಗಿ ವಿವರ ನೀಡಿ ಏಮೆನ್ಸಿಯು ಪತ್ರ ಬರೆದಿದೆ. ಆದರೆ, ಆ ಸ್ವೀಕೃತಿ ಪ್ರತಿಯ ದಾಖಲೆ ಡಿಇಒ ಕಚೇರಿಯಲ್ಲಿ ಇಲ್ಲ ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಹಾರ್ಡ್ ಡಿಸ್ಕ್ ಸ್ವೀಕರಿಸಿ ಏಜೆನ್ಸಿಗೆ ಸ್ವೀಕೃತಿ ಪತ್ರ ವಿತರಿಸಿದ್ದರೆ. ಅದರ ಪ್ರತಿಯನ್ನು ಡಿಇಒ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಏಜೆನ್ಸಿ ಸಹ ಹಾರ್ಡ್‌ಡಿಸ್ಕ್ ಅನ್ನು ಡಿಇಒಗೆ ನೀಡಿ ಅವರಿಂದ ಪಡೆದಿರುವ ಸ್ವೀಕೃತಿಯ ಪ್ರತಿ ಸಲ್ಲಿಸಬೇಕು. ಡಿಇಒ ಅವರು ಏಜೆನ್ಸಿ ಅವರನ್ನು ಕರೆದು ಸ್ವೀಕೃತಿ ಪ್ರತಿ ಒದಗಿಸುವಂತೆ ಕೇಳಹುದು. ಈ ಎಲ್ಲಾ ಪ್ರಕ್ರಿಯೆ ಕುರಿತು ವಿವರಣೆ ನೀಡಿ ವೆಂಕಟರಾಜು ಅವರು ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

ಇದನ್ನೂ ಓದಿ:ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿಡಿಯೋ ನಾಪತ್ತೆ : ಪ್ರಮಾಣಪತ್ರ ಸಲ್ಲಿಸಲು ಅಂದಿನ ಚುನಾವಣಾಧಿಕಾರಿಗೆ ಹೈಕೋರ್ಟ್ ಸೂಚನೆ - Video Missing

ABOUT THE AUTHOR

...view details