ಶಿವಮೊಗ್ಗ : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಕಾರ್ಮಿಕ ವಿಭಾಗದವರು ದುರ್ಗಿಗುಡಿಯ ಪಂಚಮುಖಿ ಆಂಜನೇಯ ದೇವಾಲಯದಲ್ಲಿಂದು ವಿಶೇಷ ಪೂಜೆ ನೆರವೇರಿಸಿದರು.
ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ನಟ ಶಿವಣ್ಣನ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿದರು. ಈ ವೇಳೆ ಅಭಿಮಾನಿಗಳು ನಟ ಶಿವರಾಜಕುಮಾರ್ ಚಿಕಿತ್ಸೆಗೆಂದು ಹೋಗಿದ್ದು, ಚಿಕಿತ್ಸೆ ಯಶಸ್ವಿಯಾಗಲಿ, ಚಿಕಿತ್ಸೆ ಮುಗಿಸಿ ಬೇಗ ಕರ್ನಾಟಕಕ್ಕೆ ಬಂದು ಮತ್ತೆ ನಾಡಿನ ಜನರನ್ನು ರಂಜಿಸಲಿ ಎಂದು ಆಂಜನೇಯ ದೇವರಲ್ಲಿ ಪ್ರಾರ್ಥಿಸಿದರು. ನಂತರ ದೇವಾಲಯದ ಮುಂಭಾಗ ಶಿವಣ್ಣ ಅವರ ಆರೋಗ್ಯಕ್ಕಾಗಿ ಈಡುಗಾಯಿ ಒಡೆದರು.

ಕಾಂಗ್ರೆಸ್ ಮುಖಂಡ ಕೆ. ದೇವೆಂದ್ರಪ್ಪ ಅವರು ಮಾತನಾಡಿ, ಶಿವಣ್ಣ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಯುವಕರಿಗೆ ಅವರು ಆದರ್ಶವಾಗಿದ್ದಾರೆ. ತಮ್ಮ ಚಿತ್ರದಲ್ಲಿ ಎಲ್ಲಿಯೂ ಮಹಿಳೆಯರ ಬಗ್ಗೆ ಅವಹೇಳನ ಮಾಡದೆ ಒಳ್ಳೆಯ ದಾರಿದೀಪವಾಗುವಂತಹ ಚಿತ್ರಗಳನ್ನು ಮಾಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Watch: ಅಮೆರಿಕ ತಲುಪಿದ ಶಿವರಾಜ್ಕುಮಾರ್, ಮಂಗಳವಾರ ಶಸ್ತ್ರಚಿಕಿತ್ಸೆ - SHIVARAJKUMAR REACHED AMERICA