ಕರ್ನಾಟಕ

karnataka

ಉದ್ಯಮಿ ಸುಶೀಲ್​ ಮಂತ್ರಿ ಕುಟುಂಬ ವಿರುದ್ಧದ ಲುಕ್​ಔಟ್​ ಸುತ್ತೋಲೆ ಅಮಾನತ್ತಿನಲ್ಲಿಟ್ಟ ಹೈಕೋರ್ಟ್ - High Court Orders

By ETV Bharat Karnataka Team

Published : Sep 5, 2024, 10:50 PM IST

ಮಂತ್ರಿ ಡೆವಲಪರ್ಸ್‌ ಮುಖ್ಯಸ್ಥ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್‌ ಹಾಗೂ ಪುತ್ರ ಪ್ರತೀಕ್‌ ವಿರುದ್ಧದ ಹೊರಡಿಸಿದ್ದ ಲುಕ್‌ಔಟ್‌ ಸುತ್ತೋಲೆಯನ್ನು ಹೈಕೋರ್ಟ್​ ಅಮಾನತ್ತಿನಲ್ಲಿಡುವ ಮೂಲಕ ವಿದೇಶಿ ಪ್ರವಾಸಕ್ಕೆ ತೆರಳಲು ಕುಟುಂಬಕ್ಕಿದ್ದ ಅಡ್ಡಿಯನ್ನು ನಿವಾರಿಸಿದೆ.

HIGH COURT
ಹೈಕೋರ್ಟ್ (ETV Bharat)

ಬೆಂಗಳೂರು :ಮಂತ್ರಿ ಡೆವಲಪರ್ಸ್‌ ಮುಖ್ಯಸ್ಥ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್‌ ಹಾಗೂ ಪುತ್ರ ಪ್ರತೀಕ್‌ ವಿರುದ್ಧದ ಹೊರಡಿಸಿದ್ದ ಲುಕ್‌ಔಟ್‌ ಸುತ್ತೋಲೆಯನ್ನು ಹೈಕೋರ್ಟ್​ ಅಮಾನತ್ತಿನಲ್ಲಿಟ್ಟಿದೆ.

ಕೇಂದ್ರ ಗೃಹ ಇಲಾಖೆಯ ವಲಸೆ ವಿಭಾಗದ ಅಧಿಕಾರಿಗಳು ಹೊರಡಿಸಿರುವ ಲುಕ್‌ಔಟ್‌ ಸುತ್ತೋಲೆ ಪ್ರಶ್ನಿಸಿ ಉದ್ಯಮಿ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್ ಮತ್ತು ಪುತ್ರ ಪ್ರತೀಕ್‌ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜತೆಗೆ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್​ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿದೆ. ಈ ಆದೇಶದಿಂದಾಗಿ ವಿದೇಶಿ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದ ಮಂತ್ರಿ ಕುಟುಂಬಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ.

ಮಂತ್ರಿ ಡವೆಲಪರ್ಸ್​​​​ ವಿರುದ್ಧ ಹಣ ಪಡೆದ ಬಳಿಕ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳಿಸದೇ ಮತ್ತು ಮನೆಗಳನ್ನು ಹಸ್ತಾಂತರಿಸದ ಹಿನ್ನೆಲೆಯಲ್ಲಿ ಮನೆಗಳ ಖರೀದಿಗಾಗಿ ಮುಂಗಡ ಪಾವತಿ ಮಾಡಿದ್ದ ಗ್ರಾಹಕರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಬ್ಬನ್​ ಪಾರ್ಕ್ ಪೊಲೀಸರ ಮನವಿಯ ಮೇರೆಗೆ ಕೇಂದ್ರ ಗೃಹ ಇಲಾಖೆ ಅರ್ಜಿದಾರರ ವಿರುದ್ಧ ಲುಕ್ಔಟ್​ ಸುತ್ತೋಲೆಯನ್ನು ಹೊರಡಿಸಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲರು, ಸುಶೀಲ್‌ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಒಟ್ಟು ಹತ್ತು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳಿಗೂ ಹೈಕೋರ್ಟ್‌ ತಡೆಯಾಜ್ಞೆ ಆದೇಶ ಮಾಡಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಲ್‌ಒಸಿ ಹಿಂಪಡೆಯಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ಧ ಹಣಕಾಸು ದುರ್ಬಳಕೆಗೆ ಸಂಬಂಧಿಸಿದಂತೆ ಹಲವು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ವಿದೇಶಕ್ಕೆ ತೆರಳಿದರೆ ವಾಪಸಾಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಎಲ್‌ಒಸಿ ಹೊರಡಿಸಲು ಮನವಿ ಮಾಡಲಾಗಿತ್ತು. ಈಗ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಿಗೆ ಹೈಕೋರ್ಟ್‌ ತಡೆ ವಿಧಿಸಿದೆ ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಉಪ ಸಾಲಿಸಿಟರ್‌ ಜನರಲ್‌ ಹೆಚ್​ ಶಾಂತಿಭೂಷಣ್‌, ರಾಜ್ಯ ಸರ್ಕಾರದ ನಿರ್ಧಾರ ಆಧರಿಸಿ ಎಲ್‌ಒಸಿ ಹಿಂಪಡೆಯಲಾಗುವುದು ಎಂದರು. ವಾದ ಆಲಿಸಿದ ನ್ಯಾಯಪೀಠ ಸುತ್ತೋಲೆಯನ್ನು ಅಮಾನತ್ತಿನಲ್ಲಿಟ್ಟು ಆದೇಶಿಸಿದೆ.

ಇದನ್ನೂ ಓದಿ:ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧದ ಪ್ರಕರಣ ರದ್ದು - Siddhasiri Sugar Factory

ABOUT THE AUTHOR

...view details