ಉಡುಪಿ: ಮುದ್ರಾಡಿ ಸಮೀಪದ ಬಲ್ಲಾಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಮೇಘ ಸ್ಫೋಟದಿಂದ ಹಠಾತ್ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಪರಿಣಾಮ ಹಲವು ಮನೆಗಳು ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಅಲ್ಲದೆ, ಕಾರು, ಬೈಕುಗಳು ನೆರೆಯಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ.
ಮಧ್ಯಾಹ್ನ 2.30ರಿಂದ 3.45ರ ವರೆಗೆ ಬಲ್ಲಾಡಿಯ ಈಶ್ವರನಗರ ಸಮೀಪ ಧಾರಾಕಾರ ಮಳೆ ಸುರಿದಿದೆ. ಇದರಿಂದ ನೆರೆ ಸೃಷ್ಟಿಯಾಗಿ, ಮುದ್ರಾಡಿಯ ಹೊಸ ಕಂಬ್ಯ ಕಾಂತರಬೈಲು ಹಾಗೂ ಕೆಲಕಿಲ ಎಂಬಲ್ಲಿನ ಸುಮಾರು ಮನೆಗಳಿಗೆ ನೀರು ನುಗ್ಗಿದೆ. ಇಡೀ ಪ್ರದೇಶ ಜಲಾವೃತಗೊಂಡಿದ್ದು, 2 ಕಾರುಗಳು ಮತ್ತು ಬೈಕ್ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯೊಳಗೆ ಸಿಲುಕಿಕೊಂಡಿದ್ದ ಕೆಲವರನ್ನು ಹಗ್ಗ ಕಟ್ಟಿ, ಏಣಿಯ ಸಹಾಯದಿಂದ ಹೊರಗೆ ಕರೆತರಲಾಯಿತು.
ವೃದ್ಧೆ ಮೃತದೇಹ ಪತ್ತೆ:ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುವಂತಾಗಿತ್ತು. ಮನೆಯೊಂದರಲ್ಲಿ ದನದ ಕೊಟ್ಟಿಗೆ ಕುಸಿದಿದ್ದು, ಒಂದು ಆಕಳು ನಾಪತ್ತೆಯಾಗಿದೆ. ಅಲ್ಲದೆ, ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ ಎಂಬವರ ಮೃತದೇಹ ಬಲ್ಲಾಡಿ ಬಳಿ ಗದ್ದೆ ಬದಿಯಲ್ಲಿ ಪತ್ತೆಯಾಗಿದೆ. ಸಿಡಿಲು ಬಡಿದು ಮುದ್ರಾಡಿ, ಪಡುಕುಡುರು, ಎಳಗೋಳಿ ಎಂಬಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.