ಕರ್ನಾಟಕ

karnataka

ETV Bharat / state

ಹೆಚ್​ಎಂಪಿವಿ ಸೋಂಕಿತ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ, ಇನ್ನೊಂದು ಮಗು ಚೇತರಿಸಿಕೊಳ್ಳುತ್ತಿದೆ : ಸಚಿವ ದಿನೇಶ್ ಗುಂಡೂರಾವ್ - DINESH GUNDU RAO ON HMPV

ಬೆಂಗಳೂರಿನಲ್ಲಿ ಹೆಚ್​ಎಂಪಿವಿ ಸೋಂಕು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

DINESH GUNDU RAO ON HMPV
ದಿನೇಶ್​ ಗುಂಡೂರಾವ್ (ETV Bharat)

By ETV Bharat Karnataka Team

Published : Jan 6, 2025, 2:02 PM IST

Updated : Jan 6, 2025, 5:41 PM IST

ಬೆಂಗಳೂರು:ಹೆಚ್​ಎಂಪಿ ವೈರಸ್ ಸೋಂಕಿತ ಇಬ್ಬರು ಮಕ್ಕಳಲ್ಲಿ ಓರ್ವ ಮಗು ಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದೆ. ಇನ್ನೊಂದು ಮಗು ಚೇತರಿಸಿಕೊಳ್ಳುತ್ತಿದ್ದು, ಒಂದು ಅಥವಾ ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ತಿಳಿಸಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಲ್ಲಿ ಹೆಚ್​ಎಂಪಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಗಳ ಜೊತೆ ಸಭೆ ನಡೆಸಿದ ಬಳಿಕ ಸಚಿವ ದಿನೇಶ್ ಗುಂಡೂರಾವ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಹೆಚ್​ಎಂಪಿವಿ ಸೋಂಕು: ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಪ್ರತಿಕ್ರಿಯೆ (ETV Bharat)

ಹೆಚ್​ಎಂಪಿ ವೈರಸ್ ಹೊಸದಲ್ಲ. ಇದು ಬಹಳ ಹಿಂದೆಯಿಂದ ಭಾರತದಲ್ಲಿದ್ದು, ಇದರಿಂದ ಯಾವುದೇ ಜೀವಾಪಾಯ ಇಲ್ಲ. ಇದಕ್ಕೆ ಹೆದರಿಕೊಳ್ಳಬೇಕಿಲ್ಲ. ಆದರೆ ಮುಂಜಾಗ್ರತೆ ಇರಲಿ ಎಂದರು.

ಈ ವೈರಸ್​ನಿಂದ ಶೀತ, ಕೆಮ್ಮು ಮತ್ತು ಜ್ವರ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಜನರು ಹೆದರಿಕೊಳ್ಳಬಾರದು ಮತ್ತು ನಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ವೃದ್ಧರು ಮತ್ತು ಚಿಕ್ಕಮಕ್ಕಳು ಹೆಚ್ಚು ಜನರಿರುವ ಸ್ಥಳಗಳಿಗೆ ಮತ್ತು ಸೋಂಕಿತರಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಬೆಂಗಳೂರಿನ ಆಸ್ಪತ್ರೆಯಲ್ಲಿ 8 ವರ್ಷದ ಮಗು ಹೆಚ್​ಎಂಪಿ ವೈರಸ್ ಸೋಂಕಿಗೆ ಒಳಗಾಗಿರುವುದನ್ನು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಖಚಿತಪಡಿಸಿದರು. ಆದರೆ ಇದನ್ನು ಭಾರತದಲ್ಲಿಯೇ ಮೊದಲ ಪ್ರಕರಣ ಎಂದು ಬಣ್ಣಿಸುವುದು ತಪ್ಪು ಎಂದು ಅವರು ಹೇಳಿದರು.

"ಹೆಚ್​ಎಂಪಿವಿ ಮೊದಲಿನಿಂದಲೂ ಸಕ್ರಿಯವಾಗಿರುವ ವೈರಸ್. ಇದು ಹೊಸದೇನಲ್ಲ. ವೈರಸ್​ ಕಂಡುಬಂದ ಮಗುವಿಗೆ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲ. ಮಗುವಿನ ಪೋಷಕರು ಸ್ಥಳೀಯ ಜನರಾಗಿದ್ದಾರೆ. ಅವರು ಚೀನಾ ಅಥವಾ ಮಲೇಷ್ಯಾದಿಂದ ಬಂದಿಲ್ಲ" ಎಂದು ಅವರು ತಿಳಿಸಿದರು.

ಚೀನಾದಲ್ಲಿ ಹರಡಿರುವ ವೈರಸ್​ ಮತ್ತು ಭಾರತದಲ್ಲಿ ಪತ್ತೆಯಾದ ವೈರಸ್ ನಡುವೆ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಹೆಚ್​ಎಂಪಿವಿಯ ಹೊಸ ರೂಪಾಂತರದಿಂದಾಗಿ ಚೀನಾದಲ್ಲಿ ಏಕಾಏಕಿ ಸೋಂಕು ಕಂಡುಬಂದಿದೆ. ಅದರ ಬಗ್ಗೆ ನಮಗೆ ಇನ್ನೂ ಯಾವುದೇ ವಿವರಗಳಿಲ್ಲ. ಆದರೆ ಹೆಚ್​ಎಂಪಿವಿ ಬಹಳ ಹಿಂದಿನಿಂದಲೂ ಇದೆ. ಇದು ಶೀತ, ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಸೀಮಿತ ಸಮಯದ ವೈರಸ್ ಆಗಿದ್ದು, ಸ್ವಲ್ಪ ದಿನಗಳಲ್ಲೇ ಕಡಿಮೆ ಆಗುತ್ತದೆ'' ಎಂದು ಸಚಿವ ದಿನೇಶ್​ ಗುಂಡೂರಾವ್ ಮಾಹಿತಿ ನೀಡಿದರು.

ಇದನ್ನೂ ಓದಿ:ಕರ್ನಾಟಕದಲ್ಲಿ 2 ಹೆಚ್‌ಎಂಪಿವಿ ಸೋಂಕಿತ ಪ್ರಕರಣ ಪತ್ತೆ; ಮಧ್ಯಾಹ್ನ ಆರೋಗ್ಯ ಇಲಾಖೆ ಸಭೆ

ಬೆಂಗಳೂರಲ್ಲಿ 2 ಹೆಚ್‌ಎಂಪಿವಿ ಸೋಂಕು- ಐಸಿಎಂಆರ್ ಮಾಹಿತಿ ವಿವರ :ಬೆಂಗಳೂರಿನಲ್ಲಿ ಪತ್ತೆಯಾದ ಮೊದಲ ಪ್ರಕರಣದಲ್ಲಿ, ಹೆಚ್‌ಎಂಪಿವಿ ಸೋಂಕಿನ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗೆ 3 ತಿಂಗಳ ಹೆಣ್ಣು ಶಿಶುವನ್ನು ದಾಖಲಿಸಲಾಗಿತ್ತು. ಮಗುವಿಗೆ ಬ್ರಾಂಕೋಪ್ನ್ಯುಮೋನಿಯಾ ಕಂಡುಬಂದಿತ್ತು. ಬಳಿಕ ಚೇತರಿಸಿಕೊಂಡಿದ್ದು ಡಿಸ್ಚಾರ್ಜ್ ಮಾಡಲಾಗಿದೆ.

ಎರಡನೇ ಪ್ರಕರಣದಲ್ಲಿ ಜನವರಿ 3ರಂದು 8 ತಿಂಗಳ ಗಂಡು ಶಿಶುವಿನಲ್ಲಿ ಹೆಚ್‌ಎಂಪಿವಿ ಪಾಸಿಟಿವ್​ ವರದಿಯಾಗಿತ್ತು. ಈ ಮಗುವೂ ಕೂಡ ಬ್ರಾಂಕೋಪ್ನ್ಯುಮೋನಿಯಾನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ. ಎರಡೂ ಶಿಶುಗಳೂ ಕೂಡ ಯಾವುದೇ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿಯನ್ನು ಹೊಂದಿಲ್ಲ ಎಂದು ಐಸಿಎಂಆರ್​ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Last Updated : Jan 6, 2025, 5:41 PM IST

ABOUT THE AUTHOR

...view details