ಕರ್ನಾಟಕ

karnataka

ಮಳೆಗೆ ಸೋರುತ್ತಿದೆ ಹಾವೇರಿ ತಾಲೂಕಾಡಳಿತ ಸೌಧ: ಶಾಸಕ ಲಮಾಣಿ ಹೇಳಿದ್ದೇನು? - Haveri Govt Building Leaks

By ETV Bharat Karnataka Team

Published : Jul 30, 2024, 2:30 PM IST

ಪ್ರತೀ ಬಾರಿ ಮಳೆಗೆ ಹಾವೇರಿ ತಾಲೂಕಾಡಳಿತ ಸೌಧ ಸೋರುತ್ತಿದ್ದು, ಮಳೆ ನೀರಲ್ಲೇ ಸಾರ್ವಜನಿಕರು, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಳೆಗೆ ಸೊರುತ್ತಿದೆ ಹಾವೇರಿ ತಾಲೂಕಾಡಳಿತ ಸೌಧ
ಮಳೆಗೆ ಸೋರುತ್ತಿದೆ ಹಾವೇರಿ ತಾಲೂಕಾಡಳಿತ ಸೌಧ (ETV Bharat)

ಸೋರುತ್ತಿರುವ ಹಾವೇರಿ ತಾಲೂಕಾಡಳಿತ ಸೌಧದ ಕುರಿತು ಶಾಸಕ ಲಮಾಣಿ ಹೇಳಿಕೆ (ETV Bharat)

ಹಾವೇರಿ:ಮಳೆಗೆ ಹಾವೇರಿ ತಾಲೂಕಾಡಳಿತ ಸೌಧ ಸೋರುತ್ತಿದೆ ಎಂಬ ದೂರುಗಳು ಪದೇ ಪದೇ ಕೇಳಿಬರುತ್ತಿವೆ. ಕಟ್ಟಡದಲ್ಲಿ ಆರಕ್ಕೂ ಹೆಚ್ಚು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳು ಮಳೆಗಾಲದಲ್ಲಿ ಸೋರುತ್ತಿದ್ದು ಸಾರ್ವಜನಿಕರು, ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಹತ್ವದ ದಾಖಲೆಗಳು ಈ ಕಚೇರಿಗಳಲ್ಲಿದ್ದು ಮಳೆ ನೀರಿನಿಂದ ಹಾಳಾಗುತ್ತಿವೆ.

ಹಲವು ಬಾರಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆ ನೀರಿನಿಂದ ತೊಟ್ಟಿಕ್ಕುವ ಕಚೇರಿಯಲ್ಲಿ ಸಿಬ್ಬಂದಿ ಗೋಣಿಚೀಲ, ಬಕೆಟ್​, ಪ್ಲಾಸ್ಟಿಕ್​​ ಡಬ್ಬ ಸೇರಿದಂತೆ ವಿವಿಧ ವಸ್ತುಗಳನ್ನು ಹಾಕಿ ಒದ್ದೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜನರು ತಲೆ ಮೇಲೆ ಕೈ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಇದೆ.

ಈ ಕುರಿತಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರ ತರಾಟೆಗೂ ತೆಗೆದುಕೊಂಡಿದ್ದರು. ಹೀಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ತಾಲೂಕಾಡಳಿತ ಸೌಧ ಸೋರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ತಾಲೂಕಾಡಳಿತ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹಾವೇರಿ ಶಾಸಕ, ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಸೋಮವಾರ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೊಟ್ಟಿಕ್ಕುವ ಕೊಠಡಿಗಳಿಗೆ ತೆರಳಿ ಸಾರ್ವಜನಿಕರು ಹಾಗು ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ರುದ್ರಪ್ಪ ಲಮಾಣಿ, "ಈ ವರ್ಷ ಅಧಿಕ ಮಳೆಯಾಗಿರುವ ಪರಿಣಾಮ ತಾಲೂಕಾಡಳಿತ ಸೌಧ ಹೆಚ್ಚು ಸೋರಲಾರಂಭಿಸಿದೆ. ಸೌಧಕ್ಕೆ ಈ ಹಿಂದೆ ತಾಡ್‌ಪಲ್​ ಹಾಕಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಅದರ ಬದಲು ಇದೀಗ ಕಚೇರಿ ಮೇಲೆ ತಗಡಿನ ಶೆಡ್​ ಹಾಕಲು 8 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಈಗಾಗಲೇ ಕೆಲಸ ಆರಂಭವಾಗಿದೆ. ಇನ್ನೆರಡು ದಿನದಲ್ಲಿ ತಗಡಿನ ಶೆಡ್ ನಿರ್ಮಾಣವಾಗುತ್ತದೆ. ಮೊದಲು ಸೌಧದ ಮೇಲೆ ತಗಡಿನ ಶೆಡ್​ ನಿರ್ಮಿಸಿ ನೀರು ಬರದಂತೆ ನೋಡಿಕೊಳ್ಳಲಾಗುತ್ತದೆ" ಎಂದರು.

"ನೀರು ಸೋರಿಕೆ ತಡೆಗಟ್ಟಿದ ನಂತರ ಹಾವೇರಿ ತಾಲೂಕಾಡಳಿತ ಸೌಧವನ್ನು ಬೇರೆಡೆ ಸ್ಥಳಾಂತರಿಸುವ ಕುರಿತು ಚರ್ಚಿಸಲಾಗುವದು. ಹಾವೇರಿ ನಗರದ ಕೇಂದ್ರ ಭಾಗದಲ್ಲಿರುವ ಈ ಹಿಂದೆ ಎಸ್ಪಿ ಕಚೇರಿಯಾಗಿದ್ದ ಕಚೇರಿಗೆ ತಾಲೂಕಾಡಳಿತ ಸೌಧದ ಕಚೇರಿಗಳನ್ನು ವರ್ಗಾಯಿಸುವ ಚಿಂತನೆ ನಡೆದಿದೆ. ಆದಷ್ಟೂ ಬೇಗ ಈ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಹಾವೇರಿ ತಹಶೀಲ್ದಾರ್​ ಆರ್.ಶಂಕರ್, ಸವಣೂರು ಎಸಿ ಅಜೀಜ್ ಸೇರಿದಂತೆ ವಿವಿಧ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಕೊಡೆ ಹಿಡಿದು ಇಲ್ಲವೇ ರೇನ್‌ಕೋಟ್​ ಧರಿಸಿ ಬನ್ನಿ! ಇದು ಬೆಳಗಾವಿ ತಹಶೀಲ್ದಾರ್ ಕಚೇರಿಯ ದುಃಸ್ಥಿತಿ - Belagavi Tahsildar Office

ABOUT THE AUTHOR

...view details