ಕರ್ನಾಟಕ

karnataka

ಗಂಗಾವತಿ: ಕೋರ್ಟ್​ ಆವರಣದಲ್ಲಿ ಹೃದಯಾಘಾತ, ಬಡವರಿಗೆ ನ್ಯಾಯ ಕೊಡಿಸುತ್ತಿದ್ದ ವಕೀಲ ವಿಧಿವಶ

By ETV Bharat Karnataka Team

Published : Feb 21, 2024, 9:38 PM IST

ಕಲಾಪಕ್ಕೆಂದು ಹಾಜರಾಗಿದ್ದ ವಕೀಲರೊಬ್ಬರು ತಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದಕ್ಕೆ ಕೋರ್ಟ್​ ಹೊರಗೆ ಬಂದಿದ್ದ ವೇಳೆ ದಿಢೀರ್ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಗಂಗಾವತಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

Advocate Ambali Somnath
ವಕೀಲ ಅಂಬಲಿ ಸೋಮನಾಥ

ಗಂಗಾವತಿ:ಕಲಾಪಕ್ಕೆಂದು ಹಾಜರಾಗಿದ್ದ ವಕೀಲರೊಬ್ಬರು ತಮ್ಮ ಕಕ್ಷಿದಾರರೊಂದಿಗೆ ಮಾತನಾಡಲು ಕೋರ್ಟ್​ ಹೊರಗೆ ಬರುತ್ತಿದ್ದ ವೇಳೆ ದಿಢೀರ್ ಹೃದಯಾಘಾತದಿಂದಾಗಿ ಕುಸಿದುಬಿದ್ದು ಸಾವಿಗೀಡಾಗಿರುವ ಘಟನೆ ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

ಪ್ರಶಾಂತನಗರದ ನಿವಾಸಿ ವಕೀಲ ಅಂಬಲಿ ಸೋಮನಾಥ (65) ಹೃದಯಾಘಾತದಿಂದ ಮೃತಪಟ್ಟಿರುವ ವಕೀಲ. ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಕ್ಷಿದಾರರನನ್ನು ಭೇಟಿಯಾಗಲು ವಕೀಲ ನ್ಯಾಯಾಲಯದಿಂದ ಹೊರಕ್ಕೆ ಬರುತ್ತಿದ್ದರು. ನ್ಯಾಯಾಲಯದ ಮೆಟ್ಟಿಲು ಇಳಿದು ಇನ್ನೇನು ಕಕ್ಷಿದಾರನನ್ನು ಭೇಟಿಯಾಗಬೇಕು ಅನ್ನುವಷ್ಟರಲ್ಲಿ ಹೃದಯಾಘಾತಕ್ಕೀಡಾಗಿ ಮೆಟ್ಟಿಲುಗಳ ಮೇಲೆ ಕುಸಿದು ಬಿದ್ದರು. ಕೂಡಲೇ ಅವರ ವಕೀಲ ಸಹಪಾಠಿಗಳು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ವೇಳೆಗೆ ಸೋಮನಾಥ ವಕೀಲ ಸಾವನ್ನಪ್ಪಿರುವ ಕುರಿತು ವೈದ್ಯರು ಖಚಿತ ಪಡಿಸಿದರು.

ಬಡವರ ವಕೀಲನೆಂದು ಖ್ಯಾತಿ ಗಳಿಸಿದ್ದ ಸೋಮನಾಥ: ಮೂರು ದಶಕಕ್ಕೂ ಹೆಚ್ಚು ಕಾಲದಿಂದ ವಕೀಲರಾಗಿ ಸೋಮನಾಥ ಸೇವೆ ಸಲ್ಲಿಸುತ್ತಿದ್ದರು. ಬಡವರ ವಕೀಲ ಎಂದು ಹೆಸರು ಮಾಡಿದ್ದ ಸೋಮನಾಥ ಅವರು ವ್ಯಕ್ತಿಗಳಿಂದ ಹಣ ನಿರೀಕ್ಷೆ ಮಾಡದೇ ವಕಾಲತ್ತು ವಹಿಸಿಕೊಂಡು ವಾದ ಮಾಡಿ ಪ್ರಕರಣಗಳನ್ನು ಗೆದ್ದುಕೊಡುತ್ತಿದ್ದರು. ಕೆಲ ಸಂದರ್ಭದಲ್ಲಿ ಬಡವರ ಪ್ರಕರಣಗಳಲ್ಲಿ ಸರ್ಕಾರಿ ಶುಲ್ಕಗಳನ್ನು ತಾವೇ ಕೈಯಿಂದ ಶುಲ್ಕ ಕಟ್ಟಿ, ವಾದ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಸಹಪಾಠಿ ವಕೀಲರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ವಕೀಲ ಅಂಬಲಿ ಸೋಮನಾಥ ಅವರು ಕೇವಲ ನ್ಯಾಯಾಲಯದ ವಿಚಾರದಲ್ಲಿ ಮಾತ್ರವಲ್ಲ, ಬಡ ಮಕ್ಕಳು ಶಿಕ್ಷಣಕ್ಕೆ ಪರದಾಡುತ್ತಿರುವುದು ಅವರ ಗಮನಕ್ಕೆ ಬಂದರೆ ನೇರವಾಗಿ ಶಾಲಾ-ಕಾಲೇಜುಗಳಿಗೆ ಹೋಗಿ ಶುಲ್ಕ ಕಟ್ಟಿ ಬರುತ್ತಿದ್ದರು. ಹೀಗಾಗಿ ಸೋಮನಾಥ ಅವರು ಬಡವರ ವಕೀಲರು ಎಂದು ಗುರುತಿಸಿಕೊಂಡಿದ್ದರು ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಕಂಬನಿ ಮಿಡಿದರು.

ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲಿ ಹೆದ್ದಾರಿ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ

ABOUT THE AUTHOR

...view details