ಕರ್ನಾಟಕ

karnataka

By ETV Bharat Karnataka Team

Published : Jun 19, 2024, 10:11 PM IST

Updated : Jun 19, 2024, 11:02 PM IST

ETV Bharat / state

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಬೆಲೆ ಏರಿಸಿಲ್ಲ: ಸಚಿವ ಸತೀಶ್​ ಜಾರಕಿಹೊಳಿ - Satish Jarakiholi

ತೈಲ ಬೆಲೆ ಏರಿಕೆಯಿಂದ ಬರುವುದು ನಾಲ್ಕೈದು ಸಾವಿರ ಕೋಟಿ ರೂಪಾಯಿ ಆದಾಯ ಮಾತ್ರ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ತೈಲ ಬೆಲೆ ಏರಿಸಿಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

MINISTER SATISH JARAKIHOLI
ಸಚಿವ ಸತೀಶ್​ ಜಾರಕಿಹೊಳಿ (ETV Bharat)

ಸಚಿವ ಸತೀಶ್​ ಜಾರಕಿಹೊಳಿ (ETV Bharat)

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ಹಣ ಬೇಕಾಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನಾಲ್ಕೈದು ಸಾವಿರ ಕೋಟಿ ಬರುತ್ತದೆ. ಹಾಗಾಗಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಬೆಲೆ ಏರಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆ ಕುರಿತ ವಿಪಕ್ಷ ನಾಯಕರ ಟೀಕೆಗೆ ಹೀಗೆ ಪ್ರತಿಕ್ರಿಯಿಸಿದರು.

ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಹರಾಜಿಗಿಟ್ಟಿದೆ ಎಂಬ ಅಭಯ್ ಪಾಟೀಲ ಆರೋಪದ ಕುರಿತು ಪ್ರತಿಕ್ರಿಯಿಸಿ, ಅವರು ಹೇಳಿದ್ದಕ್ಕೆಲ್ಲಾ ಉತ್ತರಿಸಲು ಆಗೋದಿಲ್ಲ. ಎಷ್ಟು ಬಾರಿ ಇವರು ಸಿಲಿಂಡರ್ ಬೆಲೆ ಏರಿಸಿದ್ದಾರೆ. ಎಣ್ಣೆ, ರಸಗೊಬ್ಬರ ಏರಿಸಿದ್ದಕ್ಕೆ ಏನೂ ಹೇಳುವುದಿಲ್ಲ. ಈಗ ಮೂರು ರೂ. ಪೆಟ್ರೋಲ್ ದರ ಏರಿಸಿದ್ದಕ್ಕೆ ಆಕಾಶ ಮೈಮೇಲೆ ಬಿದ್ದ ಹಾಗೆ ಮಾಡುತ್ತಿದ್ದಾರೆ. 400 ರೂ.‌ ಇದ್ದ ಸಿಲಿಂಡರ್ ಬೆಲೆಯನ್ನು 1,200 ರೂ.ಗೆ ಏರಿಸಿದರು. ಹಾಗಾಗಿ, ಅವರ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆಯಿದೆ. ಚುನಾವಣೆ ಬಂದಾಗ ಬೊಮ್ಮಾಯಿ ಸರ್ಕಾರದಲ್ಲಿ 5 ರೂ. ಕಡಿಮೆ ಮಾಡಿದ್ದರು ಎಂದು ಸಮರ್ಥಿಸಿಕೊಂಡರು‌.

ಮೇವು ಖರೀದಿ ಅಕ್ರಮ:ಮೇವು ಖರೀದಿಗೆ ಮಂಜೂರಾದ 6 ಕೋಟಿ ರೂಪಾಯಿ ಅನುದಾನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ, ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ. ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಯಾರು ದೂರು ನೀಡಿಲ್ಲ. ಹಾಗೇನಾದರೂ ಅಕ್ರಮ ನಡೆದಿದ್ದರೆ ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಅವರಿಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸುತ್ತೇನೆ ಎಂದು ತಿಳಿಸಿದರು.

24x7 ನೀರು ಸರಬರಾಜು ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಎಲ್ ಆ್ಯಂಡ್‌ ಟಿ ಕಂಪನಿಯಿಂದ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಕಂಪನಿಯವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಲು ಅಗೆದ ರಸ್ತೆಗಳನ್ನು ಅವರೇ ಸರಿಪಡಿಸುತ್ತಾರೆ ಎಂದರು.

ಸವದತ್ತಿ ಯಲ್ಲಮ್ಮನ ದೇವಸ್ಥಾನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್​ನಲ್ಲಿಯೇ 120 ಕೋಟಿ ರೂ. ವಿಶೇಷ ಅನುದಾನ ಮೀಸಲಿಟ್ಟಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಮ್ಮನ ದೇವಸ್ಥಾನವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಆಸೀಫ್ ಸೇಠ್, ವಿಶ್ವಾಸ ವೈದ್ಯ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಜನ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ: ಸಂಸದ ಬೊಮ್ಮಾಯಿ - Basavaraj Bommai

Last Updated : Jun 19, 2024, 11:02 PM IST

ABOUT THE AUTHOR

...view details