ಹಾಸನ : ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಬಣ ಬಡಿದಾಟ, ನಾಯಕತ್ವಕ್ಕಾಗಿ ಬಡಿದಾಟ ನಡೆಯುತ್ತಿದ್ದರೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇವೆಲ್ಲಾ ಜನರಿಗೆ ವಿಚಾರವೇ ಅಲ್ರೀ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದಕ್ಕೆ ಯಾರು ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಜನಸಾಮಾನ್ಯರ ಸಮಸ್ಯೆಗಳ ಕಡೆಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಹಾಸನ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿಯಿಂದ ಜನ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಅರಣ್ಯ ಇಲಾಖೆ ಮಂತ್ರಿಗಳು 65% ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು 2018ರಲ್ಲೇ ನಾನು ನೀಡಿದ ಹಣದಿಂದ ನಿರ್ಮಿಸಲಾಗಿದೆ. ಅದಾದ ಮೇಲೆ ಸರ್ಕಾರ ಯಾವುದೇ ಹೊಸ ಪ್ರಯತ್ನ ಮಾಡಿದೆಯೇ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜನಸಾಮಾನ್ಯರ ಸಮಸ್ಯೆಗಳ ಕಡೆಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ರಾಜ್ಯದ ನಾಯಕತ್ವಕ್ಕಾಗಿ ಬಡಿದಾಟ ಮಾಡುತ್ತಿರುವುದು ವಿಚಾರವೇ ಅಲ್ಲ. ರಾಜ್ಯದ ಸಮಸ್ಯೆಗೆ ಯಾರು ಉತ್ತರ ಕೊಡ್ತಾರೆ? ಇವತ್ತು ಬೆಂಗಳೂರು ಮೆಟ್ರೋ ದರ ಏರಿಕೆಯು ನೇರವಾಗಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ಪ್ರತಿ ದಿನ ಐದು ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರ ಜನರ ಕಡೆಯಿಂದ ಹಣ ಸುಲಿಯುತ್ತಿದೆ. ರಾಜ್ಯದಲ್ಲಿ ಯಾವುದೇ ವಾಸ್ತವಿಕ ಅಭಿವೃದ್ಧಿ ಕಾಣುತ್ತಿಲ್ಲ. ಸರ್ಕಾರ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿಲ್ಲ" ಎಂದು ಕಿಡಿಕಾರಿದರು.
ಹೆಚ್.ಡಿ. ಕುಮಾರಸ್ವಾಮಿ (ETV Bharat) "2014ರ ಕೆಪಿಎಸ್ಸಿ ನೇಮಕಾತಿಯ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಮೈತ್ರಿ ಎಂಬ ಒಬ್ಬ ಹೆಣ್ಣುಮಗಳಿಗಾಗಿ 370 ಜನರ ಭವಿಷ್ಯವನ್ನು ಹೊಡೆದು ಹಾಕಿದರು. ಈಗ 2025ಕ್ಕೆ ಬಂದಿದ್ದೇವೆ. ಆದರೆ ಕೆಪಿಎಸ್ಸಿ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಕಂಡಿದೆಯಾ? ಒಬ್ಬರು ಕೂಡ ಕೆಪಿಎಸ್ಸಿ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಆ ಪರಿಸ್ಥಿತಿಗೆ ಈ ಸರ್ಕಾರ ವ್ಯವಸ್ಥೆಯನ್ನು ತಂದಿಟ್ಟಿದೆ. 15 ಜನ ಸದಸ್ಯರನ್ನು ನೇಮಿಸಿ ಏನು ಸುಧಾರಣೆ ತಂದುಕೊಟ್ಟರು? ಇಂದು ಕೆಪಿಎಸ್ಸಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಯುವಕರ ಭವಿಷ್ಯವನ್ನು ರಾಜ್ಯ ಸರ್ಕಾರ ಹಾಳು ಮಾಡುತ್ತಿದೆ. ಈಗಲಾದರೂ ಈ ಸರ್ಕಾರ ಈ ಕುರಿತು ಗಮನ ಹರಿಸಬೇಕು" ಎಂದು ಆಗ್ರಹಿಸಿದರು.
"ರಾಜ್ಯದಲ್ಲಿ ಸರ್ಕಾರವಿದೆ ಎಂಬುದೇ ಜನ ಮರೆತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಗಮನಹರಿಸಲಿ. ಮೈಸೂರು ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಡುವುದು ಬೇಡ. ಒಂದು ಸಮಾಜದವರು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲು ಹೊರಟಿದ್ದರು. ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದರು. ಅದರ ಹಿನ್ನೆಲೆಯಲ್ಲಿ ಈಗ ರಾಜಕೀಯ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ರಾಜ್ಯದ ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ಗಮನ ಕೊಡುವುದು ಸೂಕ್ತ" ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಡಿಕೆಶಿ ಮೇಕೆದಾಟುಗೆ ಮೊದಲು ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯಲಿ: ಹೆಚ್. ಡಿ. ಕುಮಾರಸ್ವಾಮಿ