ಕರ್ನಾಟಕ

karnataka

ಕುಂದಾನಗರಿಯಲ್ಲಿ ಈದ್-ಮಿಲಾದ್ ಸಂಭ್ರಮ: ಮೆಕ್ಕಾ, ಮದೀನಾ ಪ್ರತಿರೂಪಗಳ ಆಕರ್ಷಣೆ, ವಿದ್ಯುತ್ ದೀಪಾಲಂಕಾರ - Eid Milad Celebration

By ETV Bharat Karnataka Team

Published : 4 hours ago

ಈದ್-ಮಿಲಾದ್ ಭವ್ಯ ಮೆರವಣಿಗೆ ಅಂಗವಾಗಿ ಕುಂದಾನಗರಿ ಬೆಳಗಾವಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಬೆಳಗಾವಿ ಈದ್ ಮಿಲಾದ್ ಸಂಭ್ರಮ
ಬೆಳಗಾವಿಯಲ್ಲಿ ಈದ್ ಮಿಲಾದ್ ಸಂಭ್ರಮ (ETV Bharat)

ಬೆಳಗಾವಿ: ಕಳೆದ ಎರಡು ವಾರಗಳಿಂದ ಅದ್ಧೂರಿ ಗಣೇಶೋತ್ಸವಕ್ಕೆ ಸಾಕ್ಷಿಯಾಗಿದ್ದ ಕುಂದಾನಗರಿ ಬೆಳಗಾವಿ ಈಗ ಇಸ್ಲಾಂ ಸಮುದಾಯದ ಪವಿತ್ರ ಈದ್-ಮಿಲಾದ್ ಹಬ್ಬದ ಸಂಭ್ರಮಕ್ಕೆ ಹೊರಳಿದೆ. ಮೆಕ್ಕಾ, ಮದೀನಾ ಮಸೀದಿಗಳ ಪ್ರತಿರೂಪಗಳು ನಗರದಲ್ಲಿ ಆಕರ್ಷಿಸುತ್ತಿವೆ.

ಗಡಿನಾಡಿನಲ್ಲಿ ಎಲ್ಲ ಧರ್ಮಗಳ ಪ್ರತಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೇ ಭಾವೈಕ್ಯತೆ ಸಂದೇಶವನ್ನು ಸಾರುವಲ್ಲೂ ಇಲ್ಲಿನ ಜನ ಮುಂದಿದ್ದಾರೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜಯಂತಿ ಅಂಗವಾಗಿ ಸೆ.16ರಂದು ನಡೆಯಬೇಕಿದ್ದ ಈದ್-ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡಲಾಗಿತ್ತು. ಸಾಮರಸ್ಯ ಮತ್ತು ಭಾವೈಕತ್ಯೆಗಾಗಿ ಮುಸ್ಲಿಂ ಮುಖಂಡರು ಈ ತೀರ್ಮಾನ ಕೈಗೊಂಡಿದ್ದರು.

ಕುಂದಾನಗರಿಯಲ್ಲಿ ಈದ್-ಮಿಲಾದ್ ಸಂಭ್ರಮ (ETV Bharat)

ಸೆ.17ರಿಂದ ಶುರುವಾದ ಗಣೇಶ ಮೂರ್ತಿಗಳ ನಿಮಜ್ಜನಾ ಮೆರವಣಿಗೆ‌ ಸೆ.19ರ ರಾತ್ರಿ 12.45ಕ್ಕೆ ಮುಕ್ತಾಯವಾಗಿತ್ತು. ಗಣೇಶೋತ್ಸವ ಹಿನ್ನೆಲೆಯಲ್ಲಿ ತಮ್ಮ ಹಬ್ಬ ಮುಂದೂಡಿದ್ದ ಮುಸ್ಲಿಮರು ಈಗ ಈದ್-ಮಿಲಾದ್ ಅದ್ಧೂರಿ ಆಚರಣೆಗೆ ಸಜ್ಜಾಗಿದ್ದಾರೆ. ಕುಂದಾನಗರಿಯ ಗಲ್ಲಿ ಗಲ್ಲಿಯಲ್ಲಿ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ದರ್ಗಾ, ಮಸೀದಿಗಳಿಗೆ ದೀಪಾಲಂಕಾರ ಮಾಡಲಾಗಿದೆ.

ಮೆಕ್ಕಾ, ಮದೀನಾ ಸುಂದರ ಪ್ರತಿರೂಪಗಳು:ಬೆಳಗಾವಿಯ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಖಾದ್ರಿ ಯಂಗ್ ಕಮಿಟಿ ಮತ್ತು ಸುನ್ನಿ ಮುಸ್ಲಿಂ ಜಮಾತ್ ವತಿಯಿಂದ ತಯಾರಿಸಿರುವ ಇಸ್ಲಾಂ ಧಾರ್ಮಿಕ ಕ್ಷೇತ್ರಗಳಾದ ಮೆಕ್ಕಾ, ಮದೀನಾ, ಕಾಬಾ ಪ್ರತಿರೂಪಗಳು ಗಮನ ಸೆಳೆಯುತ್ತಿವೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಜನ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

'ಈಟಿವಿ ಭಾರತ' ಜೊತೆಗೆ ಮಾತನಾಡಿದ ಕಮಿಟಿಯ ಅಜ್ಜು ವಡಗಾಂವಕರ್, ಈ ಪ್ರತಿರೂಪಗಳನ್ನು ತಯಾರಿಸಲು‌ 90 ದಿನ ತೆಗೆದುಕೊಂಡಿದ್ದೇವೆ. ನಮ್ಮ ಸ್ನೇಹಿತರೆಲ್ಲರೂ ಸೇರಿ ಇವುಗಳನ್ನು ರೂಪಿಸಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೂರು ದಿನಗಳ ಕಾಲ ಜನರಿಗೆ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಸಾಯಂಕಾಲ 6 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ಜನ‌ ಆಗಮಿಸುತ್ತಿದ್ದಾರೆ ಎಂದರು.

ಬೆಳಗಾವಿಯಲ್ಲಿ ಈದ್ ಮಿಲಾದ್ ಸಂಭ್ರಮ (ETV Bharat)

ಮಗದುಮ್ಮ ಅಲಿ ವಡಗಾಂವಕರ್ ಮಾತನಾಡಿ, ಮೊನ್ನೆ ಗಣೇಶೋತ್ಸವ ವೇಳೆ ನಮ್ಮ ಏರಿಯಾದಲ್ಲಿ ಕೇದಾರನಾಥ ಮಾದರಿ ದೇವಾಲಯ ನಿರ್ಮಿಸಿದ್ದೆವು. ನಾವೆಲ್ಲ ಅಣ್ಣ-ತಮ್ಮಂದಿರಂತೆ ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ಯಾವುದೇ ಭೇದ, ಭಾವ ಮಾಡುವುದಿಲ್ಲ ಎಂದರು.

ಹಿರಿಯ ಕ‌ನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಗಣೇಶೋತ್ಸವ ಹಿನ್ನೆಲೆಯಲ್ಲಿ ಈದ್-ಮಿಲಾದ್ ಮೆರವಣಿಗೆ ಮುಂದೂಡಿ ಸಾಮರಸ್ಯವನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯಕ್ಕೆ ಬೆಳಗಾವಿ ಮುಸ್ಲಿಂ ಬಾಂಧವರು ಮುನ್ನುಡಿ ಬರೆದಿದ್ದರು. ಆಜಂನಗರ, ವೀರಭದ್ರನಗರ ಸೇರಿ ಮುಂತಾದೆಡೆ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಮೆಕ್ಕಾ, ಮದೀನಾ ಮಸೀದಿಗಳ ಪ್ರತಿರೂಪಗಳನ್ನು ತುಂಬಾ ಚೆನ್ನಾಗಿ ತಯಾರಿಸಿದ್ದಾರೆ. ಎಲ್ಲರೂ ಶ್ರದ್ಧೆಯಿಂದ ಈದ್-ಮಿಲಾದ್ ಆಚರಿಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಸತತ 32 ಗಂಟೆ ನಿಮಜ್ಜನ ಮೆರವಣಿಗೆ: ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ - Ganeshotsava Procession

ABOUT THE AUTHOR

...view details