ಬೆಂಗಳೂರು:ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶ್ವಗುರು ಬಸವಣ್ಣನವರ ವಚನದ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧ ಮುಂಭಾಗದ ಬಸವಣ್ಣನ ಪ್ರತಿಮೆಗೆ ಇಂದು ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು CBIಗೆ ವಹಿಸುವಂತೆ ಕುಮಾರಸ್ವಾಮಿ ಅವರ ರಾಜ್ಯಪಾಲರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಲೋಕದ ಡೊಂಕ ನೀವೇಕೆ ತಿದ್ದುವಿರಿ. ಮೊದಲು ನಿಮ್ಮ ಮನೆ ರಿಪೇರಿ ಮಾಡ್ಕೋಳಿ ಎಂದು ಬಸವಣ್ಣ ಹೇಳಿದ್ದಾರೆ. ಉಳಿದದ್ದು ಆಮೇಲೆ ಮಾತನಾಡೋಣ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ಬಸವ ಜಯಂತಿ ಆಚರಣೆ ರಾಜ್ಯದ ಕೆಲಸ. ಬಸವಣ್ಣನವರು ಹೇಳಿರುವ ಮಾತೇನು? ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಅಂತ ಹೇಳಿದ್ದಾರೆ. ಹಾಗಾಗಿ ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯದೆ ನಮ್ಮ ನಮ್ಮ ಮನೆಗಳನ್ನು ನೇರಗೊಳಿಸಿಕೊಳ್ಳೋಣ ಎನ್ನುವ ಮೂಲಕ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.