ಕರ್ನಾಟಕ

karnataka

ಹೆದ್ದಾರಿ ಬಂದ್​ನಿಂದ ಬಸವಳಿದ ಲಾರಿ ಚಾಲಕರು; ಸಂಚಾರಕ್ಕೆ ಕಾದಿರುವವರಿಗೆ ಜಿಲ್ಲಾಡಳಿತದಿಂದ ಸದ್ಯದಲ್ಲೇ ಗ್ರೀನ್ ಸಿಗ್ನಲ್ - Shiruru hill collapse

By ETV Bharat Karnataka Team

Published : Jul 31, 2024, 7:14 PM IST

ಶಿರೂರು ಗುಡ್ಡ ಕುಸಿತದಿಂದಾಗಿ ಹೆದ್ದಾರಿಯಲ್ಲಿಯೇ ಸಾಕಷ್ಟು ವಾಹನ ಸವಾರರು ನಿಂತುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಸುರಕ್ಷತತೆ ಪರಿಶೀಲಿಸಿ ಸಂಚಾರ ಮುಕ್ತಗೊಳಿಸುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿದೆ.

uttara kannada
ಕಾರವಾರ (ETV Bharat)

ಲಾರಿ ಚಾಲಕ ಶೇಖರ್ ಮಾತನಾಡಿದರು (ETV Bharat)

ಕಾರವಾರ (ಉತ್ತರ ಕನ್ನಡ): ಶಿರೂರು ಗುಡ್ಡ ಕುಸಿತದಿಂದಾಗಿ ಚತುಷ್ಪಥ ಹೆದ್ದಾರಿ ಸಂಪರ್ಕ ಕಡಿತಗೊಂಡು ಎರಡು ವಾರಗಳೇ ಕಳೆದಿವೆ. ಹೆದ್ದಾರಿ ಉದ್ದಕ್ಕೂ ಸಾಲು ಸಾಲಾಗಿ ನಿಂತುಕೊಂಡಿರುವ ಲಾರಿಗಳ ಜೊತೆಗೆ ಅಸಂಖ್ಯಾತ ಸವಾರರು ಹೆದ್ದಾರಿಯಲ್ಲಿ ಓಡಾಡುವುದಕ್ಕೋಸ್ಕರ ಎದುರು ನೋಡುತ್ತಿದ್ದಾರೆ. ಆದರೆ, ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಸಂಚಾರ ಮುಕ್ತಗೊಳಿಸುವ ಬಗ್ಗೆ ಭರವಸೆ ನೀಡಿದ್ದ ಜಿಲ್ಲಾಡಳಿತ ಇದೀಗ ಸದ್ಯದಲ್ಲಿಯೇ ಸಂಚಾರ ಮುಕ್ತಗೊಳಿಸುವ ಭರವಸೆ ನೀಡಿದೆ.

ಜು.16 ರಂದು ಭಾರಿ‌ ಮಳೆಯಿಂದಾಗಿ ಶಿರೂರು ಗುಡ್ಡದ ಬಳಿ ಬೃಹತ್ ಗುಡ್ಡ ಕುಸಿತದಿಂದಾಗಿ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಇಂದಿಗೆ 16 ದಿನ ಕಳೆದರೂ ಕೂಡ ಸಂಚಾರಕ್ಕೆ ಮಾತ್ರ ಮುಕ್ತಗೊಂಡಿಲ್ಲ. ಹೆದ್ದಾರಿ ಮೇಲೆ ಬಿದ್ದಿರುವ ಕಲ್ಲು ಮಣ್ಣುಗಳನ್ನು ಕಳೆದ ನಾಲ್ಕು ದಿನಗಳ ಹಿಂದೆಯೇ ತೆರವು ಮಾಡಿದ್ದರೂ ಈ ಪ್ರದೇಶದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಭೀತಿಯ ಕಾರಣಕ್ಕೆ ಜಿಲ್ಲಾಡಳಿತ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಸುರಕ್ಷತತೆ ಪರಿಶೀಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಆದರೆ, ಕಳೆದ 16 ದಿನಗಳಿಂದ ಹೆದ್ದಾರಿ ಮಧ್ಯದಲ್ಲಿ ಸಿಲುಕಿಕೊಂಡು ಸಕಾಲದಲ್ಲಿ ಊಟ, ನಿದ್ರೆಯಿಲ್ಲದೇ ಸುರಿವ ಮಳೆಯಲ್ಲಿ ಕಾಲ ಕಳೆಯುತ್ತಿರುವ ಚಾಲಕರು ಹೆದ್ದಾರಿ ಸಂಚಾರದ ದಿನಗಳನ್ನೇ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಹುಬ್ಬಳ್ಳಿ, ಸಿರ್ಸಿ, ಮಂಗಳೂರು ಮಾರ್ಗವಾಗಿ ಸಾಗಿ ಬರುವ ವಾಹನಗಳು ರಾಜ್ಯ ಹೆದ್ದಾರಿ ಹಿಲ್ಲೂರು ಹಾಗೂ ಶಿರಗುಂಜಿಯ ಮಾರ್ಗವನ್ನು ಪರ್ಯಾಯ ರಸ್ತೆಯನ್ನಾಗಿಸಿಕೊಂಡಿವೆ. ಕಿರಿದಾಗಿರುವ ರಾಜ್ಯ ಹೆದ್ದಾರಿಯಲ್ಲಿ ಅಧಿಕ ಭಾರದ ವಾಹನಗಳ ಸಂಚಾರದಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ವಾಹನಗಳು ಸಂಚರಿಸಲು ಬಾರದಂತಾಗಿದೆ.

ಸಾಮರ್ಥ್ಯ ಕಳೆದುಕೊಂಡ ರಸ್ತೆಗಳ ಹಲವೆಡೆ ಬಹು ಭಾರದ ವಾಹನಗಳು, ಟೂರಿಸ್ಟ್ ಬಸ್​ಗಳು ಮಗುಚಿಕೊಳ್ಳತೊಡಗಿದ್ದು, ಕ್ರೇನ್ ಬಳಸಿ ಮೇಲಕ್ಕೆತ್ತುವ ಕಾರ್ಯ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಬಾಳೇಗುಳಿ, ಶಿರೂರು ಬಳಿ ಲಾರಿಗಳು ಒಂದರ ಹಿಂದೆ ಇನ್ನೊಂದು ಕಿ. ಮೀ ಉದ್ದದವರೆಗೆ ಸಾಲಾಗಿ ನಿಂತು ಕೊಂಡಿವೆ.

ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ಹೆದ್ದಾರಿಯನ್ನು ತೆರವುಗೊಳಿಸಲಾಗಿದೆ. ಪ್ರಾಯೋಗಿಕವಾಗಿ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಶಿರೂರು ಮಾರ್ಗವಾಗಿ ಒಂದಿಷ್ಟು ಲಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಟ್ಟಿದ್ದಾರೆ. ಆದರೆ, ಅಧಿಕೃತವಾಗಿ ಈವರೆಗೂ ಆರಂಭಗೊಳ್ಳದ ರಾಷ್ಟ್ರೀಯ ಹೆದ್ದಾರಿ ಸಂಚಾರದಿಂದಾಗಿ ಲಾರಿ ಚಾಲಕರು ಮುಂದೆ ಸಾಗರದಂತಹ ಸ್ಥಿತಿ ಕಂಡು ಬಂದಿದೆ.

'ಕಳೆದ 16 ದಿನಗಳಿಂದ ಲಾರಿಯಲ್ಲಿ ತುಂಬಿಕೊಂಡ ಸರಕುಗಳನ್ನು ಸಕಾಲದಲ್ಲಿ ತಲುಪಿಸಲಾಗದೇ ಕೆಟ್ಟು ಹೋದ ಉದಾಹರಣೆಗಳು ಸಾಕಷ್ಟಿವೆ. ಕಳೆದ ಹಲವಾರು ದಿನಗಳಿಂದ ನೆಲ ಕದಲದೇ ನಿಂತುಕೊಂಡಿದ್ದ ಲಾರಿಯ ಟೈರ್​ಗಳಲ್ಲಿ ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಸಂಚಾರಕ್ಕೆ ತೊಡಕುಂಟಾಗುವ ಸಾಧ್ಯತೆ ಇದೆ' ಎಂದು ಲಾರಿ ಚಾಲಕ ಶೇಖರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರನ್ನು ಕೇಳಿದಾಗ, ಶಿರೂರು ಗುಡ್ಡಕುಸಿತ ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಪರಿಶೀಲನೆ ನಡೆಸಿ ನಮಗೆ ವರದಿ ನೀಡಿದ್ದರು. ನೀರು ಹರಿದು ಬರುವಲ್ಲಿ ಕಾಲುವೆ ಸೃಷ್ಟಿಸಿ ಸರಾಗವಾಗಿ ಹರಿಯುವಂತೆ ಮಾಡುವುದು, ಅಪಾಯಕಾರಿ ಸ್ಥಳಗಳಲ್ಲಿ ಸಿಬ್ಬಂದಿ ನೇಮಕ, ಟ್ರಾಫಿಕ್ ಸಿಗ್ನಲ್​ಗಳ ಅಳವಡಿಕೆ, ಗುಡ್ಡದ ಬದಿಯಲ್ಲಿ ಕಾಮಗಾರಿ ನಡೆಸದಂತೆ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದರು.

ಈ ವರದಿಯನ್ನು ತುರ್ತು ಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ವರದಿ ಸಲ್ಲಿಕೆ ಮಾಡಿದೆ. ಶಿರೂರು ಬಳಿ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಸದ್ಯದಲ್ಲೇ ಹಂತ ಹಂತವಾಗಿ ಕೆಲವೊಂದು ಷರತ್ತುಗಳೊಂದಿಗೆ ವಾಹನಗಳನ್ನು ಬಿಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ :ನಾಪತ್ತೆಯಾದವರ ಪತ್ತೆಗೆ ಪಟ್ಟು ಬಿಡದ ಶಾಸಕ: ಡ್ರೆಜ್ಜಿಂಗ್ ಯಂತ್ರದ ಮೂಲಕ ಮತ್ತೊಂದು ಕಾರ್ಯಾಚರಣೆ - SHIRURU HILL COLLAPSE TRAGEDY

ABOUT THE AUTHOR

...view details