ಕರ್ನಾಟಕ

karnataka

ಮನೆ ಊಟಕ್ಕೆ ಅನುಮತಿ ಕೋರಿದ್ದ ಅರ್ಜಿ ಹಿಂಪಡೆದ ದರ್ಶನ್ - Darshan Withdraws Plea

By ETV Bharat Karnataka Team

Published : Jul 29, 2024, 6:07 PM IST

ಮನೆಯೂಟ, ಹಾಸಿಗೆ ಮತ್ತು ಪುಸ್ತಕ ಪೂರೈಕೆಗೆ ಅನುಮತಿಗೆ ಕೋರಿ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ದರ್ಶನ್​ ಹಿಂಪಡೆದಿದ್ದಾರೆ.

darshan
ದರ್ಶನ್ (Etv Bharat)

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಅವರು ಮನೆಯೂಟ, ಹಾಸಿಗೆ ಮತ್ತು ಪುಸ್ತಕ ಪೂರೈಕೆಗೆ ಅನುಮತಿಸಲು ಜೈಲಧಿಕಾರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ.

ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠದ‌ ಮುಂದೆ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಹೈಕೋರ್ಟ್ ನಿರ್ದೇಶನದಂತೆ ಮನೆ ಊಟ ಪೂರೈಸಲು ಜೈಲು ಅಧಿಕಾರಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ, ಹೈಕೋರ್ಟ್​​ನಲ್ಲಿ ಅರ್ಜಿ ಹಿಂಪಡೆಯಲು ಮೆಮೊ ಸಲ್ಲಿಸಿದ್ದೇವೆ. ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ಈ ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು. ಈ ಅಂಶ ಪುರಸ್ಕರಿಸಿದ ಪೀಠವು ಅರ್ಜಿ ಹಿಂಪಡೆಯಲು ಅನುಮತಿಸಿತು.

ವಿಚಾರಣೆ ವೇಳೆ, ''ಮನೆ ಊಟ ಪಡೆಯಲು ಇದೆಲ್ಲಾ ಮಾಡಬೇಕಾ? ಅದರಲ್ಲೇನಿದೆ? ಶುಚಿಯಾದ ಆಹಾರ ಪಡೆಯುವುದು ಮೂಲಭೂತ ಹಕ್ಕು. ಗುಜರಾತ್ ಹೈಕೋರ್ಟ್​ನಲ್ಲಿ ಪ್ರಕರಣವೊಂದರಲ್ಲಿ ಅಡ್ವೊಕೇಟ್ ಜನರಲ್ ಮನೆ ಊಟ ಪಡೆಯುವ ವಿಚಾರದ ಪ್ರಕರಣಕ್ಕೆ ಸಹಮತಿಸಿದ್ದಾರೆ'' ಎಂದು ನ್ಯಾಯಪೀಠ ತಿಳಿಸಿತು.

ಇದಕ್ಕೆ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್, ''ನಾವು ಮನೆಯೂಟಕ್ಕೆ ನಾವು ವಿರೋಧಿಸುತ್ತಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೆ ಕೊಡಬಹುದು ಎಂದಷ್ಟೇ ಹೇಳಿದ್ದೇವೆ'' ಎಂದು ತಿಳಿಸಿದರು.

ಪ್ರಕರಣ:ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನ್ಯಾಯಂಗ ಬಂಧನದಲ್ಲಿರುವ ದರ್ಶನ್ ಮನೆ ಊಟ ಕೋರಿ ಅರ್ಜಿ ಸಲ್ಲಿಸಿದರು. ‌ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿತ್ತು.

ಅದರಂತೆ ದರ್ಶನ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ-201ರ ಅಧಿನಿಯಮ 728ರ ಪ್ರಕಾರ ಕೊಲೆ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ನ್ಯಾಯಾಂಗ ಬಂಧನದಲ್ಲಿರು ಇತರೆ ವಿಚಾರಣಾಧೀನ ಕೈದಿಗಳು ಸ್ವಂತ ಖರ್ಚಿನಿಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್, ತಟ್ಟೆ ಹಾಗೂ ಕಪ್ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿರುತ್ತದೆ. ಅದರಂತೆ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಮನೆಯಿಂದ ಊಟ, ಬಟ್ಟೆ ಹಾಗೂ ಹಾಸಿಗೆ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ ಎಂದು ತಿಳಿಸಿತ್ತು.‌ ಇದೀಗ ಹೈಕೋರ್ಟ್​ನಲ್ಲಿ ಈಗಾಗಲೇ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲಾಗಿದೆ.

ಇದನ್ನೂ ಓದಿ:ಮನೆಯೂಟಕ್ಕೆ ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ - Darshan Petition Dismissed

ABOUT THE AUTHOR

...view details