ಕರ್ನಾಟಕ

karnataka

ETV Bharat / state

ಮಳೆ ಅನಾಹುತ ವರದಿ ತರಿಸಿಕೊಂಡಿದ್ದೇವೆ, ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮಳೆ ಅನಾಹುತದ ಬಗ್ಗೆ ಮಾತನಾಡಿದ್ದಾರೆ. ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : 4 hours ago

Updated : 3 hours ago

ಮೈಸೂರು :ಪ್ರಕೃತಿ ವಿಕೋಪದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿದರು (ETV Bharat)

ಚನ್ನಪಟ್ಟಣ ಮಾಜಿ ಶಾಸಕ ಸಿ. ಪಿ ಯೋಗೇಶ್ವರ್ ಅವರು ಕಾಂಗ್ರೆಸ್​ಗೆ ಸೇರಲು ಉತ್ಸುಕರಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್​ನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ತಿಳಿಸಿದರು.

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ. ತುಕಾರಾಂ ಅವರ ಪತ್ನಿ ಅವರಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ. ಕೆ ಸುರೇಶ್ ಅವರೂ ಕೂಡ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದು ಹೇಳಿದರು.

ವಸ್ತುಪ್ರದರ್ಶನ ಸ್ಥಗಿತ :ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿರುವ ದಸರಾ ವಸ್ತುಪ್ರದರ್ಶನ ಮೇಳದಲ್ಲಿ ಶೆಡ್​ವೊಂದು ಕುಸಿದು ಬಿದ್ದಿದೆ. ಇದರಿಂದ ದಿಢೀರ್ ಅಂತ ಒಂದು ದಿನದ ಮಟ್ಟಿಗೆ ವಸ್ತು ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.

ಧಾರಾಕಾರ ಮಳೆಗೆ ಕುಸಿದ ಮಳಿಗೆಯ ಶೀಟ್​ಗಳು (ETV Bharat)

ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದ ವಸ್ತುಪ್ರದರ್ಶನದ ಮೇಳದಲ್ಲಿದ್ದ
‘ಮಲ್ಲಿಗೆ ಇಡ್ಲಿ’ ಮಳಿಗೆಯು ಕುಸಿದು ಬಿದ್ದಿದೆ. ಜೊತೆಗೆ ಇನ್ನೂ ಕೆಲವು ಶೆಡ್‌ಗಳು ಹಾನಿಗೆ ಒಳಗಾಗಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ತಕ್ಷಣ ಇಡೀ ವಸ್ತುಪ್ರದರ್ಶನ‌ದ ಮಳಿಗೆಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ವಸ್ತು ಪ್ರದರ್ಶನದ ವೀಕ್ಷಣೆಗೆ ಬಂದಿದ್ದ ಸಾವಿರಾರು ಜನರನ್ನ ಮುನ್ನೆಚ್ಚರಿಕೆ‌ ಕ್ರಮವಾಗಿ ಹೊರಗೆ ಕಳುಹಿಸಲಾಗಿದೆ.

ಬೆಳಗ್ಗೆಯಿಂದಲೇ ಸಾಂಸ್ಕೃತಿಕ ನಗರಿಯಲ್ಲಿ ಸುರಿಯುತ್ತಿರುವ ಮಳೆಗೆ ಜನ - ಜೀವನ ಅಸ್ತವ್ಯಸ್ತವಾದರೆ, ಮತ್ತೊಂದು ಕಡೆ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿಯೂ ನೀರು ತುಂಬಿದ್ದರಿಂದ ಅಂತ್ಯ ಸಂ‌ಸ್ಕಾರ ನಡೆಸುವುದಕ್ಕೂ ಸಾಧ್ಯವಾಗಿಲ್ಲ.

ಇದನ್ನೂ ಓದಿ :ರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತ, ರಾಜ್ಯದಲ್ಲಿ 4 ದಿನ ಬಿರುಸಾದ ಮಳೆ: ಮತ್ತೆ ಯೆಲ್ಲೋ ಅಲರ್ಟ್ ಘೋಷಣೆ

Last Updated : 3 hours ago

ABOUT THE AUTHOR

...view details