ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಸಂಬಂಧ ನಗರಾಭಿವೃದ್ಧಿ ಸಚಿವ ಭರತಿ ಸುರೇಶ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಜಾರಿ ಮಾಡಿದ್ದ ಸಮನ್ಸ್ಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ. ತಮಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಭರತಿ ಸುರೇಶ್ ಮತ್ತು ಪಾರ್ವತಿ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ತಡೆಯಾಜ್ಞೆ ವಿಸ್ತರಿಸಿ ಆದೇಶಿಸಿತು.
ಮುಡಾಗೂ ಭೈರತಿಗೂ ಸಂಬಂಧವೇನು ? ಅರ್ಜಿ ವಿಚಾರಣೆ ವೇಳೆ ಭೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲರ ಸಿ.ವಿ. ನಾಗೇಶ್, ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೂ ನಮ್ಮ ಕಕ್ಷಿದಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೂ ಯಾವುದೇ ಸಂಬಂಧವಿಲ್ಲ. ಕೃತ್ಯ ನಡೆದ ಸಂದರ್ಭದಲ್ಲಿ ಅವರು ಮುಡಾದಲ್ಲಿ ಯಾವುದೇ ಹುದ್ದೆ ನಿರ್ವಹಿಸಿಲ್ಲ. ಪ್ರಕರಣದಲ್ಲಿ ಅವರು ಇಲ್ಲದಿದ್ದರೂ ಜಾರಿ ನಿರ್ದೇಶನಾಲಯ (ಇಡಿ) ಅನಗತ್ಯವಾಗಿ ಸಮನ್ಸ್ ಜಾರಿಗೊಳಿಸಿದೆ. ಅರ್ಜಿದಾರರು 2023ರ ಜೂನ್ ತಿಂಗಳಿನಿಂದ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲೇ ಮುಡಾದಲ್ಲಿ 14 ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ ಎನ್ನಲಾಗಿದೆ. ಅದಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರು ಮುಡಾದಲ್ಲಿ ಯಾವುದೇ ಹುದ್ದೆ ನಿರ್ವಹಿಸಿರಲಿಲ್ಲ. ಅರ್ಜಿದಾರರು ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ 2023ರ ಜೂನ್ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಬಂದಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, 90ರ ದಶಕ ಹಾಗೂ 2023ಕ್ಕೂ ಮೊದಲು ನಡೆದಿದೆ ಎನ್ನಲಾದ ನಿರ್ದಿಷ್ಟ ಪ್ರಕರಣವೊಂದರಲ್ಲಿ ಎಲ್ಲಿಯೂ ಅರ್ಜಿದಾರರ ಪಾತ್ರವಿಲ್ಲ. ಯಾವ ಕಾರಣಕ್ಕಾಗಿ ಅವರಿಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯ ಅಡಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ, ಅವರು ಎಸಗಿರುವ ಅಪರಾಧವಾದರೂ ಏನು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣದಲ್ಲಿ ಅರ್ಜಿದಾರರ ಸಣ್ಣ ಪಾತ್ರವನ್ನು ಇಡಿ ತೋರಿಸಿದರೆ, ಅದಕ್ಕೆ ಅವರು ಉತ್ತರ ನೀಡುತ್ತಾರೆ ಎಂದು ಸವಾಲೆಸೆದರು. ಜತೆಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವರ ಸಹೋದರ-ಸಹೋದರಿಯರು, ಮಗಳು, ಅಳಿಯ ಸೇರಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ವಿವರಗಳನ್ನು ಕೇಳಿದ್ದಾರೆ. ಪೂರ್ವಜರ ಆಸ್ತಿ, ಸ್ವಯಾರ್ಜಿತ ಆಸ್ತಿ, ಬ್ಯಾಂಕ್ ಲಾಕರ್ಗಳು, ವಾಹನಗಳು, ಪಾಸ್ಪೋರ್ಟ್, ಆಧಾರ್, ಯಾವ ಯಾವ ಭಾಷೆ ಗೊತ್ತಿದೆ ಎಂಬುದು ಸೇರಿ ಇನ್ನಿತರ ಮಾಹಿತಿಗಳನ್ನು ಕೇಳಿದ್ದಾರೆ. ಇವನ್ನೆಲ್ಲ ಇಡಿ ಏಕೆ ಕೇಳಬೇಕು? ಅವರಿಗೆ ಉತ್ತರಿಸುವ ಅಗತ್ಯವೇನಿದೆ? ಒಂದು ವೇಳೆ ಅರ್ಜಿದಾರರು ಉತ್ತರಿಸಬೇಕಿದ್ದರೆ ಕೇಂದ್ರ ಕಂದಾಯ ಇಲಾಖೆಗೆ ಹೊರತು ಜಾರಿ ನಿರ್ದೇಶನಾಲಯಕ್ಕೆ ಅಲ್ಲ. ಈ ಎಲ್ಲ ಕಾರಣಗಳಿಂದ ಅರ್ಜಿದಾರರಿಗೆ ಇಡಿ ಜಾರಿಗೊಳಿಸಿರುವ ಸಮನ್ಸ್ ರದ್ದುಗೊಳಿಸಬೇಕು ಎಂದು ಕೋರಿದರು.
ಸಿಎಂ ಸಿದ್ದರಾಮಯ್ಯರ ಪತ್ನಿ ಬಿ. ಎಂ. ಪಾರ್ವತಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಂದೇಶ್ ಚೌಟ, ಪಿಎಂಎಲ್ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಪ್ರಕರಣ (ಇಸಿಐಆರ್) ದಾಖಲಿಸುವವರೆಗೆ ಅಪರಾಧದ ಪ್ರಕ್ರಿಯೆಯೇ ಇರಲಿಲ್ಲ. ಹೀಗಿದ್ದಾಗ ಪ್ರಕರಣ ದಾಖಲಿಸಬಹುದೇ? ಮುಡಾದಲ್ಲಿ ನಡೆದಿದೆ ಎನ್ನಲಾದ (ಪ್ರಿಡಿಕೇಟ್) ಕೃತ್ಯದ ಸಂಬಂಧ ತನಿಖೆ ನಡೆಯುತ್ತಿರುವಾಗ, ಅದೇ ಕೃತ್ಯದ ಆರೋಪಗಳ ಮೇಲೆ ಪಿಎಂಎಲ್ ಕಾಯ್ದೆ ಅಡಿ ಪರ್ಯಾಯ ತನಿಖೆ ನಡೆಸಬಹುದೇ? ನಿವೇಶನ ಹಂಚಿಕೆ ಮಾಡಿದ್ದ ಮುಡಾದ ಮಾಜಿ ಆಯುಕ್ತ ನಟೇಶ್ ವಿರುದ್ಧದ ಸಮನ್ಸ್ ಮತ್ತು ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿರುವುದು ಈ ಪ್ರಕರಣದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಲಿದೆ? ಎಂದು ಪ್ರಶ್ನಿಸಿದರು. ಜತೆಗೆ, ಈ ಸಂಬಂಧ ಇಡಿ ಆಕ್ಷೇಪಣೆ ಸಲ್ಲಿಸಿದ ಬಳಿಕ ವಾದ ಮುಂದುವರಿಸುವುದಾಗಿ ತಿಳಿಸಿದರು.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.
ಇದನ್ನೂ ಓದಿ : ಲೋಕಾಯುಕ್ತ ಸ್ವತಂತ್ರ ಸಂಸ್ಥೆ, ಮುಡಾ ತನಿಖೆ ಮುಂದುವರೆಸಬಹುದು: ಹೈಕೋರ್ಟ್