ಬೆಂಗಳೂರು:ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಹಲವು ಹಣಕಾಸು ಲೆಕ್ಕಾಚಾರದೊಂದಿಗೆ ಸಿಎಂ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಹಲವು ಸವಾಲುಗಳ ಮಧ್ಯೆ ಬಜೆಟ್ ಮಂಡನೆ ಮಾಡಬೇಕಾಗಿದೆ.
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಎರಡನೇ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಈ ಸಲ ದಾಖಲೆಯ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಫೆ.16ಕ್ಕೆ ಸಿಎಂ ಸಿದ್ದರಾಮಯ್ಯ ಅವರು 2024-25 ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಹಲವು ಇಲಾಖೆಗಳ ಜೊತೆ ಸರಣಿ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿರುವ ಸಿಎಂ, ಸದ್ಯ ಅಂತಿಮ ಟಚ್ ನೀಡುವ ಹಂತದಲ್ಲಿದ್ದಾರೆ.
ಒಂದೆಡೆ ಲೋಕಸಭೆ ಚುನಾವಣೆ ಹಿನ್ನೆಲೆ ಅಭಿವೃದ್ಧಿ ಪೂರಕ ಆದಾಯ ಬಜೆಟ್ ಮಂಡನೆ ಕಾಂಗ್ರೆಸ್ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹೆಚ್ಚಿನ ರಾಜಸ್ವ ಕ್ರೋಢೀಕರಣಕ್ಕಾಗಿ ಹಲವು ಮಾರ್ಗೋಪಾಯಗಳ ಬಗ್ಗೆ ಸಿಎಂ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಹಾಕದೇ ಸಮತೋಲಿತ ಬಜೆಟ್ ಮಂಡಿಸುವ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ ಮುಂದಿದೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ನಾನಾ ಸವಾಲುಗಳು ಎದುರಾಗಿವೆ.
ಪಂಚ ಗ್ಯಾರಂಟಿಯ ಬೃಹತ್ ಹೊರೆ:ಸಿಎಂ ಸಿದ್ದರಾಮಯ್ಯಗೆ ಈ ಬಾರಿಯ ಬಜೆಟ್ ಮಂಡನೆ ವೇಳೆ ದೊಡ್ಡ ಸವಾಲಾಗಿರುವುದು ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು. 2023-24 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ 38,000 ಕೋಟಿ ರೂ. ಅನುದಾನ ಬೇಕಾಗಿದ್ದರೆ, 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೊಂದಿಸುವುದೇ ಕಾಂಗ್ರೆಸ್ ಸರ್ಕಾರಕ್ಕಾಗಿನ ಅತಿ ದೊಡ್ಡ ಸವಾಲಾಗಿದೆ.
ಒಂದೆಡೆ ಸೀಮಿತ ಆದಾಯ ಮೂಲ, ಇನ್ನೊಂದೆಡೆ ತೆರಿಗೆ ಸಂಗ್ರಹ ಗುರಿ ಮುಟ್ಟದೇ ಇರುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿ ಪಂಚ ಗ್ಯಾರಂಟಿಗಾಗಿ ಬೇಕಾಗಿರುವ ವಾರ್ಷಿಕ 58,000 ಕೋಟಿ ರೂ. ಹಣ ಹೊಂದಿಸಲು ನಾನಾ ಲೆಕ್ಕಾಚಾರಗಳನ್ನು ಹಾಕಬೇಕಾಗಿದೆ. ಒಂದೆಡೆ ಕೇಂದ್ರದಿಂದ ಅನುದಾನ ಅನ್ಯಾಯದ ಕೂಗಿನ ಮಧ್ಯೆ ಸ್ವಂತ ತೆರಿಗೆ ಮೂಲಕ ಹೆಚ್ಚಿನ ಆದಾಯದ ನಿರೀಕ್ಷೆಯೊಂದಿಗೆ ಬಜೆಟ್ ತಯಾರಿ ನಡೆಸುತ್ತಿದ್ದಾರೆ. ಪಂಚ ಗ್ಯಾರಂಟಿಗೆ ಹಣ ಹೊಂದಿಸಲು ಹೆಚ್ಚಿನ ಸಾಲದ ಮೊರೆ ಹೋಗುವ ಅನಿವಾರ್ಯತೆಯೂ ಎದುರಾಗಿದೆ.
ಬರ ನಿರ್ವಹಣೆಗಾಗಿ ಅನುದಾನ:ಇನ್ನು ಸಿಎಂ ಸಿದ್ದರಾಮಯ್ಯ ಈ ಬಾರಿ ಬಜೆಟ್ನಲ್ಲಿ ಬರ ನಿರ್ವಹಣೆಗಾಗಿ ಅನುದಾನ ಇಡುವ ಅನಿವಾರ್ಯತೆಯೂ ಇದೆ. ರಾಜ್ಯದ 223 ತಾಲೂಕುಗಳಲ್ಲಿ ಬರಕ್ಕೆ ತುತ್ತಾಗಿದೆ. ಬರದಿಂದ ಅಂದಾಜು ಸುಮಾರು 35,162 ಕೋಟಿ ರೂ. ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ನಡಿ 18,171.44 ಕೋಟಿ ರೂ. ಬರ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.