ಕರ್ನಾಟಕ

karnataka

ETV Bharat / state

'ಕಾರ್ಮಿಕರು ಸಿಡಿದೇಳುವ ಮುನ್ನ ಕಾರ್ಮಿಕ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸಿ' - Appointment of Labor Tribunal Chief

ಕಾರ್ಮಿಕರು ಸಿಡಿದೇಳುವ ಮುನ್ನ ಕಾರ್ಮಿಕ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್‌ ಸೂಚನೆ ನೀಡಿತು.

labor tribunal chief  workers outrage  High Court  Center government
ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮೌಖಿಕ ಸಲಹೆ

By ETV Bharat Karnataka Team

Published : Mar 20, 2024, 9:24 AM IST

ಬೆಂಗಳೂರು:ಕಾರ್ಮಿಕರು ಸಿಡಿದೇಳುವ ಮುನ್ನವೇ ಕೈಗಾರಿಕಾ ನ್ಯಾಯಾಧೀಕರಣದ ಬೆಂಗಳೂರು ಪೀಠದ (ಪ್ರಿಸೈಡಿಂಗ್ ಆಫೀಸರ್) ಮುಖ್ಯಸ್ಥರ ಹುದ್ದೆ ಭರ್ತಿಗೆ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಕಳೆದ ಮೂರು ವರ್ಷಗಳಿಂದ ಖಾಲಿ ಇರುವ ಹುದ್ದೆ ಭರ್ತಿಗೆ ನಿರ್ದೇಶನ ನೀಡುವಂತೆ ಕೋರಿ ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಮೇಲ್ಕಂಡಂತೆ ಮೌಖಿಕ ಸಲಹೆ ನೀಡಿತು.

ವಿಚಾರಣೆ ವೇಳೆ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಪ್ರತಿಕ್ರಿಯಿಸಿ, ಮುಖ್ಯಸ್ಥರ ನೇಮಕಾತಿಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಕಾರ್ಮಿಕ ವರ್ಗಕ್ಕೆ ತೊಂದರೆಯಾಗುತ್ತಿದೆ. ಕಾರ್ಮಿಕರು ಇನ್ನೆಷ್ಟು ದಿನ ಕಾಯಬೇಕು? ಕಾಯುವಿಕೆಗೂ ಒಂದು ಕಾಲಮಿತಿ ಇರುತ್ತದೆ. ಕಾರ್ಮಿಕರು ರಸ್ತೆಯಲ್ಲಿ ನಿಂತು ಸಿಡಿದೇಳುವ ಮುನ್ನ ಪೀಠದ ಮುಖ್ಯಸ್ಥರನ್ನು ನೇಮಿಸಿ ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನ್ಯಾಯಾಧೀಕರಣದ ಮುಖ್ಯಸ್ಥರ ಹುದ್ದೆ ಕಳೆದ ಮೂರು ವರ್ಷಗಳಿಂದ ಖಾಲಿ ಇದೆ. ಆ ಹುದ್ದೆ ಭರ್ತಿಗೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಆದರೂ ಈವರೆಗೂ ನೇಮಕ ಮಾಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಕೇಂದ್ರ ಸರ್ಕಾರ ಪರ ವಕೀಲರು, ಮುಖ್ಯಸ್ಥರ ಹುದ್ದೆ ನೇಮಕಾತಿ ವಿಳಂಬ ವಿಚಾರದಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ 10 ಲಕ್ಷ ರೂ ಠೇವಣಿ ಇಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ 2023ರ ಅ.25ರಂದು ಆದೇಶಿಸಲಾಗಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದ್ದು, ಆದೇಶ ರದ್ದುಗೊಂಡಿತ್ತು. ಜತೆಗೆ, ಮುಖ್ಯಸ್ಥರ ನೇಮಕಾತಿಗೆ ಕೋರ್ಟ್ ಜೂ.30ರವರೆಗೆ ಕಾಲಾವಕಾಶ ನೀಡಿದೆ ಎಂದು ತಿಳಿಸಿ, ಆ ಕುರಿತ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಮುಖ್ಯಸ್ಥರ ಹುದ್ದೆ ನೇಮಕಾತಿಗೆ ಸುಪ್ರೀಂ ಕೋರ್ಟ್ ಜೂನ್ 30ರವರೆಗೆ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೊಲೆ ಕೇಸ್: ಆರೋಪಿ ಮೊಹಮ್ಮದ್ ಜಬೀರ್‌ಗೆ ಜಾಮೀನು ನಿರಾಕರಣೆ

ABOUT THE AUTHOR

...view details