ಬೆಂಗಳೂರು/ನವದೆಹಲಿ:ಕೇಂದ್ರ ಸರ್ಕಾರ ವಿಶಾಖಪಟ್ಟಣಕ್ಕೆ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ (RINl) ಪುನಶ್ಚೇತನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಐಟಿ ಸಚಿವ ನಾ.ರಾ.ಲೋಕೇಶ್ ಅವರು, ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾದ ನಾ.ರಾ.ಲೋಕೇಶ್ ಅವರು ವೈಜಾಗ್ ಸ್ಟೀಲ್ ಪುನಶ್ಚೇತನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಖಾತೆ ಸಚಿವರನ್ನು ಭೇಟಿಯಾದ ಲೋಕೇಶ್ ಅವರು, ಬಹುಮುಖ್ಯವಾಗಿ ವೈಜಾಗ್ ಸ್ಟೀಲ್ ಪುನಶ್ಚೇತನ ಯೋಜನೆ ಹಾಗೂ ಭವಿಷ್ಯದಲ್ಲಿ ಕಾರ್ಖಾನೆಯನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಸಬೇಕು ಎಂಬ ಬಗ್ಗೆ ಸವಿಸ್ತಾರವಾಗಿ ಸಮಾಲೋಚನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ನಿಗದಿ ಮಾಡಿದ್ದು, ಅದರಂತೆ ನಾವು ಉಕ್ಕು ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕಿದೆ. ಅದರಲ್ಲಿಯೂ ಪರಿಸರ ಪೂರಕವಾದ ಗ್ರೀನ್ ಸ್ಟೀಲ್, ಸ್ಪೆಶಾಲಿಟಿ ಸ್ಟೀಲ್ ತಯಾರಿಕೆಯಲ್ಲಿ ಭಾರತ ಮುಂಚೂಣಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ವೈಜಾಗ್ ಸ್ಟೀಲ್ಗೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಲೋಕೇಶ್ ಅವರಿಗೆ ಸಚಿವರು ಹೇಳಿದರು.
ಪ್ಯಾಕೇಜ್ ಪರಿಣಾಮಕಾರಿ ಬಳಕೆ ಹಾಗೂ ನಿಗದಿತ ಗುರಿಯಂತೆ ಕಾರ್ಖಾನೆಯ ಮೂರು ಬ್ಲಾಸ್ಟ್ ಫರ್ ನೆಸ್ (ಊದು ಕುಲುಮೆ)ಗಳ ಮೂಲಕ ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ತಯಾರು ಮಾಡುವುದು ಕೇಂದ್ರದ ಗುರಿಯಾಗಿದೆ. ಈ ಗುರಿ ಸಾಧನೆಗೆ ಆಂಧ್ರ ಪ್ರದೇಶದ ಸರ್ಕಾರ ಹಾಗೂ ಕಾರ್ಮಿಕರ ಸಹಕಾರ ಅತ್ಯಗತ್ಯವಾಗಿ ಬೇಕಿದೆ ಎಂದರು.