ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ಹೆಂಡತಿಗೆ ನಿದ್ರೆ ಮಾತ್ರೆ ನೀಡಿ ಕತ್ತು ಹಿಸುಕಿ ಸಹಜ ಸಾವೆಂದು ಬಿಂಬಿಸಿದ್ದ ಗಂಡನನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಚೇತನಾಳನ್ನು(42) ಹತ್ಯೆ ಮಾಡಿದ ಆರೋಪದಡಿ ಪತಿ ಶರತ್ ಉತ್ತಂಗಿ (43) ಎಂಬವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತಳ ಸಂಬಂಧಿ ಅಕ್ಷಯ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಶರತ್, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ದಂಪತಿಗೆ ಹೆಣ್ಣುಮಗುವಿದೆ. ಕಳೆದೊಂದು ವರ್ಷದಲ್ಲಿ ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇಬ್ಬರಿಗೂ ಕೈತುಂಬಾ ಸಂಬಳ ಬರುತಿತ್ತು. ಏತನ್ಮಧ್ಯೆ ಹಣಕಾಸಿನ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತಿತ್ತು. ಫೆ.3ರಂದು ದಂಪತಿ ನಡುವೆ ಗಲಾಟೆಯಾಗಿದೆ. ಜ್ವರದ ಮಾತ್ರೆಯ ಸೋಗಿನಲ್ಲಿ ಪತ್ನಿಗೆ ನಿದ್ರೆ ಮಾತ್ರೆ ನೀಡಿದ್ದ. ಬಳಿಕ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕತ್ತುಹಿಸುಕಿ ಪತಿ ಸಾಯಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹತ್ಯೆ ಮಾಡಿ ಸುಳ್ಳು ಕಥೆ ಕಟ್ಟಿದ್ದ: ಫೆ.3ರಂದು ಸುಸ್ತು, ತಲೆ ಸುತ್ತು ಬಂದಿದೆ ಎಂದು ಪತ್ನಿ ಚೇತನಾ ತನ್ನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಜ್ವರದ ಮಾತ್ರೆ ನೀಡಿದೆ. ರಾತ್ರಿ ಎಂದಿನಂತೆ ಮಲಗಿದ್ದಳು. ಮಧ್ಯರಾತ್ರಿ 2.30ಕ್ಕೆ ಪಕ್ಕದಲ್ಲಿ ಮಲಗಿದ್ದ ಹೆಂಡತಿಯು ಮಂಚದಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ಮಗಳನ್ನು ಎಬ್ಬಿಸಿ, ನೆಲಮಹಡಿಯಲ್ಲಿ ವಾಸವಿದ್ದವರ ಸಹಾಯದಿಂದ ಕೂಡಲೇ ಖಾಸಗಿ ಆಸ್ಪತ್ರೆ ಸೇರಿಸಿದರೂ ಮಾರ್ಗಮಧ್ಯೆದಲ್ಲಿ ಪತ್ನಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿರುವುದಾಗಿ ಸಂಬಂಧಿಕರ ಮುಂದೆ ಸುಳ್ಳು ಹೇಳಿದ್ದ. ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಹಾಗೂ ಕೆನ್ನೆಯಲ್ಲಿ ತರಚಿದ ಗಾಯವಿರುವುದನ್ನು ಗಮನಿಸಿದ್ದರು. ಚೇತನಾಳನ್ನು ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ; ಶವ ಬಿಸಾಡಿ ನಾಪತ್ತೆ ನಾಟಕವಾಡಿದ ಪತ್ನಿ - WIFE KILLED HIS HUSBAND