ಕರ್ನಾಟಕ

karnataka

ಬೆಂಗಳೂರು: ಪಾಸ್ ವರ್ಡ್ ಬದಲಿಸಿ 56 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ವರ್ಗಾವಣೆ, ಎಂಜಿನಿಯರ್ ಅರೆಸ್ಟ್ - Crypto currency Laundering

By ETV Bharat Karnataka Team

Published : Sep 10, 2024, 6:05 PM IST

ಪಾಸ್​ ವರ್ಡ್ ಬದಲಿಸಿ 56 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ವರ್ಗಾಯಿಸಿ ವಂಚಿಸಿದ ಕಂಪನಿ ನೌಕರನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಕ್ರಿಪ್ಟೊ ಕರೆನ್ಸಿಯನ್ನು ಕುಟುಂಬಸ್ಥರು, ಸ್ನೇಹಿತರಿಗೆ ವರ್ಗಾವಣೆ ಮಾಡಿದ್ದಲ್ಲದೇ, ಕೆಲವರಿಗೆ ಸಾಲವಾಗಿ ಕೂಡ ನೀಡಿದ್ದ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ.

ಆರೋಪಿ
ಆರೋಪಿ (ETV Bharat)

ಬೆಂಗಳೂರು: ಕ್ರಿಪ್ಟೊ ಕರೆನ್ಸಿ ಖಾತೆಯ ಪಾಸ್ ವರ್ಡ್ ಬದಲಾಯಿಸಿ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಕಂಪನಿ ನೌಕರರನ್ನ ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಸೈಪರ್ ಟೆಕ್ನಾಲಜೀಸ್ ಪ್ರೈವೇಟ್ ಕಂಪನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಅಖಿಲ್ ಗುಪ್ತ ಎಂಬುವರು ನೀಡಿದ ದೂರಿನ ಮೇರೆಗೆ ಹರಿಯಾಣ ಮೂಲದ ಶುಭಾಂಗ್ ಜೈನ್ (26) ಎಂಬವನನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ನ್ಯಾಯಾಲಯದಿಂದ ಆರೋಪಿ ಜಾಮೀನು ಪಡೆದು ಹೊರ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

56 ಕೋಟಿ ರೂ ಮೌಲ್ಯದ ಕ್ರಿಪ್ಟೋ ವರ್ಗಾವಣೆ:ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಪರ್ ಟೆಕ್ನಾಲಜೀಸ್ ಕಂಪನಿಯಲ್ಲಿ ಕ್ರಿಪ್ಟೊ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಆರೋಪಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಕಂಪನಿಯ ಖಾತೆಯಲ್ಲಿದ್ದ ಕ್ರಿಪ್ಟೊ ಕರೆನ್ಸಿ ವಾಲೆಟ್ ಪಾಸ್ ವರ್ಡ್​ಅನ್ನ ಮಾಲೀಕರ ಗಮನಕ್ಕೆ ತರದೇ ಬದಲಾಯಿಸಿದ್ದ. ಖಾತೆಯಲ್ಲಿದ್ದ 56 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ವರ್ಗಾಯಿಸಿ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್​​ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡವು ಆರೋಪಿಯನ್ನ ಮುಂಬೈನಲ್ಲಿ ಬಂಧಿಸಲಾಗಿದೆ.

ಕುಟುಂಬಸ್ಥರು, ಸ್ನೇಹಿತರಿಗೆ ಹಣ ವರ್ಗಾವಣೆ:ಹರಿಯಾಣ ಮೂಲದ ಆರೋಪಿಯು ತಮಿಳುನಾಡಿನ ವೆಲ್ಲೂರು ಇನ್​​ಸ್ಟಿಟ್ಯೂಟ್​​ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ, 2021ರಲ್ಲಿ ಕೆಲಸಕ್ಕೆ ಸೇರಿ ಕೋಟ್ಯಂತರ ರೂಪಾಯಿ ಅವ್ಯವಹಾರವೆಸಗಿದ್ದ. ಅಕ್ರಮವಾಗಿ ಹಣ ವರ್ಗಾಯಿಸಿಕೊಂಡು ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಹಣ ಟ್ರಾನ್ಸಫರ್​ ಮಾಡಿದ್ದ. ಅಲ್ಲದೇ ಕೆಲ ಸ್ನೇಹಿತರಿಗೆ ಕ್ರಿಪ್ಟೊ ವಾಲೆಟ್ ಮೂಲಕ ಹತ್ತಾರು ಜನರಿಗೆ ಲಕ್ಷಾಂತರ ರೂಪಾಯಿ ಹಣವನ್ನ ಸಾಲವಾಗಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಂಪನಿಯಲ್ಲಿ ಕೆಲಸ ಮಾಡುವಾಗ ನಗರದ ಹೆಚ್ ಎಸ್ ಆರ್ ಲೇಔಟ್​​ನಲ್ಲಿ ಉಳಿದುಕೊಂಡಿದ್ದ ಶುಭಾಂಗ್, ಕೆಲಸ ತೊರೆದ ಬಳಿಕ ಅಹಮದಾಬಾದ್​​ನಲ್ಲಿ ವಾಸ್ತವ್ಯ ಹೂಡಿದ್ದ. ಬಂಧನ ಭೀತಿಯಿಂದ ಅಹಮದಾಬಾದ್​ನಿಂದ ಮುಂಬೈನಲ್ಲಿ ವಾಸ್ತವ್ಯ ಹೂಡಲು ಮುಂದಾದಾಗ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಮುಂಬೈನಲ್ಲಿ ಬಂಧಿಸಿದ್ದಾರೆ.

ಕೋಟ್ಯಂತರ ರೂಪಾಯಿ ವಂಚನೆ ಸಂಬಂಧ ಆರೋಪಿ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಲಾಗಿದೆ. ಕ್ರಿಪ್ಟೊ ವಾಲೆಟ್​​ನಿಂದ ಯಾರಿಗೆ ಎಷ್ಟು ಹಣ ನೀಡಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಪಟ್ಟಿಯಲ್ಲಿನ ದರ್ಶನ್ ವಿರುದ್ಧದ ರಹಸ್ಯ ಮಾಹಿತಿ ಪ್ರಸಾರಕ್ಕೆ ಹೈಕೋರ್ಟ್ ನಿರ್ಬಂಧ - Renukaswamy Murder Case

ABOUT THE AUTHOR

...view details