ಕರ್ನಾಟಕ

karnataka

ಐಒಎ ಮುಖ್ಯಸ್ಥೆ ಪಿಟಿ ಉಷಾ ಕುರಿತು ಗಂಭೀರ ಆರೋಪ ಮಾಡಿದ ವಿನೇಶ್​ ಫೋಗಟ್​​: ಏನದು ಆರೋಪ? - Vinesh Phogat Slams PT Usha

By ETV Bharat Karnataka Team

Published : Sep 11, 2024, 5:01 PM IST

Vinesh Phogat Slams PT Usha : ಆಸ್ಪತ್ರೆಯಲ್ಲಿದ್ದಾಗ ಪಿಟಿ ಉಷಾ ಭೇಟಿಯಾದ ಕುರಿತು ಯೂಟ್ಯೂಬ್​ನಲ್ಲಿ ಮಾತನಾಡಿರುವ ಪೋಗಟ್​, ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ

vinesh-phogat-made-big-allegations-on-pt-usha-slams-politics-during-paris-olympics
ವಿನೇಶ್​ ಫೋಗಟ್​​ (ANI)

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅನರ್ಹತೆಗೊಂಡ ಬೆನ್ನಲ್ಲೇ ಕುಸ್ತಿಗೆ ರಾಜೀನಾಮೆ ಘೋಷಿಸಿದ್ದ ವಿನೇಶ್​ ಫೋಗಟ್​ ರಾಜಕೀಯ ಪ್ರವೇಶ ಮಾಡಿ, ಇದೀಗ ಚುನಾವಣೆ ಅಖಾಡದಲ್ಲಿ ನಿಂತಿದ್ದಾರೆ. ಕಳೆದ ವಾರ ಕಾಂಗ್ರೆಸ್​ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಅವರು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ ಕ್ಷೇತ್ರದ ಕೈ ಅಭ್ಯರ್ಥಿಯಾಗಿದ್ದಾರೆ. ಈ ನಡುವೆ ಅಜಿತ್​​ ಅಂಜುಮ್​ ಅವರ ಯೂಟ್ಯೂಬ್​ ಚಾನಲ್​ಗೆ ಮಾತನಾಡಿರುವ ಅವರು, ಭಾರತೀಯ ಒಲಿಂಪಿಕ್​​​ ಅಸೋಸಿಯೇಷನ್​ ಅಧ್ಯಕ್ಷರಾದ ಪಿಟಿ ಉಷಾ ಕುರಿತಾಗಿ ಗಂಭೀರ ಆರೋಪ ಮಾಡಿದ್ದಾರೆ.

ಒಲಿಂಪಿಕ್ಸ್​​ನಲ್ಲಿ 50 ಕೆಜಿ ವಿಭಾಗದ ಕುಸ್ತಿಯಲ್ಲಿ ಅಂತಿಮ ಸುತ್ತಿನವರೆಗೆ ವಿನೇಶ್​ ಪೋಗಟ್​ ಸಾಗಿದ್ದರು. ಇನ್ನೇನು ಪದಕ ಖಚಿತ ಎನ್ನುವ ಹೊತ್ತಿನಲ್ಲಿ ಪರಿಸ್ಥಿತಿ ಬದಲಾಗಿತ್ತು. ಅಂತಿಮ ಸುತ್ತಿಗೆ ಮುನ್ನ ವಿನೇಶ್​ ತೂಕ 100ಗ್ರಾಂ ಹೆಚ್ಚಳ ಕಂಡ ಹಿನ್ನೆಲೆ ಅವರು ಸ್ಪರ್ಧೆಯಿಂದ ಅನರ್ಹತೆಗೊಂಡರು. ರಾತ್ರೋ ರಾತ್ರಿ ಹೆಚ್ಚಾದ ಎರಡು ಕೆಜಿ ತೂಕ ಇಳಿಕೆಗೆ ಇನ್ನಿಲ್ಲದಂತೆ ಕಸರತ್ತು ಮಾಡಿದ್ದಾರೆ. ಇದರಿಂದ ನಿರ್ಜಲೀಕರಣಕ್ಕೆ ಒಳಗಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಅಧ್ಯಕ್ಷರಾದ ಪಿಟಿ ಉಷಾ, ವಿನೇಶ್​ ಅವರನ್ನು ಭೇಟಿಯಾಗಲು ಬಂದಿದ್ದರು.

ಪಿಟಿ ಉಷಾ ಮೇಲೆ ಗಂಭೀರ ಆರೋಪ: ಆಸ್ಪತ್ರೆಯಲ್ಲಿದ್ದಾಗ ಪಿಟಿ ಉಷಾ ಭೇಟಿಯಾದ ಕುರಿತು ಯೂಟ್ಯೂಬ್​ನಲ್ಲಿ ಮಾತನಾಡಿರುವ ಅವರು, 50 ಕೆಜಿ ಕುಸ್ತಿ ಅಂತಿಮ ಸುತ್ತಿಗೆ ಮುನ್ನಾ ದಿನ ನಾನು ಆಸ್ಪತ್ರೆಗೆ ದಾಖಲಾದೆ. ಈ ವೇಳೆ ಪಿಟಿ ಉಷಾ ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರಿಂದ ನನಗೆ ಯಾವುದೇ ಸಹಾಯವಾಗಲಿಲ್ಲ. ಅವರು ರಾಜಕೀಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನಾನು ಕುಸ್ತಿಯನ್ನು ಮುಂದುವರೆಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನನಗೆ ಅಲ್ಲಿ ಯಾವ ರೀತಿ ಸಹಾಯ ಸಿಕ್ಕಿತು ಎಂಬುದು ನನಗೆ ಗೊತ್ತಿಲ್ಲ. ಪಿಟಿ ಉಷಾ ಮೇಡಂ ನನ್ನನ್ನು ಆಸ್ಪತ್ರೆಯಲ್ಲಿ ಭೇಟಿಯಾದರು. ಫೋಟೋ ಕ್ಲಿಕ್ಕಿಸಿಕೊಂಡರು. ಆದರೆ ಮುಚ್ಚಿದ ದ್ವಾರದ ಹಿಂದೆ ಸಾಕಷ್ಟು ರಾಜಕೀಯ ನಡೆಯಿತು. ಅದೇ ರೀತಿಯ ರಾಜಕೀಯ ಪ್ಯಾರಿಸ್​ನಲ್ಲಿ ಕೂಡ ಆಯಿತು. ಇದೇ ಕಾರಣಕ್ಕೆ ನನ್ನ ಹೃದಯ ಒಡೆಯಿತು. ಅನೇಕ ಜನರು ನನಗೆ ಕುಸ್ತಿ ಬಿಡಬೇಡಿ. ಮುಂದುವರೆಸಿ ಎಂದರು, ಆದರೆ, ಎಲ್ಲ ಕಡೆ ಸಾಕಷ್ಟು ರಾಜಕೀಯ ಇದೆ ಅಂತಾನೂ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಆಸ್ಪತ್ರೆಯ ಬೆಡ್​​ ಮೇಲಿದ್ದ ನನಗೆ ಹೊರಗೆ ನಡೆಯುತ್ತಿರುವ ಅನೇಕ ವಿಷಯಗಳ ಬಗ್ಗೆ ತಿಳಿಯುತ್ತಿರಲಿಲ್ಲ. ನಿಮ್ಮ ಜೀವನದ ಕೆಟ್ಟ ಹಂತದಲ್ಲಿ ನೀವಿದ್ದೀರಿ. ಇಂತಹ ಸಂದರ್ಭದಲ್ಲಿ ನೀವು ಜೊತೆಗಿದ್ದೇವೆ ಎಂದು ಎಲ್ಲರಿಗೂ ತಿಳಿಯುವ ಉದ್ದೇಶದಿಂದ ನನಗೆ ಹೇಳದೇ ಫೋಟೋ ತೆಗೆದುಕೊಂಡಿರಿ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಾಕಿ ನಿಮ್ಮ ಜೊತೆ ಇದ್ದೇನೆ ಎಂದು ಹೇಳಿದ್ದೀರಿ. ಈ ರೀತಿ ನನಗೆ ಬೆಂಬಲ ವ್ಯಕ್ತಪಡಿಸುವ ಬಗೆಯಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.

ಇದನ್ನೂ ಓದಿ: ತಿಂಗಳ ಸಂಬಳ ಪಾವತಿಸಿಕೊಂಡು ವಿನೇಶ್​​ ಫೋಗಟ್​, ಭಜರಂಗ್​ ಪುನಿಯಾ ರಾಜೀನಾಮೆ ಅಂಗೀಕರಿಸಿದ ರೈಲ್ವೆ

ABOUT THE AUTHOR

...view details