ಕರ್ನಾಟಕ

karnataka

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ: ಟಿ-20 ತಂಡಕ್ಕೆ ಸೂರ್ಯ ನಾಯಕ, ಏಕದಿನಕ್ಕೆ ರೋಹಿತ್ ಕ್ಯಾಪ್ಟನ್​ - TEAM INDIA SQUAD ANNOUNCE

By ETV Bharat Karnataka Team

Published : Jul 18, 2024, 8:46 PM IST

ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಯಿತು. ಶುಭ್​ಮನ್​ ಗಿಲ್​​ ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕರಾಗಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ
ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ (ETV Bharat)

ಈ ತಿಂಗಳ ಕೊನೆಯಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡವನ್ನ ಗುರುವಾರ ಪ್ರಕಟಿಸಲಾಯಿತು. ಚುಟುಕು ಮಾದರಿಯ ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ನಾಯಕನಾದರೆ, ಏಕದಿನ ಪಂದ್ಯಗಳಿಗೆ ರೋಹಿತ್​ ಶರ್ಮಾ ಕ್ಯಾಪ್ಟನ್​ ಆಗಿ ಮುಂದುವರಿಯಲಿದ್ದಾರೆ. ಹಾರ್ದಿಕ್​ ಪಾಂಡ್ಯಗೆ ಎರಡೂ ಮಾದರಿಯಲ್ಲಿ ಯಾವುದೇ ಹೊಣೆಗಾರಿಕೆ ನೀಡಲಾಗಿಲ್ಲ. ಎರಡೂ ಸರಣಿಗಳಿಗೆ ಶುಭ್​​ಮನ್​​ಗಿಲ್​ಗೆ ಉಪನಾಯಕತ್ವ ನೀಡಲಾಗಿದೆ.

ನಿರೀಕ್ಷೆಯಂತೆ ಹಾರ್ದಿಕ್​ರ ಬದಲಿಗೆ ಟಿ-20 ಮಾದರಿಗೆ ಹೊಸ ನಾಯಕನ ಆಯ್ಕೆಯಾಗಿದೆ. ಸೂರ್ಯಕುಮಾರ್​ ಯಾದವ್​​ಗೆ ನಾಯಕತ್ವ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಯಾಗಿತ್ತು. ಅದರಂತೆ ಸೂರ್ಯಗೆ ಕ್ಯಾಪ್ಟನ್ಸಿ ನೀಡಲಾಗಿದೆ. ಹಾರ್ದಿಕ್​​ ಪಾಂಡ್ಯ ಆಗಾಗ್ಗೆ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಸ್ಥಿರ ನಾಯಕತ್ವ ಕಾಪಾಡಲು ಸೂರ್ಯಗೆ ಮಣೆ ಹಾಕಲಾಗಿದೆ.

ಗಿಲ್​ಗೆ ಧಮಾಕಾ, ಹಾರ್ದಿಕ್​​ಗೆ ಕೊಕ್​:ಇತ್ತೀಚೆಗೆ ಮುಗಿದ ಜಿಂಬಾಬ್ವೆ ಪ್ರವಾಸದಲ್ಲಿ ಭಾರತವನ್ನು ಮುನ್ನಡೆಸಿದ್ದ ಶುಭಮನ್ ಗಿಲ್ ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕರಾಗಿದ್ದಾರೆ. ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದ ಹಾರ್ದಿಕ್​ ಬದಲಿಗೆ ಯುವ ಆಟಗಾರನಿಗೆ ಪಟ್ಟ ಕಟ್ಟಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಹಾರ್ದಿಕ್ ಅವರ ಫಿಟ್‌ನೆಸ್ ಬಗ್ಗೆ ಆಯ್ಕೆ ಸಮಿತಿ ಅಸಮಾಧಾನ ಹೊಂದಿದೆ. ಹೀಗಾಗಿ ಅವರನ್ನು ಉಪನಾಯಕ ಸ್ಥಾನದಿಂದ ಕೈಬಿಡಲಾಗಿದೆ.

ಜಿಂಬಾಬ್ವೆ ಸರಣಿಯಲ್ಲಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಮತ್ತು ಅಭಿಷೇಕ್ ಶರ್ಮಾರನ್ನು ಸರಣಿಗೆ ಪರಿಗಣಿಸಿಲ್ಲ. ವಾಷಿಂಗ್ಟನ್​ ಸುಂದರ್​​, ರಿಯಾನ್​ ಪರಾಗ್​ರನ್ನು ತಂಡದಲ್ಲಿ ಮುಂದುವರಿಸಲಾಗಿದೆ. ಕೆಎಲ್​ ರಾಹುಲ್​​ಗೆ ತಂಡದಲ್ಲಿ ಕೊಕ್​ ನೀಡಲಾಗಿದೆ. ಯಜುವೇಂದ್ರ ಚಹಲ್​ ಬದಲಿಗೆ ರವಿ ಬಿಷ್ಣೋಯ್​ಗೆ ಅವಕಾಶ ನೀಡಲಾಗಿದೆ

ಏಕದಿನ ತಂಡಕ್ಕೆ ವಾಪಸ್ಸಾದ ರಾಹುಲ್​, ಅಯ್ಯರ್​:ಏಕದಿನ ತಂಡವನ್ನೂ ಪ್ರಕಟಿಸಲಾಗಿದ್ದು, ಕೆಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ವಾಪಸ್​ ಆಗಿದ್ದಾರೆ. ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರೂ ತಂಡದಲ್ಲಿದ್ದಾರೆ. ರೋಹಿತ್​ ನಾಯಕರಾಗಿ ಮುಂದುವರಿಯಲಿದ್ದಾರೆ. ವೇಗಿ ಜಸ್ಪ್ರೀತ್​ ಬುಮ್ರಾ, ಆಲ್​ರೌಂಡರ್​ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

ಯುವ ವೇಗಿಗಳಾದ ಹರ್ಷಿತ್ ರಾಣಾ, ಖಲೀಲ್ ಅಹ್ಮದ್​​ರಿಗೆ ಅವಕಾಶ ನೀಡಲಾಗಿದೆ. ಮೊಹಮ್ಮದ್ ಸಿರಾಜ್​, ಅರ್ಷದೀಪ್ ಸಿಂಗ್ ತಂಡದ ವೇಗವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್​​ನಲ್ಲಿ ಸ್ಥಾನ ಗಳಿಸಿದ್ದ ರಿಷಬ್​ ಪಂತ್​, ಏಕದಿನಕ್ಕೂ ಎಂಟ್ರಿ ನೀಡಿದ್ದಾರೆ. ಅಕ್ಷರ್​ ಪಟೇಲ್​ ಏಕದಿನ ಮತ್ತು ಟಿ20 ಎರಡರಲ್ಲೂ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಜುಲೈ 27 ರಿಂದ ಪಲ್ಲೆಕೆಲೆಯಲ್ಲಿ ಮೊದಲ ಟಿ20 ಮೂಲಕ ಸರಣಿ ಆರಂಭವಾಗಲಿದೆ. ಕೊಲಂಬೊದ ಆರ್​. ಪ್ರೇಮದಾಸ್​ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಟಿ20 ತಂಡ:ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಏಕದಿನ ತಂಡ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ರಿಷಬ್ ಪಂತ್ (ವಿಕೆಟ್​ ಕೀಪರ್​), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಇದನ್ನೂ ಓದಿ:ಭಾರತೀಯ ಬ್ಯಾಟರ್​ಗಳ ಐಸಿಸಿ ಶ್ರೇಯಾಂಕ ಹೆಚ್ಚಿಸಿದ ಜಿಂಬಾಬ್ವೆ ಸರಣಿ: ಯಶಸ್ವಿ ಜೈಸ್ವಾಲ್​ ಟಾಪ್​ 6, ಸೂರ್ಯ ಟಾಪ್​ 2 - T20 rankings list

ABOUT THE AUTHOR

...view details