ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಕೆ.ಎಲ್ ರಾಹುಲ್ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದಾರೆ. ಕಳೆದ ಸೀಸನ್ನಲ್ಲಿ ಲಕ್ನೋ ಮಾಲೀಕರೊಂದಿಗೆ ಅಸಮಾಧಾನ ಹೊಂದಿದ್ದ ರಾಹುಲ್ ಈ ಬಾರಿ ಲಕ್ನೋ ತಂಡವನ್ನು ತೊರೆಯಬಹುದು ಎಂಬ ಊಹಾಪೋಹಗಳ ನಡುವೆಯೇ ಅವರ ಈ ಭೇಟಿ ಕುತೂಹಲ ಕೆರಳಿಸಿದೆ.
ಕ್ರಿಕ್ಬಜ್ನ ವರದಿಯ ಪ್ರಕಾರ, ಕೆಎಲ್ ರಾಹುಲ್ ಮತ್ತು ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಡುವೆ 1 ಗಂಟೆ ಕಾಲ ಮಾತುಕತೆ ನಡೆಯಿತು. ಈ ವೇಳೆ ಮುಂದಿನ ಋತುವಿಗಾಗಿ ತಂಡದ ಸಂಯೋಜನೆ ಮತ್ತು ರಿಟೇನ್ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಲಕ್ನೋ ತಂಡದಲ್ಲೇ ಮುಂದುವರೆಯುವ ಇಂಗಿತವನ್ನು ರಾಹುಲ್ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ಫ್ರಾಂಚೈಸಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ ಈ ಭೇಟಿಯಿಂದ ತಂಡದಲ್ಲಿ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಈ ಭೇಟಿ ಬಳಿಕ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದು, 'ಕೆ ಎಲ್ ರಾಹುಲ್ ಕೋಲ್ಕತ್ತಾಗೆ ಬಂದು ಗೋಯೆಂಕಾ ಅವರನ್ನು ಭೇಟಿ ಮಾಡಿದ್ದಾರೆ. ಗೋಯೆಂಕಾ ಕೂಡ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಬಿಸಿಸಿಐ ರಿಟೇನ್ ಕುರಿತಾದ ಯಾವುದೇ ನಿಯಮಗಳನ್ನು ಇನ್ನೂ ಪ್ರಕಟಿಸಿಲ್ಲ. ಈ ನಿಯಮಗಳು ತಿಳಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ಸೀಸನ್ಗಳಲ್ಲಿ ಕೆ ಎಲ್ ರಾಹುಲ್ ನಾಯಕನಾಗಿ ಲಕ್ನೋ ತಂಡವನ್ನು ಮುನ್ನಡೆಸಿದ್ದಾರೆ. ಆದರೇ ಕಳೆದ ಸೀಸನ್ನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಲಕ್ನೋ ಹೀನಾಯವಾಗಿ ಸೋಲನುಭವಿಸಿದ ಬಳಿಕ ಎಲ್ಎಸ್ ಮಾಲೀಕ ಗೋಯೆಂಕಾ ಅವರು ನಾಯಕ ರಾಹುಲ್ ಮೇಲೆ ಕೋಪಗೊಂಡಿದ್ದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮುಂದಿನ ಆವೃತ್ತಿಯಲ್ಲಿ ಕೆ ಎಲ್ ರಾಹುಲ್ ಲಕ್ನೋ ತೊರೆಯಲಿದ್ದಾರೆ ಎಂಬ ಮಾತುಗಳು ಹರಿದಾಡಲಾರಂಭಿಸಿವೆ.
ಇದನ್ನೂ ಓದಿ:ಜಯ್ ಶಾ ಬಳಿಕ ಬಿಸಿಸಿಐ ಮುಂದಿನ ಕಾರ್ಯದರ್ಶಿ ಯಾರು?: ಮುಂಚೂಣಿಯಲ್ಲಿ ದಿವಂಗತ ಬಿಜೆಪಿ ನಾಯಕ ಮಗನ ಹೆಸರು! - BCCI next secretary