ಬೆಂಗಳೂರು:ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟಾಂಡ್ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರಾದ ಇಎಎಸ್ ಪ್ರಸನ್ನ, ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಇತಿಹಾಸಕಾರ ರಾಮಚಂದ್ರ ಗುಹಾ ತಮಗೆ ಬರೆದ ಪತ್ರವನ್ನು ಲಗತ್ತಿಸಿ ಸಿಎಂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಮಾರ್ಚ್ 29ಕ್ಕೆ ಗುಹಾ ಬರೆದ ಪತ್ರವನ್ನು ಉಲ್ಲೇಖಿಸಿರುವ ಅವರು, ಈ ಮಾರ್ಚ್ನಲ್ಲಿ ರಾಜ್ಯ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲುವು ಸಾಧಿಸಿದ 50ನೇ ವಾರ್ಷಿಕೋತ್ಸವವನ್ನು ಪೂರೈಸಿದೆ. 1974ರ ವಿಜಯದ ಮೂವರು ಕರ್ನಾಟಕದ ಕ್ರಿಕೆಟ್ ದಿಗ್ಗಜರನ್ನು ಗೌರವಿಸುವಂತೆ ಅಭಿಮಾನಿಗಳಿಂದ ಸತತವಾಗಿ ಮನವಿ ಸಲ್ಲಿಸಲಾಗುತ್ತಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಇತರ ಕಡೆ ಸ್ಥಳೀಯ ಕ್ರಿಕೆಟ್ ದಿಗ್ಗಜರ ಹೆಸರನ್ನು ಸ್ಟೇಡಿಯಂ ಸ್ಟಾಂಡ್ಗಳಿಗೆ ನಾಮಕರಣ ಮಾಡಲಾಗಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.