ICC Champions Trophy 2025: ಇನ್ನು ಎರಡು ದಿನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪ್ರಾರಂಭವಾಗಲಿದೆ. ಫೆ.20ರಂದು ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ಬಳಿಕ ಫೆ.20ರಂದು ಭಾರತವು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಕಲ ರೀತಿಯಿಂದ ಸಜ್ಜಾಗಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ (IND vs BAN) ಉಭಯ ತಂಡಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ದುಬೈಗೆ ಆಗಮಿಸಿರುವ ಟೀಮ್ ಇಂಡಿಯಾ ಭರ್ಜರಿ ತಾಲೀಮು ನಡೆಸಿದೆ.
ಇದರ ನಡುವೆಯೆ ಬಾಂಗ್ಲಾದೇಶದ ಮಾಜಿ ಆರಂಭಿಕ ಆಟಗಾರ ಇಮ್ರುಲ್ ಕಾಯೆಸ್ ತಮ್ಮ ಆಟಗಾರರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಭಾರತ ತಂಡದಲ್ಲಿ ಸ್ಟಾರ್ ವೇಗಿ ಬುಮ್ರಾ ಅನುಪಸ್ಥಿತಿಯ ಲಾಭ ಪಡೆಯುವಂತೆ ತಂಡಕ್ಕೆ ಸಲಹೆ ನೀಡಿದ್ದಾರೆ. ಮತ್ತೊಂದೆಡೆ, ಬುಮ್ರಾ ಇಲ್ಲ ಎಂದು ತಂಡವನ್ನು ಹಗುರವಾಗಿ ಪರಿಗಣಿಸಬೇಡಿ ಎಂದೂ ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾ ಆಟಗಾರರಿಗೆ ಎಚ್ಚರಿಕೆ : "ಟೀಮ್ ಇಂಡಿಯಾ ತುಂಬಾ ಬಲಿಷ್ಠ ತಂಡ. ಅದರ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ತುಂಬಾ ಬಲಿಷ್ಠವಾಗಿವೆ. ಆದರೆ.. ಬುಮ್ರಾ ತಂಡದಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಟೀಮ್ ಇಂಡಿಯಾ ಪರ ಎಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರ ಅನುಪಸ್ಥಿತಿ ಬಾಂಗ್ಲಾದೇಶ ತಂಡಕ್ಕೆ ವರದಾನವಾಗಲಿದೆ.
ಹಾಗಂತ ಬುಮ್ರಾ ಇಲ್ಲದಿದ್ದರೂ.. ತಂಡದಲ್ಲಿ ಮೊಹಮ್ಮದ್ ಶಮಿ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಇದ್ದಾರೆ. ಶಮಿ ತಂಡಕ್ಕೆ ಸೇರ್ಪಡೆಗೊಂಡಿರುವುದು ದೊಡ್ಡ ಬೆಳವಣಿಗೆ ಆಗಿದೆ. ಅವರು ಪ್ರಸ್ತುತ ಫಿಟ್ನೆಸ್ನಲ್ಲಿ ಸ್ವಲ್ಪ ತೊಂದರೆ ಅನುಭವಿಸುತ್ತಿದ್ದಾರೆ. ಆದಾಗ್ಯೂ, ಅವರು ಒಮ್ಮೆ ಫಾರ್ಮ್ಗೆ ಮರಳಿದರೆ, ಬಾಂಗ್ಲಾದೇಶಕ್ಕೆ ದೊಡ್ಡ ಸಮಸ್ಯೆ ಒಡ್ಡಲಿದ್ದಾರೆ ಎಂದು ಇಮ್ರುಲ್ ತಂಡದ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಶಕೀಬ್ ಅನುಪಸ್ಥಿತಿ : ಬಾಂಗ್ಲಾದೇಶ ತಂಡದಲ್ಲಿ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅನುಪಸ್ಥಿತಿಯು ಸಮಸ್ಯೆಯಾಗಿದೆ ಎಂದು ಇದೇ ವೇಳೆ ಇಮ್ರುಲ್ ತಿಳಿಸಿದರು. ಶಕೀಬ್ ಒಬ್ಬ ಅದ್ಭುತ ಆಟಗಾರ. ನಮಗೆ ಅವರ ನೆನಪಾಗುತ್ತದೆ. ಅವರು ಯಾವುದೇ ಪಂದ್ಯದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯ ಈ ತಿಂಗಳ 20 ರಂದು ದುಬೈನಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಭಾರತ ಫೇವರಿಟ್ ತಂಡವಾಗಿದೆ. ಈ ಪಂದ್ಯ ಬಳಿಕ ಭಾರತವು ಫೆ. 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (IND vs PAK) ಎದುರಿಸಲಿದೆ.
ಇದನ್ನೂ ಓದಿ: ಮತ್ತೊಮ್ಮೆ ಫ್ಯಾನ್ಸ್ ಹೃದಯ ಗೆದ್ದ RCB; '12th ಮ್ಯಾನ್ ಆರ್ಮಿಗೆ ವಿಶೇಷ ಗೌರವ!