ಕರ್ನಾಟಕ

karnataka

ಶ್ರೀಲಂಕಾ ಸ್ಥಳೀಯ ಚುನಾವಣೆ ಮುಂದೂಡಿದ್ದ ಅಧ್ಯಕ್ಷ ವಿಕ್ರಮಸಿಂಘೆಗೆ ಕೋರ್ಟ್​ ತಪರಾಕಿ - Sri Lanka Elections

By ETV Bharat Karnataka Team

Published : Aug 22, 2024, 8:02 PM IST

ಸ್ಥಳೀಯ ಚುನಾವಣೆಗಳಿಗೆ ತಡೆ ನೀಡಿದ್ದ ಹಾಲಿ ಅಧ್ಯಕ್ಷ ರನಿಲ್​ ವಿಕ್ರಮ್​​ಸಿಂಘೆ ಅವರಿಗೆ ಸುಪ್ರೀಂ ಕೋರ್ಟ್​ ಛಾಟಿ ಏಟು ಬೀಸಿದೆ. ಸೆಪ್ಟೆಂಬರ್​ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮೊದಲು, ಸ್ಥಳೀಯ ಎಲೆಕ್ಷನ್​​ ನಡೆಸಲು ಸೂಚಿಸಿದೆ.

ಶ್ರೀಲಂಕಾದ ಸ್ಥಳೀಯ ಚುನಾವಣೆ
ರನಿಲ್​ ವಿಕ್ರಮ್​​ಸಿಂಘೆ (ETV Bharat)

ಕೊಲಂಬೊ(ಶ್ರೀಲಂಕಾ):ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಅಧಿಕಾರ ಬಯಸಿ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ರನಿಲ್​ ವಿಕ್ರಮಸಿಂಘೆ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಳೀಯ ಚುನಾವಣೆಗಳನ್ನು ಒಂದು ವರ್ಷಕ್ಕೂ ಅಧಿಕ ಮುಂದೂಡಿದ್ದನ್ನು ಅಲ್ಲಿನ ಸುಪ್ರೀಂ ಕೋರ್ಟ್​ ಟೀಕಿಸಿದೆ. ಜೊತೆಗೆ, ಇದಕ್ಕೆ ಅಧ್ಯಕ್ಷ ವಿಕ್ರಮಸಿಂಘೆ ಅವರೆ ನೇರ ಕಾರಣ ಎಂದಿದೆ.

ಸ್ಥಳೀಯ ಚುನಾವಣೆಗಳನ್ನು ಮುಂದೂಡಿದ್ದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಕೋರ್ಟ್​, ಹಾಲಿ ಅಧ್ಯಕ್ಷರನ್ನು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಳಿದೆ. ದೇಶದ ಆಡಳಿತ ವಿಭಾಗಗಳಿಗೆ ನಡೆಯಬೇಕಿದ್ದ ಚುನಾವಣೆಗಳನ್ನು ತಪ್ಪಿಸಿದ್ದು ಕಾನೂನುಬಾಹಿರ ನಡೆ. ಅಧ್ಯಕ್ಷರಾಗಿರುವ ವಿಕ್ರಮಸಿಂಘೆ ಅವರೆ ಇದಕ್ಕೆ ಕಾರಣ ಎಂದು ಹೇಳಿದೆ. ಹಾಲಿ ಅಧ್ಯಕ್ಷರಾಗಿರುವ ಕಾರಣ ಅವರಿಗೆ ಯಾವುದೇ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆ ಬಳಿಕ ಕ್ರಮವಾಗಲಿದೆ.

ಹಾಲಿ ಅಧ್ಯಕ್ಷರ ವೈಫಲ್ಯತೆ:ಹಾಲಿ ಅಧ್ಯಕ್ಷ ರನಿಲ್​ ಅವರು, ಅಧಿಕಾರದಾಹದಿಂದ ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡಿದ್ದಾರೆ. ಆರ್ಥಿಕ ಸವಲತ್ತನ್ನು ಒದಗಿಸಲು ವಿಫಲವಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಗುರುವಾರ ಸರ್ವಾನುಮತದಿಂದ ಹೇಳಿದೆ.

ಸೆಪ್ಟೆಂಬರ್ 21ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು 2023 ರಲ್ಲೇ ಸ್ಥಳೀಯ ಚುನಾವಣೆಗಳು ನಡೆಯಬೇಕಿತ್ತು. ಹಣ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ವಿಕ್ರಮಸಿಂಘೆ ಅವರು ಚುನಾವಣೆಯನ್ನು ಮುಂದೂಡಿದ್ದಾರೆ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ವಿಕ್ರಮಸಿಂಘೆ ಬೇಕಂತಲೇ ಚುನಾವಣೆಗಳನ್ನು ನಡೆಸಿಲ್ಲ ಎಂದು ಕೋರ್ಟ್​ ಹೇಳಿದೆ.

ಸ್ಥಳೀಯ ಚುನಾವಣೆಯನ್ನು ತಡೆಯುವಲ್ಲಿ ವಿಕ್ರಮಸಿಂಘೆ ಅವರ ನಿರಂಕುಶತ್ವ ಮತ್ತು ಕಾನೂನುಬಾಹಿರ ನಡವಳಿಕೆ ಕಾರಣವಾಗಿವೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಸ್ಥಳೀಯ ಚುನಾವಣೆಗಳನ್ನು ಆದಷ್ಟು ಬೇಗ ನಡೆಸುವಂತೆ ಸ್ವತಂತ್ರ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ. ಆದರೆ ಇದು ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಅಡ್ಡಿ ಆಗುವಂತೆ ಇರಬಾರದು. ಜೊತೆಗೆ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದನ್ನು ಪ್ರಶ್ನಿಸಿದ ನಾಲ್ವರು ಅರ್ಜಿದಾರರ ಕಾನೂನು ಶುಲ್ಕವನ್ನೂ ಸರ್ಕಾರ ಪಾವತಿಸಬೇಕು ಎಂದು ಆದೇಶಿಸಿದೆ.

ದಂಗೆ ಎದ್ದಿದ್ದ ಜನರು:ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅಧಿಕಾವಧಿಯಲ್ಲಿ ಜನರು ದೇಶಾದ್ಯಂತ ದಂಗೆ ನಡೆಸಿದ್ದರು. ಅಧ್ಯಕ್ಷೀಯ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದರಿಂದ ಗೋಟಬಯ ಅವರು ದೇಶದಿಂದಲೇ ಪರಾರಿಯಾಗಿದ್ದರು. ಬಳಿಕ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ರನಿಲ್​ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಆದಾಯ ತೆರಿಗೆಗಳನ್ನು ದ್ವಿಗುಣಗೊಳಿಸಿ, ಇಂಧನ ಸಬ್ಸಿಡಿಗಳನ್ನು ತೆಗೆದುಹಾಕಿದ್ದರು. ದರ ಏರಿಕೆ ಮಾಡಿದ ನಂತರ ಅಂತಾರಾಷ್ಟ್ರೀಯ ಹಣಕಾಸು ನಿಧಿಯು(IMF) ಲಂಕಾಕ್ಕೆ 2.9 ಬಿಲಿಯನ್​ ಡಾಲರ್​ ಸಾಲ ನೀಡಿತ್ತು. ದರ ಏರಿಕೆಯ ಬಳಿಕ ತಮ್ಮ ಪಕ್ಷ ಸ್ಥಳೀಯ ಚುನಾವಣೆಯಲ್ಲಿ ಸೋಲಲಿದೆ ಎಂದು ಅರಿತು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಇದನ್ನೂ ಓದಿ:ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: 1 ಹುದ್ದೆಗೆ 39 ಅಭ್ಯರ್ಥಿಗಳಿಂದ ನಾಮಪತ್ರ! - Sri Lankan Presidential Election

ABOUT THE AUTHOR

...view details