ಕರ್ನಾಟಕ

karnataka

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 76 ಮಂದಿ ಸಾವು, ದೇಶಾದ್ಯಂತ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ - Violence in Bangladesh

By ETV Bharat Karnataka Team

Published : Aug 4, 2024, 9:38 PM IST

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ, ಪ್ರಧಾನಿ ಶೇಖ್​ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮತ್ತೆ ಹಿಂಸಾತ್ಮಕ ರೂಪ ಪಡೆದಿದೆ.

ಬಾಂಗ್ಲಾದೇಶ ಭುಗಿಲೆದ್ದ ಹಿಂಸಾಚಾರ
ಬಾಂಗ್ಲಾದೇಶ ಭುಗಿಲೆದ್ದ ಹಿಂಸಾಚಾರ (AP)

ಢಾಕಾ (ಬಾಂಗ್ಲಾದೇಶ) :ಪ್ರಧಾನಿ ಶೇಕ್​ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಇಂದು (ಆಗಸ್ಟ್​ 4) ನಡೆದ ಘರ್ಷಣೆಯಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಇದರಲ್ಲಿ 14 ಪೊಲೀಸರು ಇದ್ದಾರೆ. ಸಂಘರ್ಷ ತಡೆಗೆ ಸರ್ಕಾರ ಇಡೀ ದೇಶದಲ್ಲಿ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿದೆ.

ಮೀಸಲಾತಿ ಹೋರಾಟ ಮತ್ತು ಅದರಲ್ಲಿ ಸಾವನ್ನಪ್ಪಿದ 200 ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ಭಾನುವಾರದಿಂದ ಪ್ರತಿಭಟನಾಕಾರರು ಅಸಹಕಾರ ಚಳವಳಿ ಆರಂಭಿಸಿದ್ದಾರೆ. ಇದಕ್ಕೆ ಆಡಳಿತಾರೂಢ ಅವಾಮಿ ಲೀಗ್​, ಛತ್ರ ಲೀಗ್​ ಮತ್ತು ಜುಬೊ ಲೀಗ್​ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಿಭಟನಾಕಾರರು ಮತ್ತು ಈ ಮೂರು ಪಕ್ಷಗಳ ಕಾರ್ಯಕರ್ತರ ಮಧ್ಯೆ ಸಂಘರ್ಷ ವಿಕೋಪಕ್ಕೆ ತಿರುಗಿದೆ.

ಬಾಂಗ್ಲಾದೇಶದ 13 ಜಿಲ್ಲೆಗಳಲ್ಲಿ ಸಂಘರ್ಷ ಉಂಟಾಗಿದೆ. ಇದರಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಫೆನಿ, ಮುಶಿಗಂಜ್​, ಮಗುರಾ, ಭೋಲಾ, ರಂಗಪುರ, ಪಾಬ್ನಾ, ಸಿಲ್ಹಟ್​, ಕೊಮಿಲ್ಲ, ಜೋಯ್​ಪುರ್​ಹಟ್​, ಢಾಕಾ, ಬಾರಿಸಾಲ್​ನಲ್ಲಿ ಸಾವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

ದೇಶದಲ್ಲಿ ನಿಷೇಧಾಜ್ಞೆ ಜಾರಿ:ಬಾಂಗ್ಲಾದಲ್ಲಿ ಸಂಘರ್ಷ ತೀವ್ರವಾಗಿರುವ ಕಾರಣ, ದೇಶದಲ್ಲಿ ಆಗಸ್ಟ್ 4ರ ಸಂಜೆಯಿಂದಲೇ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭದ್ರತಾ ವ್ಯವಸ್ಥೆ ಕೈತಪ್ಪುತ್ತಿರುವ ಕಾರಣ, ಶೇಕ್​ ಹಸೀನಾ ನೇತೃತ್ವದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಫೇಸ್​​ಬುಕ್​, ಮೆಸೆಂಜರ್​, ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಮ್​ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. 4ಜಿ ಇಂಟರ್​​ನೆಟ್​ ಸ್ಥಗಿತಕ್ಕೂ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಸಂಘರ್ಷದ ಕುರಿತು ಮಾತನಾಡಿರುವ ಅಲ್ಲಿನ ಪ್ರಧಾನಮಂತ್ರಿ ಶೇಖ್​ ಹಸೀನಾ ಅವರು, ದೇಶಾದ್ಯಂತ ಪ್ರತಿಭಟನೆ ಹೆಸರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ. ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ. ಭಯೋತ್ಪಾದಕರಾಗಿದ್ದಾರೆ. ಅವರನ್ನು ನಿಯಂತ್ರಿಸಲು ಜನರಿಗೆ ಕರೆ ನೀಡಿದ್ದಾರೆ.

ಈ ನಡುವೆ ದೇಶದಲ್ಲಿ ಭದ್ರತಾ ವ್ಯವಸ್ಥೆ ಹದಗೆಟ್ಟಿರುವ ಕಾರಣ, ಪ್ರಧಾನಿ ಶೇಖ್​ ಹಸೀನಾ ಅವರು ಭದ್ರತಾ ವ್ಯವಹಾರಗಳ ಕುರಿತಾದ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಭೂಸೇನೆ, ನೌಕಾಪಡೆ, ವಾಯುಸೇನೆ ಮುಖ್ಯಸ್ಥರು, ಉನ್ನತಾಧಿಕಾರಿಗಳು ಭಾವಹಿಸಿದ್ದರು.

ಭಾರತೀಯರಿಗೆ ಎಚ್ಚರಿಕೆ:ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರ ಅಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಭಾರತದ ನಾಗರಿಕರು ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಿ. ಸಿಲ್ಹೆಟ್​ನಲ್ಲಿನ ಭಾರತದ ಸಹಾಯಕ ಹೈಕಮಿಷನ್​ ಕಚೇರಿಗೆ ಮಾಹಿತಿ ಕೊಡಿ. ತುರ್ತು ಸಂದರ್ಭಗಳಲ್ಲಿ +88-01313076402 ಅನ್ನು ಸಂಪರ್ಕಿಸಿ ಎಂದು ತಿಳಿಸಿದೆ.

ಇದನ್ನೂ ಓದಿ:ಬಾಂಗ್ಲಾದೇಶ: ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾದ ಸೇನೆ ಹಿಂಪಡೆಯುವಂತೆ ಮಿಲಿಟರಿ ಜನರಲ್​​ಗಳ ಒತ್ತಾಯ - Violence in Bangladesh

ABOUT THE AUTHOR

...view details