ಬೆಳಗಾವಿ: ಹೆತ್ತವರಿಗೆ ಬೇಡವಾಗಿ ಕಸದ ತಿಪ್ಪೆಯಲ್ಲಿ ಸಿಕ್ಕ ವಿಶೇಷಚೇತನ ಕಂದನಿಗೆ ಇಟಲಿ ದೇಶದ ದಂಪತಿಯ ಬೆಚ್ಚನೆಯ ಅಪ್ಪುಗೆ ಸಿಕ್ಕಿದೆ. ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಆಸರೆ ಪಡೆದಿದ್ದ ಅನಾಥ ವಿಶೇಷಚೇತನ ಮಗುವನ್ನು ವಿದೇಶಿ ದಂಪತಿ ದತ್ತು ಪಡೆದಿದ್ದಾರೆ. ಈ ಮೂಲಕ ಬೆಳಗಾವಿಯ ಕನ್ನಡದ ಕಂದ ಇಟಲಿಗೆ ಪ್ರಯಾಣಿಸಲಿದೆ.
ವಿಶೇಷಚೇತನ ಎನ್ನುವ ಕಾರಣಕ್ಕೆ ನವಜಾತ ಶಿಶುವನ್ನು ಹೆತ್ತವರು ಕಸದ ತಿಪ್ಪೆಗೆಸೆದು ಹೋಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ್ದ ಸಿಡಿಪಿಒ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿಕ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಆ ಮಗು ಆರೈಕೆ ಪಡೆಯುತ್ತಿತ್ತು. ಈಗ ಎರಡೂವರೆ ವರ್ಷದ್ದಾಗಿರುವ ಮಗು ಬೆಳಗಾವಿಯಿಂದ ದೂರದ ಇಟಲಿಗೆ ತೆರಳಲು ಸಜ್ಜಾಗಿದೆ.
ಹೌದು, ಇಟಲಿಯ ಫ್ಲಾರೆನ್ಸ್ ನಗರದ ನಿವಾಸಿಗಳಾದ ಕೋಸ್ಟಾಂಜಾ ಹಾಗೂ ಬುಜಾರ್ ಡೆಡೆ ಎಂಬವರು ವಿಶೇಷಚೇತನ ಮಗುವನ್ನು ದತ್ತು ಪಡೆದಿದ್ದಾರೆ. ಫ್ಲಾರೆನ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋಸ್ಟಾಂಜಾ ಅವರು ಫಿಜಿಯೋಥೆರಪಿ ವೈದ್ಯರಾಗಿದ್ದರೆ, ಬುಜಾರ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರಿಂದ ಮನೆಯಲ್ಲೇ ಇದ್ದುಕೊಂಡು ಅಂಗವಿಕಲರಿಗೆ ಈಜು ಸೇರಿ ಮತ್ತಿತರ ಕ್ರೀಡೆಗಳ ತರಬೇತಿ ನೀಡುತ್ತಾರೆ. ಈ ದಂಪತಿ 2015ರಲ್ಲಿ ಮದುವೆ ಆಗಿದ್ದು, ಮಕ್ಕಳಿಲ್ಲ. ತಾವು ಸ್ವತಃ ದಿವ್ಯಾಂಗರಾಗಿದ್ದರೂ ವಿಶೇಷಚೇತನ ಮಗುವನ್ನು ದತ್ತು ಪಡೆದಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ದತ್ತು ಪ್ರಕ್ರಿಯೆ ಬಹುತೇಕ ಪೂರ್ಣಗೊಂಡ ಖುಷಿಯಲ್ಲಿ ಮಗುವನ್ನೆತ್ತಿಕೊಂಡು ಇಟಲಿ ದಂಪತಿ ಮುದ್ದಾಡಿದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮ ಸ್ವಂತ ಮಗು ಎನ್ನುವಂತೆ ಸಂಭ್ರಮಿಸಿದ್ದು ನೆರೆದವರನ್ನು ಭಾವುಕರನ್ನಾಗಿಸಿತು.
'ನಂಬಿಕಸ್ಥರು, ಸುಸಂಸ್ಕೃತರು ಎಂಬ ಕಾರಣಕ್ಕೆ ಭಾರತೀಯ ಮಗುವನ್ನು ದತ್ತು ಪಡೆಯುತ್ತಿದ್ದೇವೆ': ಈಟಿವಿ ಭಾರತದ ಜೊತೆಗೆ ಮಾತನಾಡಿದ ಕೋಸ್ಟಾಂಜಾ, "ನಂಬಿಕಸ್ಥರು, ಸುಸಂಸ್ಕೃತರು ಎಂಬ ಕಾರಣಕ್ಕೆ ಭಾರತೀಯ ಮಗುವನ್ನು ದತ್ತು ಪಡೆಯುತ್ತಿದ್ದೇವೆ. ವಿಶೇಷಚೇತನ ಮಗುವಿನ ಭವಿಷ್ಯ ರೂಪಿಸಿದ ಧನ್ಯತೆಯ ಕಾರಣಕ್ಕೆ ನಮ್ಮ ಆಯ್ಕೆ ಇದಾಗಿದೆ. ಇನ್ಮುಂದೆ ಈ ಮಗು ನಮ್ಮ ಜೀವನದ ಪ್ರಮುಖ ಭಾಗ ಆಗಲಿದ್ದಾನೆ. ಈತನನ್ನು ಸ್ಟ್ರಾಂಗ್ ಆಗಿ ಬೆಳೆಸುತ್ತೇವೆ. ಒಳ್ಳೆಯ ಜೀವನ ಕಟ್ಟಿಕೊಡುತ್ತೇವೆ. ನಮ್ಮ ದೇಶಕ್ಕೆ ಪಾಪುವನ್ನು ಕರೆದುಕೊಂಡು ಹೋಗಲು ನಾವು ತುಂಬಾ ಉತ್ಸುಕರಾಗಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷ ಡಾ.ಮನಿಷಾ ಭಾಂಡನಕರ್ ಮಾತನಾಡಿ, "7 ತಿಂಗಳಲ್ಲೇ ಜನಿಸಿದ್ದರಿಂದ ಮಗುವಿನ ತೂಕ 1.3 ಕೆ.ಜಿ ಇತ್ತು. ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಮಗುವಿನ ಸ್ಥಿತಿ ಕಠಿಣವಾಗಿತ್ತು. ಅಲ್ಲದೇ ದೃಷ್ಟಿದೋಷದಿಂದಲೂ ಬಳಲುತ್ತಿತ್ತು. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದೇವೆ. ಅಲ್ಲದೇ ಮಗುವಿಗೆ ನಾವು ಬಹಳಷ್ಟು ಆರೈಕೆ ಮಾಡಿದ್ದೇವೆ. ಪಿಜಿಯೋಥೆರಪಿ, ಸ್ಪೀಚ್ ಥೆರಪಿ ಕೊಟ್ಟಿದ್ದೇವೆ. ಈಗ ಮಗು ಓಡಾಡುತ್ತಿದೆ. ಮಾತಾಡುತ್ತಿದೆ. ಇದು ಜನಿಸಿದ್ದು ಬೇರೆ ಯಾರೋ ದಂಪತಿಗಳಿಂದ. ಆದರೆ, ಅದು ಸೇರುತ್ತಿರುವುದು ಇಟಲಿಯ ಈ ದಂಪತಿ ಕೈಗೆ. ಯಾವ ಜನ್ಮದ ಋಣವೋ ಅದು ನಿಜವಾದ ತನ್ನ ಗುರಿಯತ್ತ ಹೊರಟಿದೆ. ನಿಜಕ್ಕೂ ಈ ದಂಪತಿಗಳದ್ದು ದೊಡ್ಡ ಮನಸ್ಸು. ಬೇರೆ ಸಂಸ್ಕೃತಿಯ ಅದರಲ್ಲೂ ವಿಶೇಷ ಚೇತನ ಮಗುವನ್ನು ದತ್ತು ಪಡೆದಿದ್ದಾರೆ. ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ" ಎಂದರು.
ದತ್ತು ಪ್ರಕ್ರಿಯೆ ಹೇಗಿತ್ತು?: "ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (ಕಾರಾ) ನಿಯಮಾನುಸಾರ 6 ವರ್ಷಗಳ ಹಿಂದೆ ದತ್ತು ಪಡೆಯಲು ಇವರು ಅರ್ಜಿ ಸಲ್ಲಿಸಿದ್ದರು. ಆ ಪ್ರಕಾರ ಅವರ ಕುಟುಂಬದ ಹಿನ್ನೆಲೆ, ಪೋಷಕರೊಂದಿಗೆ ಸಂದರ್ಶನ ಸೇರಿದಂತೆ ಎಲ್ಲ ನಿಯಮಾನುಸಾರ ಪಾಲನೆಯಾದ ಬಳಿಕವೇ ಮಗು ದತ್ತು ನೀಡುವ ಪ್ರಕ್ರಿಯೆ ನಡೆದಿದೆ. ಮಂಗಳವಾರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಂತಿಮವಾಗಿ ಮಗುವನ್ನು ದತ್ತು ಮೂಲಕ ಪೋಷಕರಿಗೆ ಹಸ್ತಾಂತರ ಮಾಡುವ ಕಾರ್ಯ ನಡೆಯಲಿದೆ. ಮಗುವಿನ ಪಾಸ್ಪೋರ್ಟ್ ಕೂಡ ಸಿದ್ಧವಾಗಿದೆ. ಇಲ್ಲಿಂದ ಬೆಂಗಳೂರಿಗೆ ಹೋಗಲಿದ್ದು, ನಾಲ್ಕೈದು ದಿನಗಳ ಬಳಿಕ ವೀಸಾ ತೆಗೆದುಕೊಂಡು ಇಟಲಿಗೆ ತೆರಳಲಿದ್ದಾರೆ" ಎಂದು ಹೇಳಿದರು.

"2011ರಿಂದ ಈವರೆಗೆ 120 ಮಕ್ಕಳನ್ನು ದತ್ತು ಕೊಟ್ಟಿದ್ದೇವೆ. ವಿದೇಶಕ್ಕೆ ದತ್ತು ನೀಡುತ್ತಿರುವುದು ಇದು 13ನೇ ಮಗು. ಇಟಲಿಗೆ ಎರಡನೇ ಮಗುವಿದು. ಅಮೆರಿಕ, ಆಸ್ಟ್ರೇಲಿಯಾ ದೇಶಗಳಿಗೂ ಮಕ್ಕಳನ್ನು ಕಳಿಸಿ ಕೊಟ್ಟಿದ್ದೇವೆ. ಇನ್ನು ನಮ್ಮಲ್ಲಿರುವ ಮಕ್ಕಳ ಮಾಹಿತಿಯನ್ನು ಕಾರಾ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿರುತ್ತೇವೆ. ಅದೇ ಪೋರ್ಟಲ್ನಲ್ಲಿ ಮಗು ಬೇಕಾಗಿರುವ ಪೋಷಕರ ಮಾಹಿತಿಯೂ ಇರುತ್ತದೆ. ಇದು ದೇಶದ ಜನರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಅಂತರ್ರಾಷ್ಟ್ರಗಳ ಜನರು ಭಾರತೀಯ ಮಗುವನ್ನು ದತ್ತು ಪಡೆಯಲು ಫಾರಿನ್ ಅಡಾಪ್ಷನ್ ಎಜೆನ್ಸಿ (ಆಫಾ)ಯಲ್ಲಿ ಅರ್ಜಿ ಸಲ್ಲಿಸಬೇಕು. ಆಫಾ, ಕಾರಾ ಜೊತೆಗೆ ಒಪ್ಪಂದ ಮಾಡಿಕೊಂಡಿರುತ್ತದೆ" ಎಂದು ವಿದೇಶಕ್ಕೆ ದತ್ತು ಪ್ರಕ್ರಿಯೆ ಕುರಿತು ಅವರು ಮಾಹಿತಿ ನೀಡಿದರು.
ಆಫಾ ಎಜೆನ್ಸಿಯ ಹಸ್ಮುಖ್ ಠಕ್ಕರ್ ಮಾತನಾಡಿ, "ಇದೊಂದು ವಿಶೇಷ ದಿನ. ತಾವು ಸ್ವತಃ ದಿವ್ಯಾಂಗ ಆಗಿದ್ದರೂ ವಿಶೇಷಚೇತನ ಮಗುವನ್ನು ದತ್ತು ಪಡೆದಿರುವ ಇವರು ನಿಜಕ್ಕೂ ರಿಯಲ್ ಹೀರೋ. ವಿಶೇಷಚೇತನ ಮಕ್ಕಳನ್ನು ದತ್ತು ಪಡೆಯಬಹುದು ಎಂಬ ಬಗ್ಗೆ ನಮ್ಮ ದೇಶದಲ್ಲಿ ಜಾಗೃತಿ ಮೂಡಿಸಬೇಕಿದೆ. ಬಹಳಷ್ಟು ಜನರು ತಮ್ಮ ಇಷ್ಟದ ಮಕ್ಕಳನ್ನು ಮಾತ್ರ ದತ್ತು ತೆಗೆಯುತ್ತಾರೆ. ಈ ಮನಸ್ಥಿತಿಯಿಂದ ನಾವು ಹೊರಗೆ ಬರಬೇಕಿದೆ" ಎಂದು ಅಭಿಪ್ರಾಯಪಟ್ಟರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಜಗದೀಶ ಸರೀಕರ್ ಅವರು ಪ್ರತಿಕ್ರಿಯಿಸಿದ್ದು, ದತ್ತು ಪಡೆದ ದಂಪತಿಗಳಲ್ಲಿ ಅವರ ಪತಿ ದಿವ್ಯಾಂಗರಿದ್ದರೂ ಕೂಡ ವಿಶೇಷ ಚೇತನ ಮಗುವನ್ನು ಖುಷಿಯಿಂದ ಸ್ವೀಕರಿಸಿದ್ದು ಮಾದರಿ ಕಾರ್ಯ. ಮಗುವಿಗೆ ಒಂದು ಒಳ್ಳೆಯ ಕುಟುಂಬ ಸಿಕ್ಕಂತಾಗಿದೆ. ಮಗುವಿನ ಭವಿಷ್ಯ ಉಜ್ವಲವಾಗಲಿ. ಅದೇ ರೀತಿ ನಮ್ಮ ದೇಶದವರು ಕೂಡ ಇಂಥ ವಿಶೇಷಚೇತನ ಮಕ್ಕಳನ್ನು ದತ್ತು ಪಡೆಯಲು ಮುಂದಾಗಲಿ ಎಂದು ಅಭಿಪ್ರಾಯ ಪಟ್ಟರು.
ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದ ಮಗುವನ್ನು ದತ್ತು ಪಡೆದಿರುವ ಇಟಲಿ ದಂಪತಿಗೆ ಇಂದು ಬೆಳಿಗ್ಗೆ ಮಗುವನ್ನು ಹಸ್ತಾಂತರ ಮಾಡಿದ್ದೇನೆ. ಬಹಳಷ್ಟು ನಿಯಮಗಳನ್ನು ಅನುಸರಿಸಿ, ಶಿಷ್ಟಾಚಾರ ಪಾಲನೆ ಮಾಡಿ ಇಟಲಿ ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ. ಬಹಳಷ್ಟು ಸಮಯ ಅವರು ಕಾಯ್ದಿದ್ದರು. ಆ ಪಾಪುಗೆ ಈಗ ಒಂದು ಹೊಸ ಮನೆ ಸಿಕ್ಕಿದೆ. ಇಟಲಿ ದಂಪತಿ ಬೆಳಗಾವಿಗೆ ಬಂದು ಮಗು ದತ್ತು ಪಡೆದಿದ್ದಾರೆ. ಇದು ನಮ್ಮವರಿಗೆ ಪ್ರೇರಣೆಯಾಗಬೇಕು. ನಮ್ಮ ದೇಶದಲ್ಲೆ ಇಂಥ ಮಕ್ಕಳನ್ನು ದತ್ತು ಪಡೆಯುವಂತಾಗಬೇಕು. ದತ್ತು ಪಡೆಯಲು ಇಚ್ಛಿಸುವ ಭಾರತೀಯ ದಂಪತಿ ನಿಯಮಾನುಸಾರ ಸ್ವೀಕರಿಸಬೇಕು - ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್