ಕರ್ನಾಟಕ

karnataka

By ETV Bharat Karnataka Team

Published : Mar 11, 2024, 2:14 PM IST

ETV Bharat / international

3 ದಿನಗಳ ಮಾರಿಷಸ್ ಅಧಿಕೃತ ಭೇಟಿಗೆ ತೆರಳಿದ ರಾಷ್ಟ್ರಪತಿ ಮುರ್ಮು

ಮೂರು ದಿನಗಳ ಭೇಟಿಗಾಗಿ ರಾಷ್ಟ್ರಪತಿ ಮುರ್ಮು ಇಂದು ಮಾರಿಷಸ್​ಗೆ ತೆರಳಿದರು.

Prez Murmu departs for Mauritius to attend National Day celebrations
Prez Murmu departs for Mauritius to attend National Day celebrations

ನವದೆಹಲಿ: ಭಾರತ-ಮಾರಿಷಸ್ ಬಾಂಧವ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಚ್ 11ರಿಂದ 13ರವರೆಗೆ ದ್ವೀಪ ರಾಷ್ಟ್ರಕ್ಕೆ ಅಧಿಕೃತ ಭೇಟಿಗಾಗಿ ತೆರಳಿದರು. ರಾಷ್ಟ್ರಪತಿ ಮುರ್ಮು ಅಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಭಾರತೀಯ ನೌಕಾಪಡೆಯ ಮೊದಲ ತರಬೇತಿ ಸ್ಕ್ವಾಡ್ರನ್ ನ ಎರಡು ಹಡಗುಗಳಾದ ಐಎನ್ಎಸ್ ಟಿಐಆರ್ ಮತ್ತು ಸಿಜಿಎಸ್ ಸಾರಥಿಯೊಂದಿಗೆ ಭಾರತೀಯ ನೌಕಾಪಡೆಯ ಒಂದು ತುಕಡಿ ಮಾರ್ಚ್ 12 ರ ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲಿದೆ.

"ಭಾರತ-ಮಾರಿಷಸ್ ಸಂಬಂಧದಲ್ಲಿ ಹೊಸ ಮೈಲಿಗಲ್ಲು ಇದಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮಾರಿಷಸ್ ಗೆ ಅಧಿಕೃತ ಭೇಟಿ ನೀಡಿದ್ದಾರೆ. ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ರಾಷ್ಟ್ರಪತಿಗಳು ನಾಳೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ" ಎಂದು ವಿದೇಶಾಂಗ ಸಚಿವಾಲಯ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಈ ಭೇಟಿಯ ಸಮಯದಲ್ಲಿ, ರಾಷ್ಟ್ರಪತಿ ಮುರ್ಮು ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಜಂಟಿಯಾಗಿ ಭಾರತದ ನೆರವಿನಿಂದ ನಿರ್ಮಾಣವಾದ 14 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜುಗ್ನೌತ್ ಅವರು ಅಗಲೇಗಾ ದ್ವೀಪದಲ್ಲಿ ಹೊಸ ಏರ್ ಸ್ಟ್ರಿಪ್ ಮತ್ತು ಜೆಟ್ಟಿ ಮತ್ತು ಇತರ ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದ್ದರು.

"2000 ರಿಂದ ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಆರನೇ ಭಾರತೀಯ ರಾಷ್ಟ್ರಪತಿಯಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರಿಷಸ್ ಭೇಟಿಯು ಭಾರತ ಮತ್ತು ಮಾರಿಷಸ್ ನಡುವಿನ ದೀರ್ಘಕಾಲದ ಮತ್ತು ಶಾಶ್ವತ ಸಂಬಂಧವನ್ನು ಒತ್ತಿಹೇಳುತ್ತದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕಳೆದ ವಾರ ಪ್ರಕಟಣೆಯಲ್ಲಿ ತಿಳಿಸಿದ್ದರು.

ಮುರ್ಮು ಅವರು ಮಾರಿಷಸ್ ಪ್ರಧಾನಿ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಿ ಜುಗ್ನೌತ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದಲ್ಲದೆ, ಅವರು ಮಾರಿಷಸ್ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಮಾರಿಷಸ್ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಅವರು ಪಾಂಪ್ಲೆಮಸ್ಸೆಸ್ ಬೊಟಾನಿಕಲ್ ಗಾರ್ಡನ್ ನಲ್ಲಿ ಅಗಲಿದ ಮಾರಿಷಸ್ ನಾಯಕರಿಗೆ ಗೌರವ ಸಲ್ಲಿಸಲಿದ್ದಾರೆ ಮತ್ತು ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಭಾರತೀಯ ಗುತ್ತಿಗೆ ಕಾರ್ಮಿಕರು ಮೊದಲು ಮಾರಿಷಸ್ ಗೆ ಆಗಮಿಸಿದ ಪ್ರವಾಸಿ ಘಾಟ್, ಖಂಡಾಂತರ ಗುಲಾಮಗಿರಿ ವಸ್ತುಸಂಗ್ರಹಾಲಯ ಮತ್ತು ಪವಿತ್ರ ಗಂಗಾ ತಲಾವ್ ಗೆ ಕೂಡ ಅವರು ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ :ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ

ABOUT THE AUTHOR

...view details