ಕರ್ನಾಟಕ

karnataka

ಬಾಂಗ್ಲಾದೇಶ: ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾದ ಸೇನೆ ಹಿಂಪಡೆಯುವಂತೆ ಮಿಲಿಟರಿ ಜನರಲ್​​ಗಳ ಒತ್ತಾಯ - Violence in Bangladesh

By PTI

Published : Aug 4, 2024, 7:04 PM IST

ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾದ ಮಿಲಿಟರಿಯನ್ನು ಹಿಂಪಡೆಯುವಂತೆ ಮಾಹಿ ಮಿಲಿಟರಿ ಜನರಲ್​ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾದ ಸೇನಾಪಡೆ
ಬಾಂಗ್ಲಾದೇಶದಲ್ಲಿ ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾದ ಸೇನಾಪಡೆ (IANS)

ಢಾಕಾ : ಬಾಂಗ್ಲಾದೇಶದ ಬೀದಿಗಳಲ್ಲಿ ನಿಯೋಜಿಸಲಾಗಿರುವ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಅವರನ್ನು ಬ್ಯಾರಕ್​ಗಳಿಗೆ ವಾಪಸ್ ಕಳುಹಿಸುವಂತೆ ಬಾಂಗ್ಲಾದೇಶದ ಮಾಜಿ ಹಿರಿಯ ಮಿಲಿಟರಿ ಜನರಲ್​ಗಳ ಗುಂಪು ರವಿವಾರ ಸರಕಾರವನ್ನು ಆಗ್ರಹಿಸಿದೆ. ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ದೇಶಾದ್ಯಂತ ಹಿಂಸಾಚಾರಗಳು ಮರುಕಳಿಸುತ್ತಿರುವ ನಡುವೆಯೇ ಈ ಒತ್ತಾಯ ಕೇಳಿ ಬಂದಿರುವುದು ಗಮನಾರ್ಹ.

"ರಾಜಕೀಯ ಕ್ರಮಗಳ ಮೂಲಕ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳನ್ನು ಇಂಥ ಅವಮಾನಕರ ಅಭಿಯಾನದಲ್ಲಿ ತೊಡಗಿಸುವ ಮೂಲಕ ಅವರ ಗೌರವಯುತ ಸ್ಥಾನಮಾನವನ್ನು ನಾಶಪಡಿಸಬೇಡಿ" ಎಂದು ಮಾಜಿ ಸೇನಾ ಮುಖ್ಯಸ್ಥ ಇಕ್ಬಾಲ್ ಕರೀಮ್ ಭುಯಿಯಾನ್ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆಯನ್ನು ಓದಿದ ಅವರು, "ಬಾಂಗ್ಲಾದೇಶದ ಸಶಸ್ತ್ರ ಪಡೆಗಳು ಎಂದಿಗೂ ಜನಸಾಮಾನ್ಯರೊಂದಿಗೆ ಸಂಘರ್ಷಕ್ಕೆ ಇಳಿದಿಲ್ಲ ಅಥವಾ ತಮ್ಮದೇ ನಾಗರಿಕರ ಎದೆಗೆ ಬಂದೂಕುಗಳನ್ನು ಗುರಿ ಮಾಡುವಂಥ ತರಬೇತಿಯನ್ನೂ ಅವು ಪಡೆದಿಲ್ಲ" ಎಂದು ಹೇಳಿದರು.

ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದಲ್ಲಿ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಭುಯಿಯಾನ್, ಢಾಕಾ ಕಂಟೋನ್ಮೆಂಟ್ ಪಕ್ಕದ ನಿವೃತ್ತ ಅಧಿಕಾರಿಗಳ ರಾವ್ವಾ ಕ್ಲಬ್​ನಲ್ಲಿ ಹತ್ತಕ್ಕೂ ಹೆಚ್ಚು ಮಾಜಿ ಹಿರಿಯ ಮತ್ತು ಮಧ್ಯಮ ಶ್ರೇಣಿಯ ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ಹೇಳಿಕೆಯನ್ನು ಓದಿದರು.

"ಕಳೆದ ಮೂರು ವಾರಗಳಿಂದ ಬಾಂಗ್ಲಾದೇಶದಲ್ಲಿ ಸಂಭವಿಸುತ್ತಿರುವ ಘೋರ ಹತ್ಯೆಗಳು, ಚಿತ್ರಹಿಂಸೆಗಳು, ಕಣ್ಮರೆಗಳು ಮತ್ತು ಸಾಮೂಹಿಕ ಬಂಧನಗಳಿಂದ ತೀವ್ರ ಕಳವಳ, ತೊಂದರೆ ಮತ್ತು ದುಃಖಿತರಾಗಿರುವುದರಿಂದ ನಾವು ಇವತ್ತು ಮಾತನಾಡುತ್ತಿದ್ದೇವೆ" ಎಂದು ಭುಯಿಯಾನ್ ತಿಳಿಸಿದರು.

ಆಂತರಿಕ ಅಶಾಂತಿಯನ್ನು ನಿಗ್ರಹಿಸಲು ಅರೆಸೈನಿಕ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ನೇತೃತ್ವದ ಸೇನಾ ಅಧಿಕಾರಿಗಳನ್ನು ಗಡಿ ಪ್ರದೇಶಗಳಿಂದ ಹಿಂತೆಗೆದುಕೊಂಡಿರುವ ಬಗ್ಗೆ ಮಾಜಿ ಮಿಲಿಟರಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.

ಹಸೀನಾ ಅವರ ಕಳೆದ 1996-2001ರ ಅಧಿಕಾರಾವಧಿಯಲ್ಲಿ ಇಂಧನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಮತ್ತೊಬ್ಬ ಮಾಜಿ ಸೇನಾ ಮುಖ್ಯಸ್ಥ, ಜನರಲ್ ನೂರುದ್ದಿನ್ ಖಾನ್ ಸಹ ಉಪಸ್ಥಿತರಿದ್ದರು. ಇವರಲ್ಲಿ ಕೆಲವರು 1971 ರ ವಿಮೋಚನಾ ಯುದ್ಧದ ಹೋರಾಟಗಾರರಾಗಿದ್ದಾರೆ.

ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿ ಆಂದೋಲನ ಸಂಘಟನೆಯು ಆರಂಭಿಸಿದ ಅಸಹಕಾರ ಚಳವಳಿಯ ಮೊದಲ ದಿನದಂದು, ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಮರುಕಳಿಸಿದ ಹಿಂಸಾಚಾರ: ಜಾಗರೂಕರಾಗಿರುವಂತೆ ಬಾಂಗ್ಲಾದೇಶದಲ್ಲಿನ ಭಾರತೀಯರಿಗೆ ಸೂಚನೆ - India issues advisory

ABOUT THE AUTHOR

...view details