ಅನಂಬ್ರಾ (ನೈಜೀರಿಯಾ):ನೈಜೀರಿಯಾದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಚಾರಿಟಿ ಕಾರ್ಯಕ್ರಮಗಳಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ನೇಯ ರಾಜ್ಯವಾದ ಅನಂಬ್ರಾದ ಓಕಿಜಾ ಎಂಬ ಪಟ್ಟಣದಲ್ಲಿ ಮೊದಲ ಕಾಲ್ತುಳಿತ ಸಂಭವಿಸಿದ್ದು, 22 ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆಹಾರ ಅಗತ್ಯವಿರುವ ಮಹಿಳೆಯರಿಗೆ ಮೂಲ ಸೌಲಭ್ಯವಾದ ಅಕ್ಕಿಯ ಚೀಲಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿದ ಜನರು ಸೇರಿದ್ದರಿಂದ ಈ ದುರಂತ ಸಂಭವಿಸಿದೆ.
ಅಕ್ಕಿ ಪಡೆಯಲು ಮುಗಿಬಿದ್ದು, ತಳ್ಳಾಟ ನೂಕಾಟ:ಅಧಿಕ ಜನರು ಸಮುದಾಯ ಕೇಂದ್ರಕ್ಕೆ ಆಗಮಿಸಿದ್ದು, ಅಕ್ಕಿ ಪಡೆಯುವ ಭರದಲ್ಲಿ ಎಲ್ಲರೂ ಒಂದೇ ಸಲಕ್ಕೆ ಸೇರಿದ್ದರಿಂದ ಗೊಂದಲ ಉಂಟಾಗಿ ಈ ದುರಂತ ಸಂಭವಿಸಿದೆ ಎಂದು ಸ್ಟೇಟ್ ಬ್ರಾಡ್ಕಾಸ್ಟರ್ ರೇಡಿಯೊ ನೈಜೀರಿಯಾ ವರದಿ ಮಾಡಿದೆ.
ಸಾವನ್ನಪ್ಪಿದವರಲ್ಲಿ ಮಹಿಳೆಯರು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅನಂಬ್ರಾ ರಾಜ್ಯ ಗವರ್ನರ್ನ ಮುಖ್ಯ ಪತ್ರಿಕಾ ಕಾರ್ಯದರ್ಶಿ ಕ್ರಿಶ್ಚಿಯನ್ ಅಬುರಿಮ್ ಹೇಳಿದ್ದಾರೆ.
ಓಬಿ ಜಾಕ್ಸನ್ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಚಾರಿಟಿ ಹಬ್ಬದ ಸಂದರ್ಭದಲ್ಲಿ ಯಾರು ಕಡಿಮೆ ಸೌಲಭ್ಯ ಹೊಂದಿದ್ದಾರೋ ಅಂತಹ ಸಮುದಾಯದ ಸದಸ್ಯರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಗುರಿಯಲ್ಲಿ ಈ ದತ್ತಿ ಸಂಸ್ಥೆ ಹೊಂದಿದೆ.
ಇನ್ನೊಂದೆಡೆಯೂ ಕಾಲ್ತುಳಿತ:ಇನ್ನು ಇದೇ ದಿನ, ನೈಜೀರಿಯಾದ ರಾಜಧಾನಿ ಅಬುಜಾದ ಮೈಟ್ನಾದಲ್ಲಿ ಮತ್ತೊಂದು ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿದೆ. ಸ್ಥಳೀಯ ಚರ್ಚ್ನಲ್ಲಿ ನಡೆದ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಎರಡೂ ದುರಂತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನೈಜೀರಿಯಾದ ಅಧ್ಯಕ್ಷ: ಈ 2 ದುರಂತಗಳಿಗೆ ಪ್ರತಿಕ್ರಿಯೆ ನೀಡಿರುವ ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು, ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಲಾಗೋಸ್ನಲ್ಲಿ ನಡೆದ ಬೋಟ್ ರೆಗಟ್ಟಾ ಹಬ್ಬದಲ್ಲಿ ಪಾಲ್ಗೊಳ್ಳುವ ಅವರ ಕಾರ್ಯಕ್ರಮವನ್ನೇ ರದ್ದುಗೊಳಿಸಿದರು. ಜತೆಗೆ ರಾಜ್ಯಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಜನಸಂದಣಿ ನಿಯಂತ್ರಣ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಕರೆ ನೀಡಿದರು.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಆಂತರಿಕ ಕಲಹ: 11 ಶಂಕಿತ ಉಗ್ರರನ್ನು ಹೊಡೆದುರುಳಿಸಿದ ಸೇನೆ