ಕರ್ನಾಟಕ

karnataka

ಪಪುವಾ ನ್ಯೂ ಗಿನಿಯಾದಲ್ಲಿ ಬುಡಕಟ್ಟು ಜನರ ಸಂಘರ್ಷ: 20 ಸಾವು, 5 ಸಾವಿರ ಜನರ ಪಲಾಯನ - Papua New Guinea Clashes

By ETV Bharat Karnataka Team

Published : Sep 16, 2024, 8:19 PM IST

ಪಪುವಾ ನ್ಯೂ ಗಿನಿಯಾದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 20 ಜನ ಸಾವಿಗೀಡಾಗಿದ್ದಾರೆ.

ಪಪುವಾ ನ್ಯೂ ಗಿನಿಯಾದಲ್ಲಿ ಬುಡಕಟ್ಟು ಜನರ ಸಂಘರ್ಷ
ಪಪುವಾ ನ್ಯೂ ಗಿನಿಯಾದಲ್ಲಿ ಬುಡಕಟ್ಟು ಜನರ ಸಂಘರ್ಷ (IANS)

ಸಿಡ್ನಿ: ಪಪುವಾ ನ್ಯೂ ಗಿನಿಯಾದ ಚಿನ್ನದ ಗಣಿಯೊಂದರ ಬಳಿ ಎರಡು ಬುಡಕಟ್ಟು ಜನಾಂಗಗಳ ನಡುವೆ ಭುಗಿಲೆದ್ದಿರುವ ಭಾರಿ ಘರ್ಷಣೆಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಹಿಳೆಯರು, ಬಾಲಕಿಯರು, ವೃದ್ಧರು ಮತ್ತು ಬಾಲಕರು ಘರ್ಷಣೆಯಿಂದ ಪಾರಾಗಲು ಇಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ವರದಿಗಳು ಸೋಮವಾರ ತಿಳಿಸಿವೆ.

ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಎರಡು ಬಣಗಳ ನಡುವೆ ಜಗಳ:ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದಾದ ಎಂಗಾ ಪ್ರಾಂತ್ಯದ ಪೊರ್ಗೆರಾ ಕಣಿವೆಯಲ್ಲಿ ಕಳೆದ ವಾರ ಅಕ್ರಮ ಗಣಿಗಾರರ ಎರಡು ಬಣಗಳ ಮಧ್ಯೆ ಜಗಳವಾಡಿಕೊಂಡಿವೆ. ಒಂದು ಬಣದವರು ಮತ್ತೊಂದು ಬಣದ ಇಬ್ಬರು ವ್ಯಕ್ತಿಗಳನ್ನು ಕೊಂದ ನಂತರ ಹೋರಾಟ ಭುಗಿಲೆದ್ದಿತು ಎಂದು ಸ್ಥಳೀಯ ಪತ್ರಿಕೆ ಪೋಸ್ಟ್ - ಕೊರಿಯರ್ ಅನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಬ್ಬರು ಸ್ಥಳೀಯ ಗಣಿ ಕಾರ್ಮಿಕರು ಸೇರಿದಂತೆ ಸುಮಾರು 20 ಜನ ಸಾವನ್ನಪ್ಪಿದ್ದಾರೆ ಮತ್ತು ದಿನ ಕಳೆದಂತೆ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪೋಸ್ಟ್-ಕೊರಿಯರ್ ವರದಿ ಮಾಡಿದೆ. ಪೊರ್ಗೆರಾದಲ್ಲಿ 5,000 ಕ್ಕೂ ಹೆಚ್ಚು ಜನರು ಸಾಮೂಹಿಕ ಪಲಾಯನ ಮಾಡಿದ್ದಾರೆ.

ಹೆಚ್ಚುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಂದಾಗಿ ಪೊರ್ಗೆರಾದಲ್ಲಿ ಮೂಲಸೌಕರ್ಯ ಮತ್ತು ನಿವಾಸಿಗಳನ್ನು ರಕ್ಷಿಸಲು ಪೊಲೀಸ್ ಆಯುಕ್ತ ಡೇವಿಡ್ ಮ್ಯಾನಿಂಗ್ ತುರ್ತು ಆದೇಶಗಳನ್ನು ಘೋಷಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ದಿ ನ್ಯಾಷನಲ್ ವರದಿ ಮಾಡಿದೆ. ಪೊರ್ಗೆರಾ ಗಣಿ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ರಕ್ಷಿಸುವ ಸಲುವಾಗಿ ಹೋರಾಟಗಾರರನ್ನು ಇಲ್ಲಿಂದ ಹೊರಹಾಕಲು ಪೊಲೀಸರು ಬಲಪ್ರಯೋಗ ಮಾಡಲಿದ್ದಾರೆ ಎಂದು ಮ್ಯಾನಿಂಗ್ ಹೇಳಿದರು.

ಭೂ ಮಾಲೀಕರಿಗೆ ಬೆದರಿಕೆ:"ಮುಗ್ಧರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಕಾನೂನುಬದ್ಧ ಮಾರಕ ಬಲ ಬಳಸಲಿದ್ದಾರೆ. ಅಂದರೆ ಸಾರ್ವಜನಿಕವಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಬಲದಿಂದ ವ್ಯವಹರಿಸಲಾಗುತ್ತದೆ. ಅಕ್ರಮ ಗಣಿಗಾರರು ಮತ್ತು ವಸಾಹತುಗಾರರಿಂದ ಪರಿಸ್ಥಿತಿ ಹದಗೆಡುತ್ತಿದೆ. ಇವರು ಹಿಂಸಾಚಾರದ ಮೂಲಕ ಸಾಂಪ್ರದಾಯಿಕ ಭೂಮಾಲೀಕರನ್ನು ಬೆದರಿಸುತ್ತಿದ್ದಾರೆ." ಎಂದು ಮ್ಯಾನಿಂಗ್ ಹೇಳಿದರು.

"ಮೊಬೈಲ್ ಸ್ಕ್ವಾಡ್, ಶ್ವಾನದಳ ಮತ್ತು ಸೆಕ್ಟರ್ ರೆಸ್ಪಾನ್ಸ್ ಯುನಿಟ್ ಮತ್ತು ಪಪುವಾ ನ್ಯೂ ಗಿನಿಯಾ ರಕ್ಷಣಾ ಪಡೆಯ ಸಿಬ್ಬಂದಿ ಸೇರಿದಂತೆ 122 ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ" ಎಂದು ಅವರು ಹೇಳಿದರು. ಕಳೆದ ಕೆಲವು ದಿನಗಳಿಂದ ಪೊರ್ಗೆರಾ ಕಣಿವೆಯಲ್ಲಿ ಬುಡಕಟ್ಟು ಹಿಂಸಾಚಾರ ಹೆಚ್ಚುತ್ತಿರುವುದರಿಂದ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುವಂತೆ ಎಂಗಾ ಗವರ್ನರ್ ಪೀಟರ್ ಇಪಾಟಾಸ್ ಭಾನುವಾರ ಸರ್ಕಾರಕ್ಕೆ ಕರೆ ನೀಡಿದ್ದಾರೆ.

ಇದನ್ನೂ ಓದಿ : 'ಯಾರೊಬ್ಬರು ಇನ್ನೂ ಬೈಡನ್- ಕಮಲಾ ಹತ್ಯೆಗೆ ಪ್ರಯತ್ನಿಸಿಲ್ಲ?: ವಿವಾದ ಸೃಷ್ಟಿಸಿದ ಮಸ್ಕ್ ಹೇಳಿಕೆ - Elon Musk

ABOUT THE AUTHOR

...view details