ಕರ್ನಾಟಕ

karnataka

ಮೂಳೆ ಸವೆತ ಮತ್ತು ಮಂಡಿನೋವು: ತಡೆಗಟ್ಟಲು ಇದೆ ತ್ರಿಸೂತ್ರ - how to prevent bone erosion

By ETV Bharat Karnataka Team

Published : Aug 4, 2024, 5:32 AM IST

ಮೂಳೆ ಸವೆತ ಮತ್ತು ಮಂಡಿನೋವು ಮನುಷ್ಯನಿಗೆ ಕಾಡುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೆ ಇರುವ ಪರಿಹಾರಗಳನ್ನು ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶಾಂತರಾಮ ಶೆಟ್ಟಿ ವಿವರಿಸಿದ್ದಾರೆ.

ಮೂಳೆ ಸವೆತ ಮತ್ತು ಮಂಡಿನೋವು
ಮೂಳೆ ಸವೆತ ಮತ್ತು ಮಂಡಿನೋವು (ETV Bharat)

ಮೂಳೆ ಶಸ್ತ್ರಚಿಕಿತ್ಸಕ ಡಾ ಶಾಂತರಾಮ ಶೆಟ್ಟಿ (ETV Bharat)

ಮಂಗಳೂರು: ಮೂಳೆ ಸವೆತ ಮತ್ತು ಮಂಡಿನೋವು ಮನುಷ್ಯನಿಗೆ ಕಾಡುವ ಸಾಮಾನ್ಯ ಸಮಸ್ಯೆ. ಮನುಷ್ಯನಿಗೆ ವಯಸ್ಸಾದಂತೆ ಮೂಳೆ ಸವೆತ ಮತ್ತು ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಮನುಷ್ಯನಿಗೆ ಕಾಡುವ ಈ ಸಮಸ್ಯೆಗೆ ಪರಿಹಾರಗಳೇನು ಎಂಬ ಬಗ್ಗೆ ವಿಶೇಷ ವರದಿ ಇಲ್ಲಿದೆ.

ಮೂಳೆ ಸವೆತ ಮತ್ತು ಮಂಡಿನೋವು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ‌ ಸಮಸ್ಯೆಯಾಗಿದೆ. ಇದು ಮೂಳೆಗಳ ನಡುವೆ ಉಜ್ಜುವಿಕೆಗೆ ಕಾರಣವಾಗಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಮೂಳೆ ಸವೆತದಿಂದ ಹೆಚ್ಚಾಗಿ ಮಂಡಿಯಲ್ಲಿ ಸಮಸ್ಯೆ ಕಂಡುಬರುತ್ತದೆ.

ಮಂಡಿನೋವಿಗೆ ಕಾರಣಗಳು: ವಯಸ್ಸಾದಂತೆ ಮಂಡಿನೋವು ಕಾಣಿಸುವುದು ಸಾಮಾನ್ಯ. ಅಧಿಕ ತೂಕವು ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಮೊಣಕಾಲಿನ ಗಾಯಗಳು ಮಂಡಿನೋವಿಗೆ ಕಾರಣವಾಗಬಹುದು. ಕೆಲವೊಮ್ಮೆ ಜನರು ಮೊಣಕಾಲಿನ ಸಮಸ್ಯೆಯೊಂದಿಗೆ ಜನಿಸುತ್ತಾರೆ, ಇದು ಮೂಳೆ ಸವೆತಕ್ಕೆ ಕಾರಣವಾಗಬಹುದು. ಕೆಲವು ಕೆಲಸಗಳು ಅಥವಾ ಕ್ರೀಡೆಗಳು ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತವೆ ಇದರಿಂದ ಮಂಡಿನೋವು ಕಾಣಿಸಿಕೊಳ್ಳುತ್ತದೆ.

ಮಂಡಿನೋವಿನ ಲಕ್ಷಣಗಳು: ಮೊಣಕಾಲಿನಲ್ಲಿ ನೋವು ಊತ ಬೆಳಗ್ಗೆ ಎದ್ದಾಗ ಅಥವಾ ದೀರ್ಘಕಾಲ ಒಂದೇ ಸ್ಥಾನದಲ್ಲಿ ಕುಳಿತಾಗ ನೋವು ಹೆಚ್ಚಾಗುವುದು ಮೊಣಕಾಲನ್ನು ಬಾಗಿಸುವಾಗ ಅಥವಾ ನೇರಗೊಳಿಸುವಾಗ ನೋವುಂಟಾಗುವುದು.

ಮಂಡಿನೋವಿಗೆ ಪರಿಹಾರಗಳೇನು?: ಮೂಳೆ ಸವೆತ ಮತ್ತು ಮಂಡಿನೋವಿಗೆ ಸಂಬಂಧಿಸಿದಂತೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶಾಂತರಾಮ ಶೆಟ್ಟಿ, ಒಬ್ಬ ವ್ಯಕ್ತಿ ಸರಾಸರಿ 60 ವರ್ಷ ಬದುಕುತ್ತಾನೆ. ವಯಸ್ಸು ಹೆಚ್ಚಾಗುತ್ತಾ ಹೋಗುವಾಗ ಮೂಳೆ, ಮಾಂಸ ಖಂಡಗಳು, ಮೆದುಳಿನ ಶಕ್ತಿ ಕಡಿಮೆಯಾಗುತ್ತದೆ. ಅದರಂತೆ ಮೂಳೆಯ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲಿ ಮೊಣ ಗಂಟಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಮೊಣ ಗಂಟು ಪ್ರಾಯವಾಗುತ್ತಿದ್ದಂತೆ ಊನವಾಗಿ ಬಗ್ಗಿಹೋಗುತ್ತದೆ. ಅದರ ಶಕ್ತಿ ಕುಂದುವ ಜೊತೆಗೆ ನಿಯಂತ್ರಣ ತಪ್ಪುತ್ತದೆ. ಇದನ್ನು ತಡೆಗಟ್ಟಲು ಹೆಚ್ಚು ಬೊಜ್ಜನ್ನು ನಿಯಂತ್ರಣ ಮಾಡಬೇಕು. 40 ಮೀರಿದವರು ಪ್ರತಿದಿನ ಸರಿಯಾದ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಪೌಷ್ಠಿಕ ಆಹಾರವನ್ನು ಸೇವಿಸುವುದನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಮೊಣ ಕಾಲಿಗೆ ನೋವುಂಟಾದರೆ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು. ಇದೀಗ ಇಂತಹ ಸಮಸ್ಯೆಗೆ ಇಡಿ ಮೊಣಗಂಟನ್ನೇ ಬದಲಾಯಿಸಲಾಗುತ್ತದೆ. ಇದರಿಂದ 20 ವರ್ಷ ಯಾವುದೇ ನೋವು ಇರುವುದಿಲ್ಲ. ಅವರು ಇತರರಂತೆ ಕಾರ್ಯ ನಿರ್ವಹಿಸಬಹುದು. ಒಮ್ಮೆ ಊನ ಕಾಣಿಸಿಕೊಂಡರೆ ಅದಕ್ಕೆ ಚಿಕಿತ್ಸೆ ಅಗತ್ಯ. ಆದರೆ ಅದು ಬರುವುದಕ್ಕೆ ಮುಂಚೆ ಸರಿಯಾದ ಆಹಾರ, ಬೊಜ್ಜು ಬಾರದಿರುವುದು ಮತ್ತು ವ್ಯಾಯಮ ಮಾಡುವುದು ಅಗತ್ಯ ಎಂದು ತಿಳಿಸಿದರು.

ತ್ರಿಸೂತ್ರ ಮಂಡಿನೋವನ್ನು ಬಾರದಂತೆ ತಡೆಗಟ್ಟಲು ಈ ಕೆಳಗಿನ ತ್ರಿಸೂತ್ರ ಪಾಲಿಸಬೇಕು.

1.ಬೊಜ್ಜು ಬಾರದಂತೆ ತಡೆಯುವುದು: ದೇಹದಲ್ಲಿ ಬೊಜ್ಜು ಬಂದರೆ ಮಂಡಿಯ ಮೇಲೆ ಒತ್ತಡ ಆಗುತ್ತದೆ. ಪರಿಣಾಮ ಮೂಳೆ ಸವೆತದಿಂದ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಬೊಜ್ಜು ಬಾರದಂತೆ ತಡೆಯಬೇಕಾಗಿದೆ.

2.ವ್ಯಾಯಾಮ ಮಾಡುವುದು: ದೇಹವನ್ನು ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು. 40 ವರ್ಷದ ಬಳಿಕ ವ್ಯಾಯಾಮವನ್ನು ಮಾಡುವ ಮೂಲಕ ಮಂಡಿನೋವು ಬಾರದಂತೆ ತಡೆಯಬೇಕಾಗಿದೆ.

3. ಪೌಷ್ಠಿಕ ಆಹಾರ ಸೇವನೆ: ಮನುಷ್ಯನಿಗೆ ಪೌಷ್ಠಿಕ ಆಹಾರ ಅತ್ಯಗತ್ಯ. ಇದು ಮೂಳೆ ಸವೆತ ಮತ್ತು ಮಂಡಿ ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?. ಮೊಣಕಾಲಿನ ನೋವು ದೀರ್ಘಕಾಲದವರೆಗೆ ಇದ್ದರೆ ಅಥವಾ ದೈನಂದಿನ ಚಟುವಟಿಕೆಗಳನ್ನು ಮಾಡಲು ತೊಂದರೆ ಆಗುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಇದನ್ನೂ ಓದಿ:ಫಿಟ್ನೆಸ್​ನಿಂದಲೇ ಪತ್ತೆ ಮಾಡಬಹುದು ನಿಮ್ಮ ವಯಸ್ಸು; ಕೇವಲ 30 ಸೆಕೆಂಡ್​ನಲ್ಲಿ ತಿಳಿಯೋದು ಹೀಗೆ - FITNESS WILL TELL AGE

ABOUT THE AUTHOR

...view details