ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಚಿತ್ರ 'ಸಾರಾಂಶ'. ಬಹಳ ವರ್ಷಗಳ ಬಳಿಕ ನಟಿ ಶೃತಿ ಹರಿಹರನ್ ಬಣ್ಣ ಹಚ್ಚಿರುವ ಚಿತ್ರಕ್ಕೆ 'ಸಪ್ತಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ಸಾಥ್ ಕೊಟ್ಟಿದ್ದಾರೆ. ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ 'ಸಾರಾಂಶ'ದ ಟ್ರೇಲರ್ ಅನ್ನು ಹೇಮಂತ್ ರಾವ್ ಬಿಡುಗಡೆಗೊಳಿಸಿ ಮೆಚ್ಚಿಕೊಂಡಿದ್ದಾರೆ.
'ಸಾರಾಂಶ' ಟ್ರೇಲರ್:ಚಿತ್ರದ ಬಗೆಗಿನ ಮಾಹಿತಿಯನ್ನು ಹಂತಹಂತವಾಗಿ ಚಿತ್ರತಂಡ ಬಹಿರಂಗಪಡಿಸುತ್ತಿದೆ. ಇದೀಗ ಒಂದಿಡೀ ಸಿನಿಮಾದ ಆಂತರ್ಯವನ್ನು ತೆರೆದಿಡುವಂಥ ಟ್ರೇಲರ್ ರಿಲೀಸ್ ಮಾಡಿದೆ. ವರ್ಷಾಂತರಗಳ ಹಿಂದೆ ಬಿಡುಗಡೆಗೊಂಡು, ಇಂದಿಗೂ ಚಾರ್ಮ್ ಉಳಿಸಿಕೊಂಡಿರುವ 'ಲೂಸಿಯಾ' ಸದಸ್ಯರು ಈ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದರು. ನಿರ್ದೇಶಕ ಸೂರ್ಯ ವಸಿಷ್ಠ ಕೂಡಾ ಲೂಸಿಯಾ ಭಾಗವಾಗಿದ್ದವರೇ. ಇವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆಗೊಂಡಿದೆ.
ನಿರ್ದೇಶಕ ಸೂರ್ಯ ವಸಿಷ್ಠ ಮಾತನಾಡಿ, "ಇದು ಈ ದಿನಮಾನಕ್ಕೆ ಅತ್ಯಂತ ಅಪರೂಪವೆಂಬಂಥ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ನಾನು ಒಂದು ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದೇನೆ. ಇದರ ಜೊತೆಗೆ ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ. ಸಿನಿಮಾದ ಎಲ್ಲಾ ಪಾತ್ರಗಳೂ ವಿಶೇಷವಾಗಿವೆ ಎಂಬುದಕ್ಕೆ ಈ ಟ್ರೇಲರ್ನಲ್ಲಿ ಪುರಾವೆಗಳು ಸಿಗುತ್ತವೆ. ಅದರಲ್ಲೊಂದು ಪಾತ್ರವನ್ನು ಶ್ವೇತಾ ಗುಪ್ತ ನಿರ್ವಹಿಸಿದ್ದಾರೆ. ಕನ್ನಡತನದ ಬಗ್ಗೆ ಅತೀವ ಪ್ರೀತಿ ಆಸಕ್ತಿ ಇಟ್ಟುಕೊಂಡಿರುವ ಕನ್ನಡೇತರ ಬುಕ್ ಪಬ್ಲಿಷರ್ನ ಪಾತ್ರವಿದೆ. ಸದ್ಯ ರಿವೀಲ್ ಆಗಿರುವ ಟ್ರೇಲರ್ನಲ್ಲಿ ಪ್ರಧಾನವಾಗಿ ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಅದು ಟ್ರೇಲರ್ನ ಪ್ರಮುಖ ಆಕರ್ಷಣೆ" ಎಂದು ಅಭಿಪ್ರಾಯ ಹಂಚಿಕೊಂಡರು.