ಕರ್ನಾಟಕ

karnataka

By ETV Bharat Karnataka Team

Published : Feb 1, 2024, 8:22 AM IST

ETV Bharat / entertainment

ಶೃತಿ ಹರಿಹರನ್‌ 'ಸಾರಾಂಶ' ಚಿತ್ರದ ಟ್ರೇಲರ್​ ಬಿಡುಗಡೆ

Saramsha: ಶೃತಿ ಹರಿಹರನ್‌ ಮುಖ್ಯಭೂಮಿಕೆಯ 'ಸಾರಾಂಶ' ಸಿನಿಮಾದ ಟ್ರೇಲರ್​ ಅನಾವರಣಗೊಂಡಿದೆ.

Saramsha trailer release
'ಸಾರಾಂಶ' ಟ್ರೇಲರ್​ ಅನಾವರಣ

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಚಿತ್ರ 'ಸಾರಾಂಶ'. ಬಹಳ ವರ್ಷಗಳ ಬಳಿಕ ನಟಿ ಶೃತಿ ಹರಿಹರನ್ ಬಣ್ಣ ಹಚ್ಚಿರುವ ಚಿತ್ರಕ್ಕೆ 'ಸಪ್ತಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ಸಾಥ್ ಕೊಟ್ಟಿದ್ದಾರೆ. ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ 'ಸಾರಾಂಶ'ದ ಟ್ರೇಲರ್​ ಅನ್ನು ಹೇಮಂತ್ ರಾವ್ ಬಿಡುಗಡೆಗೊಳಿಸಿ ಮೆಚ್ಚಿಕೊಂಡಿದ್ದಾರೆ‌.

'ಸಾರಾಂಶ' ಟ್ರೇಲರ್​​​:ಚಿತ್ರದ ಬಗೆಗಿನ ಮಾಹಿತಿಯನ್ನು ಹಂತಹಂತವಾಗಿ ಚಿತ್ರತಂಡ ಬಹಿರಂಗಪಡಿಸುತ್ತಿದೆ. ಇದೀಗ ಒಂದಿಡೀ ಸಿನಿಮಾದ ಆಂತರ್ಯವನ್ನು ತೆರೆದಿಡುವಂಥ ಟ್ರೇಲರ್​ ರಿಲೀಸ್ ಮಾಡಿದೆ. ವರ್ಷಾಂತರಗಳ ಹಿಂದೆ ಬಿಡುಗಡೆಗೊಂಡು, ಇಂದಿಗೂ ಚಾರ್ಮ್ ಉಳಿಸಿಕೊಂಡಿರುವ 'ಲೂಸಿಯಾ' ಸದಸ್ಯರು ಈ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದರು. ನಿರ್ದೇಶಕ ಸೂರ್ಯ ವಸಿಷ್ಠ ಕೂಡಾ ಲೂಸಿಯಾ ಭಾಗವಾಗಿದ್ದವರೇ. ಇವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆಗೊಂಡಿದೆ.

'ಸಾರಾಂಶ' ಚಿತ್ರತಂಡ

ನಿರ್ದೇಶಕ ಸೂರ್ಯ ವಸಿಷ್ಠ ಮಾತನಾಡಿ, "ಇದು ಈ ದಿನಮಾನಕ್ಕೆ ಅತ್ಯಂತ ಅಪರೂಪವೆಂಬಂಥ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ನಾನು ಒಂದು ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದೇನೆ. ಇದರ ಜೊತೆಗೆ ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ. ಸಿನಿಮಾದ ಎಲ್ಲಾ ಪಾತ್ರಗಳೂ ವಿಶೇಷವಾಗಿವೆ ಎಂಬುದಕ್ಕೆ ಈ ಟ್ರೇಲರ್​​​ನಲ್ಲಿ ಪುರಾವೆಗಳು ಸಿಗುತ್ತವೆ. ಅದರಲ್ಲೊಂದು ಪಾತ್ರವನ್ನು ಶ್ವೇತಾ ಗುಪ್ತ ನಿರ್ವಹಿಸಿದ್ದಾರೆ. ಕನ್ನಡತನದ ಬಗ್ಗೆ ಅತೀವ ಪ್ರೀತಿ ಆಸಕ್ತಿ ಇಟ್ಟುಕೊಂಡಿರುವ ಕನ್ನಡೇತರ ಬುಕ್ ಪಬ್ಲಿಷರ್​ನ ಪಾತ್ರವಿದೆ. ಸದ್ಯ ರಿವೀಲ್ ಆಗಿರುವ ಟ್ರೇಲರ್​ನಲ್ಲಿ ಪ್ರಧಾನವಾಗಿ ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಅದು ಟ್ರೇಲರ್​ನ ಪ್ರಮುಖ ಆಕರ್ಷಣೆ" ಎಂದು ಅಭಿಪ್ರಾಯ ಹಂಚಿಕೊಂಡರು.

'ಸಾರಾಂಶ' ಚಿತ್ರತಂಡ

ಇದನ್ನೂ ಓದಿ:ಸುದೀಪ್​ ಸಿನಿಪಯಣಕ್ಕೆ 28 ವರ್ಷ: ಬಿಗ್​​ ಬಾಸ್​​ ಜರ್ನಿಗೆ 'ದಶಕ'ದ ಸಂಭ್ರಮ

ದೀಪಕ್ ಸುಬ್ರಮಣ್ಯ, ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಸೇರಿದಂತೆ ಮುಂತಾದವರು 'ಸಾರಾಂಶ'ದಲ್ಲಿ ಅಭಿನಯಿಸಿದ್ದಾರೆ. ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನವಿದೆ. ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಮೂಲಕ ಪರಿಚಯವಾಗುತ್ತಿದ್ದಾರೆ. ಅವರ ಛಾಯಾಗ್ರಹಣ ಕೂಡಾ ಸಾರಾಂಶದ ಶಕ್ತಿಯಂತಿದೆ. ರವಿ ಕಶ್ಯಪ್ ಮತ್ತು ಆರ್.ಕೆ.ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೇ ಫೆಬ್ರವರಿ 15ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ:'ಸಾರಾಂಶ'ದೊಂದಿಗೆ ಪ್ರೇಕ್ಷಕರೆದುರು ಬರಲಿದ್ದಾರೆ ಶೃತಿ ಹರಿಹರನ್

ಟ್ರೇಲರ್​ ಲಾಂಚ್​ ಈವೆಂಟ್​ನಲ್ಲಿ ನಿರ್ದೇಶಕ ಸೂರ್ಯ ವಸಿಷ್ಠ, ಶ್ರುತಿ ಹರಿಹರನ್, ದೀಪಕ್ ಸುಬ್ರಮಣ್ಯ, ಸಂಗೀತ ನಿರ್ದೇಶಕ ಉದಿತ್ ಹರಿತಾಸ್, ರವಿ ಭಟ್, ಶ್ವೇತಾ ಗುಪ್ತ ಉಪಸ್ಥಿತರಿದ್ದರು.

ABOUT THE AUTHOR

...view details