ಕರ್ನಾಟಕ

karnataka

ETV Bharat / entertainment

ದೇವರಾಜ್ ಪುತ್ರನಿಗೆ ಶಿವಣ್ಣ ಬೆಂಬಲ: ಅದ್ಭುತ ಕಥೆ ಹೇಳಲು ಸಜ್ಜಾದ ರಂಗಾಯಣ ರಘು, ಪ್ರಣಂ ದೇವರಾಜ್

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ 'S/O ಮುತ್ತಣ್ಣ'ನಿಗೆ ಸಾಥ್ ಕೊಟ್ಟಿದ್ದಾರೆ. ರಂಗಾಯಣ ರಘು, ಪ್ರಣಂ ದೇವರಾಜ್ ನಟನೆಯ ಈ ಸಿನಿಮಾದ ಟೀಸರ್​ ಅನಾವರಣಗೊಳಿಸಿದ್ದಾರೆ.

S/O MUTHANNA film team
'S/O ಮುತ್ತಣ್ಣ' ಟೀಸರ್​​ ರಿಲೀಸ್​ ಈವೆಂಟ್​ (ETV Bharat)

By ETV Bharat Entertainment Team

Published : 5 hours ago

ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲು ಗೆಲುವುಗಳಾಚೆಗೆ ಇಂಥ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ ''S/O ಮುತ್ತಣ್ಣ''.

ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ 'S/O ಮುತ್ತಣ್ಣ'ನಿಗೆ ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'S/O ಮುತ್ತಣ್ಣ' ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಟೀಸರ್ ರಿಲೀಸ್ ಮಾಡಿದ ಶಿವಣ್ಣ ತಮ್ಮದೇ ಮುತ್ತಣ್ಣ ಸಿನಿಮಾದ ಹಾಡು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕನ್ನಡ ಚಿತ್ರರಂಗದ ಲೆಜೆಂಡ್​ಗಳಲ್ಲಿ ಒಬ್ಬರಾದ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಟೀಸರ್​ ಬಿಡುಗಡೆ ಬಳಿಕ ಮಾತನಾಡಿದ ಡಾ.ಶಿವರಾಜ್​ಕುಮಾರ್, ದೇವರಾಜ್ ಅವರ ಫ್ಯಾಮಿಲಿ ಎಂದರೆ ನಮಗೆ ಅಭಿಮಾನ, ಪ್ರೀತಿ, ವಿಶ್ವಾಸ. ಟೀಸರ್​ ಖುಷಿಯಾಯ್ತು. ತಂದೆ ಮಗನ ಬಾಂಧವ್ಯ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅಪ್ಪಾಜಿ ಜೊತೆಗಿನ ನನ್ನ ಹಳೇ ನೆನಪುಗಳು ನೆನಪಾದವು. ತಂದೆ ಮಗನ ಬಾಂಧವ್ಯದ ಸಿನಿಮಾಗಳು ಯಶಸ್ವಿಯಾಗಬೇಕು. ಈ ಟೀಸರ್ ರಿಲೀಸ್​​ ಸಮಾರಂಭದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ದೇವರಾಜ್ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ. ಕನ್ನಡ ಇಂಡಸ್ಟ್ರಿಯ ಯಾರೇ ಆಗಲಿ ಸಪೋರ್ಟ್ ಮಾಡುತ್ತೇವೆ. ನಮ್ಮ ಭಾಷೆ ಉಳಿಬೇಕು ಅಂದರೆ ಯಾವುದೇ ಹೀರೋ ಸಿನಿಮಾಗಳು ಗೆಲ್ಲಬೇಕು ಎಂದರು.

'S/O ಮುತ್ತಣ್ಣ' ಚಿತ್ರತಂಡ (ETV Bharat)

ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮುತ್ತಣ್ಣ ಟೈಟಲ್ ಏಕೆ ಇಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಾಗಿರಬೇಕು. ಒರಿಜಿನಲ್ ಮುತ್ತಣ್ಣನೇ ಬಂದಿದ್ದಾರೆ. ಪುರಾತನ ಫಿಲ್ಮಂಸ್ ಹರಿಯಣ್ಣ ಶಿವಣ್ಣನ ದೊಡ್ಡ ಅಭಿಮಾನಿ. ಶಿವಣ್ಣನೇ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದು ಕನಸಾಗಿತ್ತು. ಶಿವಣ್ಣ ಆಶೀರ್ವಾದ ಮಾಡಿದ್ದಾರೆ. ಡೈನಾಮಿಕ್ ಅಂಡ್ ಯಂಗ್ ಡೈನಾಮಿಕ್ ಎಲ್ಲರಿಗೂ ಒಳ್ಳೆಯದಾಗಲಿ. ಬೆಳೆಯಬೇಕು, ಉಳಿಯಬೇಕು, ತಂದೆ ತಾಯಿಯ ಹೆಸರನ್ನು ಉಳಿಸಬೇಕು ಬೆಳೆಸಬೇಕು ಎನ್ನುವುದು ಯಾವುದೇ ಕಲಾವಿದರ ಮಕ್ಕಳಿಗಿರುವ ಆಸೆ. ಅದು ಪ್ರಜ್ವಲ್ ಹಾಗೂ ಪ್ರಣಂ ಇಬ್ಬರಲ್ಲಿಯೂ ಇದೆ. ಸಿನಿಮಾ ಬದುಕು, ರೀತಿ ರಿವಾಜುಗಳನ್ನು ತುಂಬಾ ಸರಳ ಅಂತಾ ತೋರಿಸಿಕೊಟ್ಟಿದ್ದು ರಾಜ್​​ಕುಮಾರ್ ಕುಟುಂಬ. ಪ್ರಣಂಗೆ ಸಿನಿಮಾ ಗುಣವಿದೆ. ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

'S/O ಮುತ್ತಣ್ಣ' ಟೀಸರ್​​ ರಿಲೀಸ್​ ಈವೆಂಟ್​ (ETV Bharat)

’ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ರಿಲೀಸ್​ ಖುಷಿ ತಂದಿದೆ’: ನಾಯಕ ಪ್ರಣಂ ದೇವರಾಜ್ ಮಾತನಾಡಿ, ''ರಿಯಲ್ ಸನ್ ಆಫ್ ಮುತ್ತಣ್ಣ ಅವರು ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ರಿಲೀಸ್​ ಮಾಡಿಕೊಟ್ಟಿರುವುದು ಖುಷಿ ಕೊಟ್ಟಿದೆ. ನಾವೆಲ್ಲರೂ ಶಿವಣ್ಣನ ಅಭಿಮಾನಿ. ನಿಮ್ಮನ್ನು ನೋಡಿಕೊಂಡು ಬೆಳೆದಿರುವುದು. ನಿಮ್ಮ ಡ್ಯಾನ್ಸ್, ನಟನೆ, ಆ್ಯಕ್ಷನ್ ಎಲ್ಲದಕ್ಕೂ ಅಭಿಮಾನಿ. ಅವರ ಬಗ್ಗೆ ಮಾತಾನಾಡಲು ನಾನು ಸಾಕಷ್ಟು ಚಿಕ್ಕವನು. ಮುಂದಿನ ಜನರೇಷನ್​ಗೆ ನೀವೇ ಸ್ಫೂರ್ತಿ. ತಂದೆ ತಂದೆಯಾಗುವ ಮುನ್ನ ಸಾಮಾನ್ಯ ಮನುಷ್ಯ. ಹೆಂಡ್ತಿ, ಕೆಲಸ, ಮನೆ ನೋಡಿಕೊಳ್ಳುತ್ತಾನೆ. ಆದ್ರೆ ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ ಆದ ಬಳಿಕ ಎಷ್ಟೋ ಕಥೆ ಹುಟ್ಟುತ್ತವೆ. ಅದರಂತೆ, ಅಪ್ಪ-ಮಗನ ಬಾಂಧವ್ಯ ಹೇಗೆ ಇರುತ್ತದೆ ಅನ್ನೋದನ್ನು ಸನ್ ಆಫ್ ಮುತ್ತಣ್ಣದಲ್ಲಿ ತೋರಿಸಿದ್ದೇವೆ. ನಾನು ಸ್ವಲ್ಪ ಬೆಟರ್ ಆ್ಯಕ್ಟರ್ ಆಗಿದ್ದೇನಂದ್ರೆ ಅದಕ್ಕೆ ನಿರ್ದೇಶಕರು ಕಾರಣ. ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ'' ಎಂದು ತಿಳಿಸಿದರು.

'S/O ಮುತ್ತಣ್ಣ' ಸಿನಿಮಾಗೆ ಶಿವಣ್ಣ ಸಪೋರ್ಟ್ (ETV Bharat)

ನಟಿ ಖುಷಿ ರವಿ ಮಾತನಾಡಿ, ಶಿವಣ್ಣ ನಮ್ಮ ಸಿನಿಮಾದ ಟೀಸರ್ ಲಾಂಚ್ ಮಾಡಲು ಬಂದಿರುವುದು ಖುಷಿ ಕೊಟ್ಟಿದೆ. ದೇವರಾಜ್ ಸರ್, ಅಮ್ಮ, ಪ್ರಜ್ವಲ್ ಸರ್, ರಾಗಿಣಿ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಸನ್ ಆಫ್ ಮುತ್ತಣ್ಣ ಅಪ್ಪ ಮಗನ ಎಮೋಷನಲ್​ ಕಥೆ. ಪ್ರೀತಿ ಹೇಗಿದೆ? ಅಪ್ಪ ಮಗನ ಬಾಂಧವ್ಯ ಹೇಗಿದೆ? ಎಂಬುದನ್ನು ಚಿತ್ರ ತೋರಿಸುತ್ತದೆ. ಇಡೀ ಕುಟುಂಬ ನೋಡುವಂತಹ ಸಿನಿಮಾವಿದು. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿದೆ ಎಂದು ತಿಳಿಸಿದರು.

'S/O ಮುತ್ತಣ್ಣ' ಟೀಸರ್​ ರಿಲೀಸ್​ ಈವೆಂಟ್​​ (ETV Bharat)

ಇದನ್ನೂ ಓದಿ:ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ 'ಕೆರೆಬೇಟೆ', 'ವೆಂಕ್ಯಾ' ಪ್ರದರ್ಶನ

ಕಾಡುವ 'S/O ಮುತ್ತಣ್ಣ' ಟೀಸರ್:ಎಮೋಷನ್​ನಿಂದಲೇ ಶುರುವಾಗುವ ಟೀಸರ್​ನಲ್ಲಿ ಅಪ್ಪ ಮಗನ ಬಾಂಧವ್ಯವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಟೀಸರ್​​ನಲ್ಲಿ ಡೈಲಾಗ್​ಗಳು ಕಾಡುತ್ತವೆ. ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷರ ಕಲಿಸುವ ಅಪ್ಪ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗುವ ಕ್ಯಾಪ್ಟನ್ ಆಗಿ ರಂಗಾಯಣ ರಘು ಇಷ್ಟವಾಗ್ತಾರೆ. ಅಪ್ಪನನ್ನು ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುವ ಮಗನಾಗಿ ಪ್ರಣಂ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ:ಒಂದೇ ಒಂದು ಡೈಲಾಗ್ ಇಲ್ಲ, ಶಿವಣ್ಣನ ಕಣ್ಣೋಟವೇ ಸಾಕು: ಕುತೂಹಲ ಕೆರಳಿಸಿದ 'ಭೈರತಿ ರಣಗಲ್​' ಟೀಸರ್​

ಶ್ರೀಕಾಂತ್‌ ಹುಣಸೂರು 'S/O ಮುತ್ತಣ್ಣ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪುರಾತನ‌ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎಸ್​​ಆರ್​ಕೆ ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚಿನ್ ಬಸ್ರೂರು ಸಂಗೀತವಿರುವ ಈ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದಾರೆ

ABOUT THE AUTHOR

...view details