ಸಿನಿಮಾ ಎಂಬ ಗ್ಲ್ಯಾಮರ್ ಲೋಕ ಕಣ್ಣಿಗೆ ಕಂಡಷ್ಟು ಸುಲಭವಲ್ಲ. ತೆರೆ ಮೇಲೆ ಆಕರ್ಷಕ ದೃಶ್ಯಗಳ ಮೂಲಕ ಮನರಂಜನೆ ನೀಡುವ ಸಿನಿಮಾವೊಂದರ ಹಿಂದಿರುವ ಸಂಪೂರ್ಣ ತಂಡದ ಪರಿಶ್ರಮ ನಮ್ಮ ಯೋಚನೆಗೂ ಮೀರಿದ್ದು. ತೆರೆಗೆ ಬರುವ ಅಷ್ಟೂ ಸಿನಿಮಾಗಳೂ ಯಶಸ್ಸು ಕಾಣೋದಿಲ್ಲ. ಹಲವು ಏಳುಬೀಳುಗಳ ನಂತರವೇ ಗೆಲುವಿನ ರುಚಿ ಸಿಗೋದು. ಇದು ಚಿತ್ರೋದ್ಯಮದಲ್ಲಿ ಅಕ್ಷರಶಃ ಸತ್ಯ. ಹೀಗೆ, ಚಿತ್ರರಂಗದ ಏಳುಬೀಳುಗಳ ಬಗ್ಗೆ ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿದರು.
ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಾವು ಸಿನಿಮಾ ಹಿಸ್ಟರಿ ಗಮನಿಸೋದಾದ್ರೆ 100 ಚಿತ್ರಗಳಲ್ಲಿ 5 ಗೆಲ್ಲುತ್ತವೆ. ಆ ಐದು ಚಿತ್ರಗಳಿಗೆ ಅವರು ಹಾಕಿರೋ ಹಣ ಬರುತ್ತದೆ. 90 ಸಿನಿಮಾಗಳೂ ಫೇಲೇ ಆಗಿರೋದು. ಚಿತ್ರರಂಗ ಹುಟ್ಟಿದಾಗಿನಿಂದಲೂ ಬಂದಿರೋ ಕ್ಯಾಲ್ಕುಲೇಷನ್. ಅದು ಹಾಗೇ ನಡೆಯೋದು" ಎಂದು ತಿಳಿಸಿದರು.
"ಬಹುಭಾಷೆಗಳಿಂದ ಕನ್ನಡಕ್ಕೆ ಕಾಂಪಿಟೇಷನ್ ಹೆಚ್ಚು ಸಿಗುತ್ತಿದೆ. ಈ ಸ್ಪರ್ಧೆಯನ್ನು ಎದುರಿಸಲೇಬೇಕು. ಕರ್ನಾಟಕದಲ್ಲಿ ಕನ್ನಡ ಸಿನಿಮಾ ಮಾಡಬೇಕಾದ್ರೆ ನೀವು ಹೋರಾಟ ಮಾಡಲೇಬೇಕು. ನೀವು ಪಂಚ ಭಾಷೆಗಳೊಂದಿಗೆ ಸ್ಪರ್ಧಿಸಬೇಕು. ಇದು ಖಚಿತ" ಎಂದರು.
"ಇದಕ್ಕಾಗಿ ಚಿಂತೆ ಮಾಡೋದು ಬೇಡ. ಸೋಲು, ಗೆಲುವು ಇರೋದೇ ಅಲ್ವಾ?. ನೀವು ಬೇರೆ ಭಾಷೆಯ ಸಿನಿಮಾಗಳನ್ನು ನೋಡುವವರಾದರೂ, ಗೆಲ್ಲೋದನ್ನಷ್ಟೇ ನೋಡುತ್ತೀರಾ. ಸೋತಿರುವ ಸಿನಿಮಾಗಳು ಇಲ್ಲಿಗೆ ಬರೋದೇ ಇಲ್ಲ. ಇದು ಎಷ್ಟು ಜನರಿಗೆ ಗೊತ್ತು. ಬೇರೆ ಭಾಷೆಯವರು ನಮ್ಮಂತೆಯೇ 200 ಸಿನಿಮಾಗಳನ್ನು ಮಾಡ್ತಾರೆ. ಗೆದ್ದಿರೋದಷ್ಟೇ ಇಲ್ಲಿಗೆ ಬಂದಾಗ ಬೇರೆ ಭಾಷೆಯ ಸಿನಿಮಾಗಳು ಚೆನ್ನಾಗಿವೆ, ನಮ್ಮ ಚಿತ್ರಗಳು ಚೆನ್ನಾಗಿಲ್ಲ ಅಂತಾ ಅನಿಸುತ್ತದೆ" ಎಂದು ತಿಳಿಸಿದರು.