ಕರ್ನಾಟಕ

karnataka

ETV Bharat / entertainment

ಕನ್ನಡ ಚಿತ್ರಮಂದಿರಗಳಲ್ಲಿ ಮತ್ತೆ ಪರಭಾಷಾ ಸಿನಿಮಾಗಳ ಸದ್ದು: ಕಾರಣವೇನು? - Bengaluru Theaters Condition

ರಾಜ್ಯ ರಾಜಧಾನಿಯ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಬಹುಭಾಷೆಯ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

By ETV Bharat Karnataka Team

Published : Jul 11, 2024, 2:16 PM IST

Bengaluru Famous theater
ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ (ETV Bharat)

ಬೆಂಗಳೂರಿನ ಚಿತ್ರಮಂದಿರ (ETV Bharat)

ಕನ್ನಡದ ಮೇರು ನಟರಾದ ಡಾ.ರಾಜ್​​​ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಪ್ರಭಾಕರ್, ರವಿಚಂದ್ರನ್ ಅವರ ಕಾಲದಿಂದಲೂ ಕನ್ನಡ ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು ಹಾಗು ಹಿಂದಿ ಸಿನಿಮಾಗಳ ಸದ್ದು ಜೋರಾಗಿದೆ. ಅದ್ಯಾವ ಮಟ್ಟಿಗಂದ್ರೆ, 1990ರಲ್ಲಿ ಬೆಂಗಳೂರಿನ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ತ್ರಿಭುವನ್, ಸ್ವಪ್ನ ಥಿಯೇಟರ್‌ಗಳು ಪರಭಾಷಾ ಸಿನಿಮಾಗಳ ಶಾಶ್ವತ ಚಿತ್ರಮಂದಿರಗಳಾಗಿದ್ದವು. ಆದರೆ ಕನ್ನಡ ಪ್ರೇಕ್ಷಕರು ಪರಭಾಷೆ ಸಿನಿಮಾಗಳ ಮೇಲಿನ ಒಲವು ಕಡಿಮೆ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅಭಿನಯದ 'ಶಿವಸೈನ್ಯ' ಸಿನಿಮಾ ಬಿಡುಗಡೆ ಆದಾಗ.

ಹೌದು, ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗೆ ಅವಕಾಶ ಸಿಗುತ್ತಿರಲಿಲ್ಲ. ಆ ಮಟ್ಟಿಗೆ ಪರಭಾಷಾ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದವು.

ಬೆಂಗಳೂರಿನ ಚಿತ್ರಮಂದಿರ (ETV Bharat)

'ಆರ್ಯನ್' ಸಿನಿಮಾ ನಿರ್ಮಾಪಕ ಮತ್ತು ವಿತರಕ ವಸೀಮ್ ಹೇಳುವಂತೆ, 1996ರ ಏಪ್ರಿಲ್ 26ರಂದು ಶಿವ ರಾಜ್‌ಕುಮಾರ್ ಅಭಿನಯದ 'ಶಿವಸೈನ್ಯ' ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಬಹಳ ದಿನಗಳ ನಂತರ ಶಿವಣ್ಣನ ಸಿನಿಮಾ ಇಲ್ಲಿ ಬಿಡುಗಡೆ ಆಗಿದೆ ಎಂದು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದರು. ಈ ಸಿನಿಮಾ ಆರಂಭಕ್ಕೂ ಮುನ್ನ ಕಮಲ್ ಹಾಸನ್ ಅಭಿನಯದ ಇಂಡಿಯನ್ ಸಿನಿಮಾದ ಟ್ರೇಲರ್ ಹಾಕಲಾಗಿತ್ತು. ಆಗ ಅಭಿಮಾನಿಗಳು ಕನ್ನಡ ಚಿತ್ರ ಹಾಕಿರಬೇಕಾದ್ರೆ ತಮಿಳು ಚಿತ್ರದ ಟ್ರೇಲರ್ ಹಾಕಿದ್ದೀರಾ ಎಂದು ರೊಚ್ಚಿಗೆದ್ದು ಚಿತ್ರಮಂದಿರವನ್ನು ಹಾನಿಗೊಳಿಸಿದ್ದರು. ಈ ಘಟನೆಯಿಂದ ಶಿವಸೈನ್ಯ ಸಿನಿಮಾದ ಮೊದಲ‌ ಶೋ ಸೇರಿದಂತೆ ಇಡೀ ದಿನದ ಶೋ ಕ್ಯಾನ್ಸಲ್ ಆಗಿತ್ತು.

ಅಂದಿನಿಂದ ಸಂತೋಷ್, ನರ್ತಕಿ, ಸ್ವಪ್ನ ಥಿಯೇಟರ್‌ಗಳಲ್ಲಿ ತಮಿಳು ಸಿನಿಮಾಗಳನ್ನು ಹಾಕಬಾರದೆಂದು ಚಿತ್ರಮಂದಿರದ ಮಾಲೀಕರು ತೀರ್ಮಾನಿಸಿದರು. ಆದರೆ ಈ ಘಟನೆ ನಡೆದು ಒಂದು ತಿಂಗಳ ಬಳಿಕ ಅಂದ್ರೆ, 1996 ಮೇ 9ರಂದು ಕಮಲ್ ಹಾಸನ್ ನಟನೆಯ ಇಂಡಿಯನ್ ಸಿನಿಮಾವನ್ನು ಇದೇ ನರ್ತಕಿಯಲ್ಲಿ ರಿಲೀಸ್ ಮಾಡಲು ರೆಡಿಯಾಗಿದ್ದರು. ಆದರೆ ಅಭಿಮಾನಿಗಳ ಹೋರಾಟದಿಂದ ಅಂದು ಇಂಡಿಯನ್ ಚಿತ್ರ ಬಿಡುಗಡೆ ಆಗಿರಲಿಲ್ಲ. ಕಾಕತಾಳೀಯ ಎಂಬಂತೆ, 28 ವರ್ಷಗಳ ಬಳಿಕ ಇದೇ ನರ್ತಕಿ ಚಿತ್ರಮಂದಿರದಲ್ಲಿ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾ ಬಿಡುಗಡೆ ಆಗುತ್ತಿದೆ.

ಬೆಂಗಳೂರಿನ ಚಿತ್ರಮಂದಿರ (ETV Bharat)

ಈ ಮೂಲಕ 1990ರಲ್ಲಿದ್ದ ಪರಭಾಷೆಯ ಸಿನಿಮಾಗಳ ಅಬ್ಬರ ಮತ್ತೆ ಇದೇ ಕೆ.ಜಿ.ರಸ್ತೆಯಲ್ಲಿ ಶುರುವಾಗುತ್ತಿದೆ. 90ರ ದಶಕದಲ್ಲಿ ಕೆ.ಜಿ.ರಸ್ತೆಯಲ್ಲಿರುವ ಚಿತ್ರಮಂದಿರಗಳಲ್ಲಿ ತಮಿಳು, ಹಿಂದಿ ಹಾಗೂ ತೆಲುಗು ಸಿನಿಮಾಗಳ ಹವಾ ಹೇಗಿತ್ತು ಎಂಬುದರ ಹಿನ್ನಲೆ ನೋಡಿದ್ರೆ ಆಶ್ಚರ್ಯ ಆಗುತ್ತೆ. 1993ರಲ್ಲಿ ಇದೇ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಪಕ್ಕದ ಸ್ವಪ್ನ ಚಿತ್ರಮಂದಿರಲ್ಲಿ ಪ್ರಭುದೇವ ಹಾಗೂ ನಗ್ಮಾ ಅಭಿನಯದ ತಮಿಳಿನ ಕಾದಲನ್ ಸಿನಿಮಾ ಬಿಡುಗಡೆಯಾಗಿ 25 ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಚಿತ್ರಮಂದಿರಗಳ ಮಾಲೀಕರ ಜೇಬು ತುಂಬಿಸಿತ್ತು.

ಇಂದಿನ ಡಿ ಮಾರ್ಟ್ ಜಾಗದಲ್ಲಿ ತ್ರಿಭುವನ್ ಚಿತ್ರಮಂದಿರ ಇತ್ತು. ಈ ಥಿಯೇಟರ್​​ನಲ್ಲಿ ಅರ್ಜುನ್ ಸರ್ಜಾ ಅಭಿನಯದ ತಮಿಳಿನ ಜಂಟಲ್ ಮ್ಯಾನ್ ಚಿತ್ರ 100 ದಿನ ಯಶಸ್ವಿ ಪ್ರದರ್ಶನಗೊಂಡಿತ್ತು. ಹಾಗೆಯೇ, ಸಂತೋಷ್ ಚಿತ್ರಮಂದಿರದಲ್ಲಿ ಅರವಿಂದ್ ಸ್ವಾಮಿ ಅಭಿನಯದ ಬಾಂಬೆ ಚಿತ್ರ ಕೂಡ 100 ದಿನ ಪ್ರದರ್ಶನಗೊಂಡಿತ್ತು. ಇದೀಗ ನರ್ತಕಿ, ಸಂತೋಷ್ ಹಾಗೂ ಸ್ವಪ್ನ ಚಿತ್ರಮಂದಿರಗಳಲ್ಲಿ ಮತ್ತೆ ಪರಭಾಷೆಯ ಚಿತ್ರಗಳು ಅಬ್ಬರಿಸಲು ರೆಡಿಯಾಗಿವೆ.

ಇದನ್ನೂ ಓದಿ:ನಾಳೆ ಶಿವ ರಾಜ್​ಕುಮಾರ್​​ ಬರ್ತ್​ಡೇ: ಅಭಿಮಾನಿಗಳಿಗೆ '45' ಪ್ರೇಮದ ಕಾಣಿಕೆ - 45 Cinema First Look

ಇದೇ ಜುಲೈ 12ಕ್ಕೆ ಅಂದರೆ ನಾಳೆ ಕಮಲ್ ಹಾಸನ್ ಅಭಿನಯದ ಹಾಗೂ ಎಸ್.ಶಂಕರ್ ನಿರ್ದೇಶನದ ಇಂಡಿಯನ್ 2 ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಳಿಕ ವಿಜಯ್ ನಟನೆಯ ಹಾಗು ವೆಂಕಟ್ ಪ್ರಭು ನಿರ್ದೇಶನದ Goat​, ಅಜಿತ್ ನಟನೆಯ ಹಾಗೂ ಮಿಜ್ ತಿರುಮೇನಿ ನಿರ್ದೇಶನದ ವಿಡತಲಿ, ರಜನಿಕಾಂತ್ ಅಭಿನಯದ ವೆಟ್ಟೈಯನ್ ಸಿನಿಮಾಗಳು ಬಿಡುಗಡೆಗೆ ಸಾಲಿನಲ್ಲಿವೆ.

ಇದನ್ನೂ ಓದಿ:100 ವರ್ಷದ ಮನೆಯಲ್ಲಿ 'ಫಾದರ್' ಚಿತ್ರೀಕರಣ: ತಂದೆ-ಮಗನ ಪಾತ್ರದಲ್ಲಿ ಪ್ರಕಾಶ್‍ ರಾಜ್​, ಡಾರ್ಲಿಂಗ್‍ ಕೃಷ್ಣ - Father Shooting

ಪರಭಾಷಾ ಚಿತ್ರಗಳ ಸದ್ದು ಹೆಚ್ಚಾಗುತ್ತಿರುವ ಬಗ್ಗೆ ನಿರ್ಮಾಪಕ ಹಾಗು ವಿತರಕ ವಸೀಮ್ ಪ್ರತಿಕ್ರಿಯಿಸಿ, "ಮೊದಲನೇಯ ಕಾರಣ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಎರಡು ವರ್ಷವಾದರೂ ಸಿನಿಮಾ ಮಾಡದೇ ಇರೋದು. ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಹಿನ್ನೆಲೆಯಲ್ಲಿ ಕೇವಲ ಕನ್ನಡ ಭಾಷೆಯ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಎರಡನೇ ಕಾರಣ. ಹಾಗಾಗಿ ತೆಲುಗು, ತಮಿಳು, ಹಿಂದಿಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಒಂದು ಕಾಲದಲ್ಲಿ ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಈಗ ಅವಕಾಶವಿದೆ. ಆದರೂ ತಮ್ಮದೇ ಭಾಷೆಯ ಸಿನಿಮಾಗಳನ್ನು ತಂದು ರಿಲೀಸ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಕಾಟಾಚಾರಕ್ಕೆ ಕೆಲ ಸಿನಿಮಾಗಳನ್ನು ಕನ್ನಡಕ್ಕೂ ಡಬ್ ಮಾಡುತ್ತಿದ್ದಾರೆ. ಆದರೆ ಹೆಚ್ಚು ಶೋಗಳನ್ನು ಕೊಡಲ್ಲ. ನಾಮಕಾವಸ್ತೆಗೆ ಒಂದೆರಡು ಶೋ ಕೊಟ್ಟು ಸುಮ್ಮನಾಗುತ್ತಾರೆ. ಹೀಗಿದ್ದಾಗ ಸಿನಿಮಾ ಪ್ರೇಕ್ಷಕರು ಕೂಡ ಚಿತ್ರಮಂದಿರದ ಕಡೆ ಬರುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಚಿತ್ರಮಂದಿರದ ಮಾಲೀಕರು ತಮಿಳು, ಹಿಂದಿ, ತೆಲುಗು ಚಿತ್ರಗಳನ್ನು ಹಾಕಲು ಮುಂದಾಗುತ್ತಿದ್ದಾರೆ. ಈ ಮೂಲಕ ಥಿಯೇಟರ್​ನಲ್ಲಿ ಹೆಚ್ಚು ಕಲೆಕ್ಷನ್‌ ಆಗುತ್ತದೆ" ಎಂದರು.

ABOUT THE AUTHOR

...view details