ಕರ್ನಾಟಕ

karnataka

ETV Bharat / entertainment

ಯೋಗರಾಜ್ ಭಟ್ 'ಕುಲದಲ್ಲಿ ಕೀಳ್ಯಾವುದೋ' ಕಥೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನು ಹೀರೋ

ಮಡೆನೂರ್ ಮನು ನಟನೆಯ ಮತ್ತೊಂದು ಚಿತ್ರ ಸೆಟ್ಟೇರಿದೆ. 'ಕುಲದಲ್ಲಿ ಕೀಳ್ಯಾವುದೋ' ಎಂಬುದು ಈ ಚಿತ್ರದ ಶೀರ್ಷಿಕೆ.

By ETV Bharat Karnataka Team

Published : 6 hours ago

kuladalli keelyavudo
'ಕುಲದಲ್ಲಿ ಕೀಳ್ಯಾವುದೋ' ಮುಹೂರ್ತ ಸಮಾರಂಭ (ETV Bharat)

ಕಾಮಿಡಿ ಶೋಗಳ ಮೂಲಕ ಕನ್ನಡಿಗರ ಮನಗೆಲ್ಲುವ ಹಾಸ್ಯನಟರು ಒಂದು ಕೈ ನೋಡೇ ಬಿಡೋಣ ಅಂತಾ ಚಿತ್ರರಂಗ ಪ್ರವೇಶಿಸುತ್ತಾರೆ. ಈ ಬಣ್ಣದ ಲೋಕ ಕೆಲವರನ್ನು ಅಪ್ಪಿಕೊಂಡ್ರೆ, ಹಲವರು ಹಿಂದಿರುಗುತ್ತಾರೆ. ಈ ಹಿಂದೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನು ಅವರು 'ಕೇದಾರ್‌ನಾಥ್‌ ಕುರಿ ಫಾರಂ' ಎಂಬ ಸಿನಿಮಾ ಮೂಲಕ ಬಂದಿದ್ದರು. ಆದ್ರೆ ಈ ಚಿತ್ರ ಅಷ್ಟೊಂದು ಗಮನ ಸೆಳೆಯಲಿಲ್ಲ. ಈ ಸಿನಿಮಾ ಬಿಡುಗಡೆ ಬೆನ್ನಲ್ಲೇ ಇದೀಗ ಮಡೆನೂರ್ ಮನು ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ.

ಈ ಚಿತ್ರದ ಮುಹೂರ್ತ ಸಮಾರಂಭ ನವರಾತ್ರಿಯ ಶುಭ ಸಂದರ್ಭ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

'ಕುಲದಲ್ಲಿ ಕೀಳ್ಯಾವುದೋ' ಚಿತ್ರೀಕರಣ ಚುರುಕು (ETV Bharat)

ಸಿನಿಮಾವನ್ನು ಯೋಗರಾಜ್ ಸಿನಿಮಾಸ್ ಅರ್ಪಿಸಲಿದೆ. ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ ಮತ್ತು ವಿದ್ಯಾ ಅವರು ನಿರ್ಮಾಣ ಮಾಡಲಿದ್ದಾರೆ. ಕೆ.ರಾಮನಾರಾಯಣ್ ನಿರ್ದೇಶನದಲ್ಲಿ ಕುಲದಲ್ಲಿ ಕೀಳ್ಯಾವುದೋ ಮೂಡಿಬರಲಿದ್ದು, ಮಡೆನೂರ್ ಮನು ಪ್ರಮುಖ ಪಾತ್ರ ವಹಿಸಿದ್ದಾರೆ.

ನಿರ್ಮಾಪಕಿ ವಿದ್ಯಾ ಅವರೇ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಸಂತೋಷ್ ಕುಮಾರ್ ಎ.ಕೆ, ನಿರ್ದೇಶಕ ಕೆ. ರಾಮನಾರಾಯಣ್, ನಾಯಕ ಮಡೆನೂರು ಮನು ಹಾಗೂ ನಾಯಕಿ ಮೌನ ಗುಡ್ಡೆಮನೆ ಸೇರಿದಂತೆ ಹಲವರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ರಾಮನಗರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಮಡೆನೂರು ಮನು ಜೊತೆ ಮೌನ ಗುಡ್ಡೆಮನೆ (ETV Bharat)

ಇದನ್ನೂ ಓದಿ:ಯುವ ದಸರಾ: ರವಿ ಬಸ್ರೂರು ಮ್ಯೂಸಿಕ್​​ಗೆ ಕುಣಿದು ಕುಪ್ಪಳಿಸಿದ ಜನತೆ; ಪ್ರೇಕ್ಷಕರ ಮನಗೆದ್ದ ವಿವಿಧ ತಂಡಗಳು

ಮಡೆನೂರ್ ಮನು, ಮೌನ ಗುಡ್ಡೆಮನೆ, ದಿಗಂತ್, ಸೋನಾಲ್ ಮೊಂತೆರೋ, ಶರತ್ ಲೋಹಿತಾಶ್ವ, ತಬಲ ನಾಣಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ 50ರ ಸಂಭ್ರಮ: ಪ್ರೇಕ್ಷಕರೇ ದೇವರೆಂದ ಗೋಲ್ಡನ್ ಸ್ಟಾರ್ ಗಣೇಶ್

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಸದ್ಯ ಸೆಟ್ಟೇರಿರುವ ಕುಲದಲ್ಲಿ ಕೀಳ್ಯಾವುದೋ ಮುಂದಿನ ವರ್ಷ ತೆರೆಕಾಣುವ ಯೋಜನೆ ಹಾಕಿಕೊಂಡಿದೆ.

ABOUT THE AUTHOR

...view details