ಕರ್ನಾಟಕ

karnataka

'ಪ್ರಶಸ್ತಿ ರಿಷಬ್​ ಶ್ರಮಕ್ಕೆ ಸಿಕ್ಕ ಪ್ರತಿಫಲ': ಕಾಂತಾರದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದ ಮಾನಸಿ ಸುಧೀರ್ ಮನದಾಳ - Kantara Actress Manasi Sudheer

By ETV Bharat Karnataka Team

Published : Aug 17, 2024, 5:19 PM IST

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಬ್ಲಾಕ್​ಬಸ್ಟರ್​​ ಚಿತ್ರ 'ಕಾಂತಾರ'ವು 'ಅತ್ಯುತ್ತಮ ನಟ' ಹಾಗೂ ಅತ್ಯುತ್ತಮ 'ಮನರಂಜನಾ ಚಿತ್ರ' ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಚಿತ್ರದಲ್ಲಿ ನಾಯಕ ನಟ ರಿಷಬ್ ಶೆಟ್ಟಿ (ಶಿವ) ಅವರ ತಾಯಿಯ ಪಾತ್ರ ನಿರ್ವಹಿಸಿದ್ದ ಮಾನಸಿ ಸುಧೀರ್ ಅವರೀಗ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Kantara actress Manasi Sudheer
ನಟಿ ಮಾನಸಿ ಸುಧೀರ್ (ETV Bharat)

ನಟಿ ಮಾನಸಿ ಸುಧೀರ್ (ETV Bharat)

ಉಡುಪಿ: ಶುಕ್ರವಾರದಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಹೆಸರು ಘೋಷಣೆ ಆಗಿದೆ. 2022ರ ಭಾರತೀಯ ಚಿತ್ರರಂಗದಲ್ಲಿನ ಸಾಧನೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ವಿಜೇತರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಾಂತಾರ, ಕೆಜಿಎಫ್​ 2, ಮಧ್ಯಂತರ ಸಿನಿಮಾಗಳು ಗೆಲುವಿನ ನಗೆ ಬೀರಿವೆ. ನಿರೀಕ್ಷೆಯಂತೆ ಸ್ಯಾಂಡಲ್​​​ವುಡ್​ನ ಬ್ಲಾಕ್​ಬಸ್ಟರ್​​​​ 'ಕಾಂತಾರ' ದೊಡ್ಡ ಮಟ್ಟಿನ ಸಾಧನೆ ಮಾಡಿದೆ.

2022ರ ಸೆಪ್ಟೆಂಬರ್​​​ 30ರಂದು ಚಿತ್ರಮಂದಿರ ಪ್ರವೇಶಿಸಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡ 'ಕಾಂತಾರ' ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ 'ಅತ್ಯುತ್ತಮ ನಟ' ಹಾಗೂ ಅತ್ಯುತ್ತಮ 'ಮನರಂಜನಾ ಚಿತ್ರ' ಗೌರವಕ್ಕೆ ಪಾತ್ರವಾಗಿದೆ. ಈ ಬಗ್ಗೆ ರಿಷಬ್​ ಸೇರಿದಂತೆ ಸಂಪೂರ್ಣ ಚಿತ್ರತಂಡ, ಸ್ಯಾಂಡಲ್​​​ವುಡ್​ ಖ್ಯಾತನಾಮರು ಹಾಗೂ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರದಲ್ಲಿ ನಾಯಕ ನಟ ರಿಷಬ್ ಶೆಟ್ಟಿ (ಶಿವ) ಅವರ ತಾಯಿಯ ಪಾತ್ರ ನಿರ್ವಹಿಸಿದ್ದ ಮಾನಸಿ ಸುಧೀರ್ ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ನಟಿ ಮಾನಸಿ ಸುಧೀರ್, ವರಮಹಾಲಕ್ಷ್ಮಿ ಹಬ್ಬದಂದು ನಮ್ಮ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರುವುದು ತುಂಬಾನೇ ಖುಷಿ ಕೊಟ್ಟಿದೆ. ನಮ್ಮ ಚಿತ್ರಕ್ಕೆ 'ಅತ್ಯುತ್ತಮ ನಟ' ಹಾಗೂ ಅತ್ಯುತ್ತಮ 'ಮನರಂಜನಾ ಚಿತ್ರ' ಪ್ರಶಸ್ತಿಗಳು ಲಭಿಸಿರುವುದು ಬಹಳ ಸಂತಸದ ವಿಚಾರ. ನನಗೇನೆ ಪ್ರಶಸ್ತಿ ಬಂದಿರುವಷ್ಟು ಖುಷಿ ಆಗುತ್ತಿದೆ. ಏಕಂದ್ರೆ ಕಾಂತಾರದಲ್ಲಿ ನಾನೂ ಕೂಡಾ ಭಾಗಿಯಾಗಿದ್ದೆ. ರಿಷಬ್ ಸರ್​ಗೆ ಅಭಿನಂದನೆ ಜೊತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ, ಚಿತ್ರಕ್ಕೆ ಶ್ರಮ ಹಾಕಿರುವ ಪ್ರತಿಯೊಬ್ಬರಿಗೆ ಮತ್ತು ಹೊಂಬಾಳೆ ಫಿಲ್ಮ್ಸ್​​​ಗೂ ಕೃತಜ್ಞತೆ ಜೊತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:''ರಾಷ್ಟ್ರ ಪ್ರಶಸ್ತಿಯನ್ನು ಕನ್ನಡಿಗರು, ದೈವ ನರ್ತಕರು, ಅಪ್ಪು​​ ಸರ್​​ಗೆ ಅರ್ಪಿಸುತ್ತೇನೆ'': ರಿಷಬ್​ ಶೆಟ್ಟಿ - Rishab Shetty

ಅವಾರ್ಡ್ ಘೋಷಣೆಯಾದ ಕೂಡಲೇ ಕಾಂತಾರ ಚಿತ್ರದ ಎಲ್ಲಾ ಕ್ಷಣಗಳು ನೆನಪಾದವು. 40 ದಿನಗಳ ಕಾಲ ಶೂಟಿಂಗ್​​ ಸೆಟ್​ನಲ್ಲಿದ್ದೆ. ಆ ಎಲ್ಲಾ ಅನುಭವಗಳು ಕಣ್ಣ ಮುಂದೆ ಬಂದವು. ಚಿತ್ರೀಕರಣದ ಸಂದರ್ಭದಲ್ಲಿನ ನನ್ನ ಮೊದಲ ದೃಶ್ಯ ನೆನಪಿಗೆ ಬಂತು. ಈ ಸಂಭ್ರಮವನ್ನು ಆಚರಿಸಲು ಇಡೀ ತಂಡ ಒಟ್ಟಿಗೆ ಸೇರುತ್ತಾರಾ? ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ. ಈ ಪ್ರಶಸ್ತಿ ಲಭಿಸಿದ್ದು ರಿಷಬ್​ ಸರ್​ ಶ್ರಮಕ್ಕೆ ಎಂದು ನಾನು ನಂಬಿದ್ದೇನೆ. ಶ್ರಮಕ್ಕೆ ಸಿಕ್ಕ ಪ್ರತಿಫಲ. ಚಿತ್ರದಲ್ಲಿ ರಿಷಬ್​ ಸರ್ ನಟನೆ, ನಿರ್ದೇಶನದ ಜವಾಬ್ದಾರಿ ಹೊತ್ತು ಚಾಲೆಂಜಿಂಗ್​ ರೋಲ್​ ನಿಭಾಯಿಸಿದ್ದರು. ಸಾಕಷ್ಟು ಒತ್ತಡವಿತ್ತು. ಅದನ್ನು ಬ್ಯಾಲೆನ್ಸ್​​ ಆಗಿ ನಿಭಾಯಿಸುತ್ತಾ ಪ್ರತೀ ಸೀನ್​ ಅನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿದ್ದವು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಸಿಗುವ ಬಗ್ಗೆ ಭರವಸೆ ಇತ್ತು. ಇದೀಗ ಅವಾರ್ಡ್ ಸಿಕ್ಕಿರುವುದು ನಮ್ಮ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮಾನಸಿ ಸುಧೀರ್​ ಸಂತಸ ಹಂಚಿಕೊಂಡರು.

ಇದನ್ನೂ ಓದಿ:'ಕಾಂತಾರ ಶೂಟಿಂಗ್ ಬಹಳ ನಿಗೂಢವಾಗಿರುತ್ತಿತ್ತು': ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರದ ಪೋಷಕ ನಟರು ಅಚ್ಯುತ್, ಪ್ರಮೋದ್ - Achyuth Kumar Pramod Shetty

ABOUT THE AUTHOR

...view details