ಕರ್ನಾಟಕ

karnataka

ಬೆಳ್ಳಿ ತೆರೆಮೇಲೆ ದೇಶಪ್ರೇಮ ಸಾರಿದ ಕನ್ನಡ ಚಿತ್ರಗಳ ಮೆಲುಕು ನೋಟ - Kannada Patriotic Movies

By ETV Bharat Karnataka Team

Published : Aug 15, 2024, 6:21 AM IST

ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳ ಬಗ್ಗೆ ಹಲವು ಸಿನಿಮಾಗಳು ಮೂಡಿಬಂದಿವೆ. 2024ರ ಸ್ವಾತಂತ್ರ್ಯ ದಿನದ ಅಂಗವಾಗಿ, ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳ ಕುರಿತ ಒಂದು ಮೆಲುಕು ನೋಟ ಇಲ್ಲಿದೆ.

Kannada Patriotic Movies poster
ದೇಶಪ್ರೇಮ ಸಾರಿದ ಕನ್ನಡ ಚಿತ್ರಗಳ ಪೋಸ್ಟರ್ಸ್ (Film poster)

ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶ ಪ್ರೇಮ ಸಾರುವ ಹಲವು ಸಿನಿಮಾಗಳು ಸದ್ದು ಮಾಡಿವೆ. 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ, ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳ ಕುರಿತ ಒಂದು ಮೆಲುಕು ನೋಟ ಇಲ್ಲಿದೆ.

ಕಿತ್ತೂರು ಚೆನ್ನಮ್ಮ: 1961ರಲ್ಲಿ ತೆರೆಕಂಡು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ.ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಚಿತ್ರವಿದು. ಈ ಚಿತ್ರದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮಳ ಕಥೆಯನ್ನು ಹೇಳಲಾಗಿದೆ. ವಿಶೇಷ ಪಾತ್ರದಲ್ಲಿ ಡಾ. ರಾಜ್​​ಕುಮಾರ್ ಕೂಡ ನಟಿಸಿದ್ದರು. ಖ್ಯಾತ ನಿರ್ದೇಶಕ ಬಿ.ಆರ್ ಪಂತಲ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಮುತ್ತಿನ ಹಾರ: ಈ ಚಿತ್ರದ ಬಳಿಕ ತೆರೆಕಂಡ ದೇಶಪ್ರೇಮ ಕುರಿತಾದ ಮತ್ತೊಂದು ಸಿನಿಮಾ 'ಮುತ್ತಿನ ಹಾರ'. ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ವೀರ ಸೈನಿಕನ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

ಮುತ್ತಿನ ಹಾರ ಪೋಸ್ಟರ್ (Film poster)

ತಾಯಿ ಸಾಹೇಬ: ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕಥೆಯನ್ನು ಆಧರಿಸಿ ಬಂದ ಮಗದೊಂದು ಕನ್ನಡ ಸಿನಿಮಾ 'ತಾಯಿ ಸಾಹೇಬ'. ಖ್ಯಾತ ನಟಿ ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ್ಯ ಪೂರ್ವ ಹಾಗೂ ಭೂಚಳವಳಿ ಬಗ್ಗೆ ವಿವರಿಸಿದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಈ ಚಿತ್ರವು ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಪ್ರೇಕ್ಷಕರ ಮೆಚ್ಚುಗೆಗೆ ಈ ಚಿತ್ರ ಪಾತ್ರವಾಗಿತ್ತು.

ವೀರಪ್ಪನಾಯ್ಕ: ಮುತ್ತಿನ ಹಾರ ಚಿತ್ರದ ಬಳಿಕ ವಿಷ್ಣುವರ್ಧನ್ ಮತ್ತೆ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುರ್ಧನ್ ಅವರು ಈ ಚಿತ್ರದಲ್ಲಿ ಕೊಲೆ ಮಾಡುವುದನ್ನು ಊಹಿಸಲೂ ಅಸಾಧ್ಯ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್.ನಾರಾಯಣ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.

ಹಗಲು ವೇಷ: ಲವರ್ ಬಾಯ್ ಹಾಗೂ ಹಳ್ಳಿ ಹುಡುಗನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ 'ಹಗಲು ವೇಷ' ಸಿನಿಮಾದಲ್ಲಿ ದೇಶಪ್ರೇಮಿಯ ಪಾತ್ರದಲ್ಲಿ ಮಿಂಚಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲುವೇಷ ಚಿತ್ರ ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧರಿಸಿದೆ. ಚಿತ್ರದಲ್ಲಿ ಶಿವರಾಜ್​​ಕುಮಾರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 24, 2000ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.

ವಂದೇ ಮಾತರಂ ಪೋಸ್ಟರ್ (Film poster)

ವಂದೇ ಮಾತರಂ: ಇನ್ನು 2001ರಲ್ಲಿ ತೆರೆಕಂಡು ಸೂಪರ್ ಸಕ್ಸಸ್ ಕಂಡ ಸಿನಿಮಾ 'ವಂದೇ ಮಾತರಂ'. ರೆಬೆಲ್ ಸ್ಟಾರ್ ಅಂಬರೀಶ್​ ಹಾಗೂ ತೆಲುಗಿನ ಖ್ಯಾತ ನಟಿ ವಿಜಯಶಾಂತಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ, ನವ ಪೀಳಿಗೆಯ ಯುವಕರನ್ನು ಹೇಗೆ ಬ್ರೈನ್ ವಾಶ್​ ಮಾಡಿ, ಉಗ್ರಗಾಮಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಓಂಪ್ರಕಾಶ್ ರಾವ್ ಈ ಸಿನಿಮಾ ನಿರ್ದೇಶನ ಮಾಡಿದ್ದರು.

1944:ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಮತ್ತೊಂದು ದೇಶಪ್ರೇಮ ಕಥೆಯಾಧಾರಿತ ಸಿನಿಮಾ '1944'. ನಟ ನವೀನ್​ ಕೃಷ್ಣ ಹಾಗೂ ಶೃತಿ ಮುಖ್ಯಭೂಮಿಕೆಯಲ್ಲಿದ್ದ ಚಿತ್ರವಿದು. ಎನ್.ಎಸ್. ರಾವ್ ನಿರ್ದೇಶಿಸಿರುವ ರೊಟ್ಟಿ ಋಣ ನಾಟಕ ಆಧರಿಸಿದ್ದ ಸಿನಿಮಾ ಇದಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟದ ಕಥೆಯನ್ನು 1944 ಸಿನಿಮಾ ಒಳಗೊಂಡಿದೆ. ಬದ್ರಿನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸೈನಿಕ: 2002ರಲ್ಲಿ ಪವರ್​ಫುಲ್ ಟೈಟಲ್ ಇಟ್ಟುಕೊಂಡು, ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ಚಿತ್ರ ಸೈನಿಕ. ನಟ ಹಾಗೂ ರಾಜಕಾರಣಿ ಸಿ.ಪಿ ಯೋಗೇಶ್ವರ್ ಮತ್ತು ನಟಿ ಸಾಕ್ಷಿ ಶಿವಾನಂದ್ ನಟಿಸಿದ್ದ ಸೈನಿಕ ಸಿನಿಮಾ ಕಾರ್ಗಿಲ್​ ಯುದ್ಧದ ಕಥೆಯನ್ನು ಒಳಗೊಂಡಿತ್ತು. ಮಹೇಶ್ ಸುಖಧರೆ ಈ ಸಿನಿಮಾ ನಿರ್ದೇಶಿಸಿದ್ದರು.

ಕ್ರಾಂತಿವೀರ ಪೋಸ್ಟರ್ (Film poster)

ಕ್ರಾಂತಿವೀರ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಕ್ರಾಂತಿವೀರ ಸಿನಿಮಾ ಕೂಡ ಸದ್ದು ಮಾಡಿತ್ತು. ಅದರಲ್ಲಿ ಅಜಿತ್ ಜಯರಾಜ್ ಭಗತ್ ಸಿಂಗ್ ಪಾತ್ರ ನಿರ್ವಹಿಸಿದ್ದಾರೆ. ಹೋರಾಟಗಾರ ಭಗತ್ ಸಿಂಗ್ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಆದತ್​ ಎಂ.ಪಿ ಅವರ ನಿರ್ದೇಶನವಿದೆ. ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಲಾಲಾ ಲಜಪತ್ ರಾಯ್ ಪಾತ್ರದಲ್ಲಿ ಗೀತಸಾಹಿತಿ, ನಿರ್ದೇಶಕ, ನಟ ಡಾ.ವಿ.ನಾಗೇಂದ್ರ ಪ್ರಸಾದ್, ಪೋಷಕ ಪಾತ್ರಗಳಲ್ಲಿ ಜೋ ಸೈಮನ್, ಭವಾನಿ ಪ್ರಕಾಶ್ ಹಾಗೂ ಲಕ್ಷ್ಮಣ್ ಅಭಿನಯಿಸಿದ್ದಾರೆ.

ಇದನ್ನೂ ಓದಿ:ನಾಳೆ ಸಿನಿಸುಗ್ಗಿ: ಒಂದೇ ದಿನ 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ; ಬಾಕ್ಸ್​ ಆಫೀಸ್​​ ಫೈಟ್​ ಪಕ್ಕಾ - Independence Day Box Office Clash

ಇದರ ಜೊತೆಗೆ ಮೈಸೂರು ಮಲ್ಲಿಗೆ, ಎಕೆ 47 ಸೇರಿದಂತೆ ಹಲವು ಸಿನಿಮಾಗಳು ದೇಶಪ್ರೇಮದ ಕಥಾಹಂದರವನ್ನು ಹೊಂದಿರುವ ಚಿತ್ರಗಳಾಗಿ ಪ್ರೇಕ್ಷಕರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿವೆ.

ABOUT THE AUTHOR

...view details