ಕರ್ನಾಟಕ

karnataka

ಎಡಗೈ ಬಳಕೆದಾರರ ದಿನದಂದೇ 'ಎಡಗೈಯೇ ಅಪಘಾತಕ್ಕೆ ಕಾರಣ' ಪೋಸ್ಟರ್ ಬಿಡುಗಡೆ - Edagaiye Apaghatakke Karana

By ETV Bharat Karnataka Team

Published : Aug 14, 2024, 8:26 AM IST

'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆಗೊಂಡಿದೆ. ದೂದ್ ಪೇಡಾ ದಿಗಂತ್ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ.

Edagaiye Apaghatakke Karana
ಪೋಸ್ಟರ್ (Instagram Post)

ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನದ ಅಂಗವಾಗಿ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ಅದರಂತೆಯೇ ಪೋಸ್ಟರ್ ಕೂಡ ಆಕರ್ಷಕವಾಗಿದೆ. ಸೆಟ್ಟೇರಿದ ದಿನದಂದಲೂ ಚಿತ್ರತಂಡ ವಿಭಿನ್ನ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ. ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ವಿಷಯವನ್ನೊಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸಿದ್ದು, ದಿಗ್ಗಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದಾರೆ. ಇನ್ನುಳಿದಂತೆ, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪೋಸ್ಟರ್ (Instagram Post)

ಚಿತ್ರವನ್ನು ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್​​ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮರಾ ವರ್ಕ್, ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ.

ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸಿನಿಮಂದಿರಗಳಿಗೆ ಬರಲು ಸಜ್ಜಾಗಿದೆ. ಸದ್ಯ ಚಿತ್ರತಂಡವು ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ತರಲಿದೆ.

ಇದನ್ನೂ ಓದಿ:'ಡ್ರಗ್ಸ್ ವಿಚಾರವನ್ನು ಪೊಲೀಸರ ಗಮನಕ್ಕೆ ತರುತ್ತೇನೆ, ಬೆದರಿಕೆಗೆ ಬಗ್ಗೋ ಮಗನೇ ಅಲ್ಲ': ದುನಿಯಾ ವಿಜಯ್ - Duniya Vijay On Drugs

ABOUT THE AUTHOR

...view details