ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ 'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ಹೊಸ ಗ್ರಾಮೀಣ ಸೊಗಡಿನ ಚಿತ್ರಕಥೆಯೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 'ಭರ್ಜರಿ ಗಂಡು'ಎಂದು ಟೈಟಲ್ ಇಡಲಾಗಿದೆ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಚಿತ್ರದ ಕುರಿತು ನಿರ್ದೇಶಕ ಪ್ರಸಿದ್ಧ್ ಮಾತನಾಡಿ, "ರತ್ನ ಮಂಜರಿ ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಸ್ನೇಹಿತ ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಅವರು ನಾಯಕ ಕಿರಣ್ರಾಜ್ ಸೇರಿದಂತೆ ಸಾಕಷ್ಟು ಜನ ಕಲಾವಿದರನ್ನು ಈ ಚಿತ್ರಕ್ಕಾಗಿ ನನಗೆ ಪರಿಚಯಿಸಿದರು. ಚಾಕೊಲೇಟ್ ಬಾಯ್ ಎಂದೇ ಖ್ಯಾತರಾಗಿರುವ ಕಿರಣ್ ರಾಜ್, ಈ ಚಿತ್ರದ ಮೂಲಕ ಆಕ್ಷನ್ ಹೀರೋ ಆಗುವುದಂತೂ ಖಚಿತ. ಅಷ್ಟು ಅದ್ಭುತವಾಗಿ ಸಾಹಸ ಮಾಡಿದ್ದಾರೆ. ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೇ ಕಥಾಹಂದರ" ಎಂದರು.
ಬಳಿಕ, ಕಿರಣ್ ರಾಜ್ ಮಾತನಾಡುತ್ತಾ, "ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಪ್ರಸಿದ್ದ್ ಅವರು ಬರೆದಿರುವ ಕಥೆ ಚೆನ್ನಾಗಿದೆ. ನಾನು ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ" ಎಂದು ತಿಳಿಸಿದರು.