ಕರ್ನಾಟಕ

karnataka

ETV Bharat / entertainment

ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಪಡೆದ 'ಮಧ್ಯಂತರ' ಡೈರೆಕ್ಟರ್​ ದಿನೇಶ್ ಶೆಣೈ

'ಮಧ್ಯಂತರ' ಕಿರುಚಿತ್ರದ ಡೈರೆಕ್ಟರ್​ ದಿನೇಶ್ ಶೆಣೈ ಅವರು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ತಮ್ಮ 'ಮಧ್ಯಂತರ' ಕಿರುಚಿತ್ರಕ್ಕಾಗಿ ಮೊದಲ ಚಿತ್ರದಲ್ಲೇ 'ಅತ್ಯುತ್ತಮ ನಿರ್ದೇಶಕ' (Best Debut Director) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

By ETV Bharat Entertainment Team

Published : 6 hours ago

dinesh shenoy baggs Best Debut Director award
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡ ದಿನೇಶ್ ಶೆಣೈ (ETV Bharat)

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಾನ್ ಫೀಚರ್ ಫಿಲಂ ವಿಭಾಗದ ಪ್ರಶಸ್ತಿಗಳಿಗೆ 'ಮಧ್ಯಂತರ' ಕಿರುಚಿತ್ರ ಭಾಜನವಾಗಿದೆ. ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು (ಸ್ವರ್ಣ ಕಮಲ ಪ್ರಶಸ್ತಿ) ಮಧ್ಯಂತರ ಕಿರುಚಿತ್ರ ಡೈರೆಕ್ಟರ್​​ ದಿನೇಶ್ ಶೆಣೈ ಪಡೆದುಕೊಂಡರು. ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಜೊತೆ ಸಚಿವ ಅಶ್ವಿನಿ ವೈಷ್ಣವ್​ ಉಪಸ್ಥಿತರಿದ್ದರು. 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇವಾಗಿವೆ.

ಬಂಟ್ವಾಳದ ದಿನೇಶ್ ಶೆಣೈ ಬಾಲ್ಯದಿಂದಲೂ ಸಿನಿಮಾ ಪ್ರೇಮಿ. ಕಳೆದ 27 ವರ್ಷಗಳಿಂದಲೂ ಮನರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಸಿನಿಮಾ ಕುರಿತ ಶಿಕ್ಷಣ ಕಲಿತು ಅಲ್ಲಿಯೇ ನೆಲೆ ಕಂಡುಕೊಂಡಿರುವ ದಿನೇಶ್, ಜಾಹೀರಾತುಗಳು ಮತ್ತು ಕಾರ್ಪೊರೇಟ್​ ಸಂಸ್ಥೆಗಳಿಗೆ ಕಿರುಚಿತ್ರ, ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಿದ್ದರು. ಆದ್ರೆ ಕಾರ್ಪೊರೇಟ್ ಹೊರಗೆ ಒಂದು ಅಪ್ಪಟ ಸಿನಿಮಾ ಅಥವಾ ಕಿರುಚಿತ್ರವನ್ನು ನಿರ್ಮಿಸುವುದು ಅವರ ಬಹುವರ್ಷಗಳ ಕನಸಾಗಿತ್ತು. 'ಮಧ್ಯಂತರ'ದ ಮೂಲಕ ಅವರ‌ ಕನಸು ನನಸಾಗಿದೆ.

2022ರ ಮಾರ್ಚ್ ತಿಂಗಳಲ್ಲಿ ಮಧ್ಯಂತರ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದರು ದಿನೇಶ್ ಶೆಣೈ. ಕ್ರೌಡ್ ಫಂಡಿಂಗ್ ಮೂಲಕ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಧ್ಯಂತರ ಕಿರುಚಿತ್ರವು ಅಪ್ಪಟ ಸಿನಿಪ್ರೇಮಿ ಯುವಕರಿಬ್ಬರು ಸಿನಿಮಾ ಮೋಹಕ್ಕೆ ಸಿಲುಕಿ ಸಿನಿಮಾ ನಿರ್ಮಾಣ ಜಗತ್ತಿಗೆ ಇಳಿಯುವ ಸರಳ ಕಥೆ ಒಳಗೊಂಡಿದೆ. ಸಿನಿಮಾದ ನಿರೂಪಣೆ ತಮಾಷೆಯ ಧಾಟಿಯಲ್ಲಿದ್ದರೂ ಗಂಭೀರ ವಸ್ತು ವಿಷಯ ಒಳಗೊಂಡಿದೆ.

ಇದನ್ನೂ ಓದಿ:'ಮಧ್ಯಂತರ' ಕಿರುಚಿತ್ರಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ

ಮುಖ್ಯಪಾತ್ರಗಳಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ನಟಿಸಿದ್ದಾರೆ. ಹೋಟೆಲ್ ಒಂದರಲ್ಲಿ ಸಪ್ಲೈಯರ್​ಗಳಾಗಿ ಕೆಲಸ ಮಾಡುವ ಈ ಇಬ್ಬರಿಗೂ ನಿಂತರು, ಕುಂತರೂ, ಮಲಗಿದರೂ ಕೇವಲ ಸಿನಿಮಾದ್ದೇ ಧ್ಯಾನ. ಡಾ.ರಾಜ್​ಕುಮಾರ್ ಇವರ ಮೆಚ್ಚಿನ ನಟ. ರಾಜ್​ಕುಮಾರ್ ಅವರನ್ನು ಅನುಕರಿಸುವುದೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಸಿನಿಮಾ ನೋಡಿ ಬಂದು ಅದನ್ನು ರಸವತ್ತಾಗಿ ಗೆಳೆಯರ ಬಳಿ ಹೇಳುವುದು ಇವರ ಮೆಚ್ಚಿನ ಅಭ್ಯಾಸ. ಕಥೆ ಹೇಳುವ ಕಲೆ ಇವರಿಗೆ ಕರಗತ. ಇದೇ ಪ್ರತಿಭೆಯಿಂದ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ನಿರ್ಮಾಪಕನನ್ನು ಹಿಡಿದು ಸಿನಿಮಾ ಮಾಡ್ತಾರಾ ಅನ್ನೋದೇ ಮಧ್ಯಂತರ ಕಿರುಚಿತ್ರದ ಸ್ಟೋರಿ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ:

  • ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ: ಮಧ್ಯಂತರ ಕಿರುಚಿತ್ರ ಡೈರೆಕ್ಟರ್​​ ದಿನೇಶ್ ಶೆಣೈ.
  • ಅತ್ಯುತ್ತಮ ಸಂಕಲನ: ಮಧ್ಯಂತರ ಕಿರುಚಿತ್ರ.
  • ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಸಿನಿಮಾ).
  • ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾ: ಕಾಂತಾರ.
  • ಅತ್ಯುತ್ತಮ ಆ್ಯಕ್ಷನ್​​ ಡೈರೆಕ್ಷನ್​​: ಕೆಜಿಎಫ್​ 2.
  • ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್​ 2.

ಇದನ್ನೂ ಓದಿ:ಬಡವರ ಕಷ್ಟಗಳಿಗೆ ಸ್ಪಂದಿಸುವ 'ಕಾವಲಿಗ'ನಾದ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​

ABOUT THE AUTHOR

...view details