ಕರ್ನಾಟಕ

karnataka

ಶೇ 2ರಷ್ಟು ಹೆಚ್ಚು ಮಳೆ: ಬೆಳೆ ಪ್ರದೇಶ ಹೆಚ್ಚಳ, ಹಣದುಬ್ಬರ ನಿಯಂತ್ರಣ ನಿರೀಕ್ಷೆ - SBI Research Report

By ANI

Published : Aug 5, 2024, 6:51 PM IST

ಈ ವರ್ಷ ಶೇ 2ರಷ್ಟು ಹೆಚ್ಚು ಮುಂಗಾರು ಮಳೆ ಸುರಿದಿದ್ದು, ಹಣದುಬ್ಬರ ನಿಯಂತ್ರಣದಲ್ಲಿರುವ ನಿರೀಕ್ಷೆಯಿದೆ ಎಸ್​ಬಿಐ ವರದಿ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ : ಈ ವರ್ಷ ಇಲ್ಲಿಯವರೆಗೆ ಶೇ 2ರಷ್ಟು ಹೆಚ್ಚು ಮುಂಗಾರು ಮಳೆ ಸುರಿದಿದ್ದು, ಖಾರಿಫ್ ಬೆಳೆ ಬೆಳೆಯುವ ಪ್ರದೇಶವು ವಾರ್ಷಿಕವಾಗಿ ಶೇ 2.9ರಷ್ಟು ಹೆಚ್ಚಳವಾಗಿದೆ ಹಾಗೂ ಈ ಮೂಲಕ 2024-25ರಲ್ಲಿ ಹಣದುಬ್ಬರವು ಆರ್​ಬಿಐ ನ ನಿಗದಿತ ಗುರಿಯೊಳಗೆ ಇರಲಿದೆ ಎಂದು ಎಸ್​ಬಿಐ ರಿಸರ್ಚ್ ನಿರೀಕ್ಷಿಸಿದೆ.

ಲಾ ನಿನಾ ಹವಾಮಾನ ಪರಿಸ್ಥಿತಿಗಳು ಬಲಗೊಳ್ಳುತ್ತಿರುವ ಮಧ್ಯೆ ಹೆಚ್ಚಿನ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಬಹುದು ಮತ್ತು ಇದರಿಂದ ಬೆಲೆಗಳು ಕೂಡ ಹೆಚ್ಚಾಗಬಹುದು ಎಂದು ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ನೇತೃತ್ವದಲ್ಲಿ ತಯಾರಿಸಲಾದ ಎಸ್​ಬಿಐ ಸಂಶೋಧನಾ ವರದಿ ತಿಳಿಸಿದೆ. ಸೈದ್ಧಾಂತಿಕವಾಗಿ, ಲಾ ನಿನಾ ವಾತಾವರಣವನ್ನು ಹೆಚ್ಚು ತಂಪಾಗಿಸುತ್ತದೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ತರುತ್ತದೆ.

2024-25ರಲ್ಲಿ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ 4.6 ರಿಂದ ಶೇ 4.7 ರ ಮಧ್ಯದಲ್ಲಿರಲಿದೆ ಎಂದು ವರದಿ ತಿಳಿಸಿದೆ. ಜೂನ್​ನಲ್ಲಿ ಇದು ಶೇಕಡಾ 5 ರಷ್ಟಿತ್ತು.

ಆಗಸ್ಟ್ 02, 2024 ರ ಹೊತ್ತಿಗೆ ಸಂಚಿತ ಖಾರಿಫ್ ಬಿತ್ತನೆ 905 ಲಕ್ಷ ಹೆಕ್ಟೇರ್ ಆಗಿದ್ದು, ಇದು ಪೂರ್ಣ ಋತುವಿನ ಸಾಮಾನ್ಯ ಎಕರೆವಾರು ಪೈಕಿ ಶೇಕಡಾ 82 ರಷ್ಟು ಮತ್ತು ಹಿಂದಿನ ವರ್ಷದ ಇದೇ ದಿನಾಂಕಕ್ಕೆ ಹೋಲಿಸಿದರೆ ಶೇಕಡಾ 3 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಪ್ರಮುಖ ಆಹಾರ ಧಾನ್ಯ ಉತ್ಪಾದಿಸುವ ಕೆಲ ರಾಜ್ಯಗಳಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದೆ.

ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಬಹುದು ಎಂಬ ಐಎಂಡಿಯ ಮುನ್ಸೂಚನೆಯು ಜಲಾಶಯದ ಮಟ್ಟಗಳನ್ನು ಮರುಪೂರಣ ಮಾಡಲು ಮತ್ತು ಖಾರಿಫ್ ಬಿತ್ತನೆಯ ಮತ್ತಷ್ಟು ಪ್ರಗತಿಗೆ ಉತ್ತಮವಾಗಿದೆ ಎಂದು ಎಸ್​ಬಿಐ ಸಂಶೋಧನಾ ವರದಿ ತಿಳಿಸಿದೆ. ಕೃಷಿ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದ ರೈತರು ಈ ವರ್ಷ ಇಲ್ಲಿಯವರೆಗೆ 904.60 ಲಕ್ಷ ಹೆಕ್ಟೇರ್ ನಲ್ಲಿ ಖಾರಿಫ್ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 879.22 ಲಕ್ಷ ಹೆಕ್ಟೇರ್ ಆಗಿತ್ತು. ಮತ್ತೊಂದೆಡೆ, ಹತ್ತಿ ಮತ್ತು ಸೆಣಬು, ಮೆಸ್ತಾ ಬಿತ್ತನೆ ಕಡಿಮೆಯಾಗಿದೆ.

ಭಾರತವು ಬೇಸಿಗೆ, ಖಾರಿಫ್ ಮತ್ತು ರಾಬಿ ಹೀಗೆ ಮೂರು ಬೆಳೆ ಋತುಗಳನ್ನು ಹೊಂದಿದೆ. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬಿತ್ತನೆ ಮಾಡುವ ಬೆಳೆಗಳು ಮತ್ತು ಪಕ್ವತೆಯನ್ನು ಅವಲಂಬಿಸಿ ಜನವರಿಯಿಂದ ಕೊಯ್ಲು ಮಾಡಲಾದ ಉತ್ಪನ್ನಗಳನ್ನು ರಾಬಿ ಎಂದು ಕರೆಯಲಾಗುತ್ತದೆ. ಜೂನ್-ಜುಲೈನಲ್ಲಿ ಬಿತ್ತನೆ ಮಾಡಿದ ಮತ್ತು ಮಾನ್ಸೂನ್ ಮಳೆಯ ಮೇಲೆ ಅವಲಂಬಿತವಾದ ಬೆಳೆಗಳನ್ನು ಅಕ್ಟೋಬರ್-ನವೆಂಬರ್​ನಲ್ಲಿ ಕೊಯ್ಲು ಮಾಡಲಾಗುತ್ತದೆ ಮತ್ತು ಇವನ್ನು ಖಾರಿಫ್ ಎಂದು ಕರೆಯಲಾಗುತ್ತದೆ. ರಾಬಿ ಮತ್ತು ಖಾರಿಫ್ ನಡುವೆ ಉತ್ಪಾದಿಸುವ ಬೆಳೆಗಳು ಬೇಸಿಗೆ ಬೆಳೆಗಳಾಗಿವೆ.

ಭಾರತದಲ್ಲಿ ಸುರಿಯುವ ಒಟ್ಟಾರೆ ಮಳೆಯ ಪೈಕಿ ಶೇ 70ರಷ್ಟು ನೈಋತ್ಯ ಮಾನ್ಸೂನ್ ಅವಧಿಯಲ್ಲಿಯೇ ಸುರಿಯುತ್ತದೆ. ಹೀಗಾಗಿ, ಸಕಾಲದಲ್ಲಿ ಹಾಗೂ ಸೂಕ್ತ ಪ್ರಮಾಣದ ಮಾನ್ಸೂನ್ ಮಳೆಯು ಭಾರತೀಯ ಆರ್ಥಿಕತೆಗೆ ಅತ್ಯಂತ ಮುಖ್ಯವಾಗಿದೆ. ಭಾರತದ ಜನಸಂಖ್ಯೆಯ ಸುಮಾರು 45 ಪ್ರತಿಶತದಷ್ಟು ಜನರ ಜೀವನೋಪಾಯವು ಮಳೆ ಆಧರಿಸಿರುವ ಕೃಷಿಯನ್ನೇ ಅವಲಂಬಿಸಿದೆ.

ಇದನ್ನೂ ಓದಿ : 5 ತಿಂಗಳಲ್ಲಿ ಭಾರತಕ್ಕೆ 41 ಲಕ್ಷ ವಿದೇಶಿ ಪ್ರವಾಸಿಗರ ಆಗಮನ: ₹1 ಲಕ್ಷ ಕೋಟಿಗೂ ಅಧಿಕ ಗಳಿಕೆ - Foreign Tourists Arrivals

ABOUT THE AUTHOR

...view details